i
ಯುವಕ ಯುವತಿಯರಲ್ಲಿ ಅಡಗಿರುವ ಪ್ರತಿಭೆ ಪ್ರದರ್ಶಿಸಲು ಯುವಜನೋತ್ಸವ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಯುವಕ ಯುವತಿಯರಲ್ಲಿ ಅಡಗಿರುವ ಪ್ರತಿಭೆ ಪ್ರದರ್ಶಿಸಲು ಯುವಜನೋತ್ಸವ ಉತ್ತಮ ವೇದಿಕೆಯಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಚಿತ್ರಡಾನ್ ಬೋಸ್ಕೋ ಸಭಾಂಗಣದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಅಂತರ ಕಾಲೇಜು ಚಿತ್ರದುರ್ಗ ಜಿಲ್ಲಾ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಂದಲ್ಲ ಒಂದು ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆ. ಅಂತಹ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಯುವ ಜನೋತ್ಸವದಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕ. ಮಕ್ಕಳು ಕಲೆ, ಸಾಂಸ್ಕೃತಿಕ, ಕ್ರೀಡೆ, ಸಾಮಾಜಿಕ ಕ್ಷೇತ್ರದಲ್ಲಿ ಅವಕಾಶ ಇದ್ದು ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಮರಳಿ ಬರಲು ಸಾಧ್ಯವಿಲ್ಲ. ಕಳೆದ ವಿದ್ಯಾರ್ಥಿ ಜೀವನದ ನೆನಪುಗಳು ಮಾತ್ರ ಶಾಶ್ವತ ಎಂದರು.
ಕಾಲೇಜು ಹಂತದ ನಂತರ ಅವಕಾಶಗಳು ಕಡಿಮೆ ಆಗುತ್ತವೆ. ಕುಟುಂಬ ಇತ್ಯಾದಿ ಒತ್ತಡಗಳಿಂದ ತನ್ನ ಆಸಕ್ತಿ ಕಡಿಮೆ ಆಗುತ್ತದೆ. ಆದ್ದರಿಂದ ಯುವ ಸಮೂಹಕ್ಕೆ ಸಿಕ್ಕ ಅವಕಾಶಗಳಲ್ಲಿ ಯಶಸ್ವಿಯಾಗುವ ಕಡೆ ವಿದ್ಯಾರ್ಥಿಗಳು ಗಮನ ಕೇಂದ್ರೀಕರಿಸಬೇಕು.
1957 ರಲ್ಲಿ ಅಂದಿನ ಸಿಎಂ ಕೆಂಗಲ್ ಹನುಂತಯ್ಯ ಅವರು ಯುವ ಜನೋತ್ಸವ ಮಾಡುತ್ತಿದ್ದರು. ರಾಜ್ಯದ ಎಲ್ಲಾ ಭಾಗಗಳಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸುತ್ತಿದ್ದರು. ರಾಜ್ಯದ ಇತಿಹಾಸದಲ್ಲಿ ಯಾರು ಅದನ್ನು ಇನ್ನು ಮಾಡಲು ಆಗಿಲ್ಲ.
ನಮ್ಮ ದೇಶದಲ್ಲಿ 135 ಕೋಟಿ ಜನರಿದ್ದರು ಕ್ರೀಡಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಲು ಆಗಿಲ್ಲ. ಒಲಂಪಿಕ್ ನಲ್ಲಿ ಜಿಮನಾಸ್ಟಿಕ್ ಪ್ರಶಸ್ತಿ ಬಿಟ್ಟರೆ ದೊಡ್ಡ ಸಾಧನೆ ಮಾಡಲು ಕ್ರೀಡಾ ಕ್ಷೇತ್ರಕ್ಕೆ ತರಬೇತುದಾರರ ಕೊರತೆ ಇದೆ, ಕ್ರೀಡಾಪಟುಗಳಿಗೆ ಪೌಷ್ಟಿಕ ಆಹಾರ ನೀಡಲು ಮತ್ತು ಶಿಕ್ಷಕರನ್ನು ನೇಮಿಸಿದರೆ ಮತ್ತಷ್ಟು ಸಾಧನೆ ಮಾಡಲು ಸಹಕಾರಿಯಾಗಿದೆ.
ಬರದ ನಾಡದರು ಸಹ ಚಿತ್ರದುರ್ಗ ಜಿಲ್ಲೆ ಕ್ರೀಡೆಗೆ ಕಮ್ಮಿಯಿಲ್ಲ. ರಾಜ್ಯದಲ್ಲಿ ರಾಜ್ಯ ಮಟ್ಟಕ್ಕೆ ಬಾಸ್ಕೆಟ್ ಪ್ರಥಮ ಪ್ರಶಸ್ತಿ ಪಡೆದು ಸರ್ಕಾರಿ ವಿಜ್ಞಾನ ಕಾಲೇಜು ಆ ದಿನದಲ್ಲಿ ಸಾಧನೆ ಮಾಡಿತ್ತು ಆ ಪಂದ್ಯದಲ್ಲಿ ನಾನು ಸಹ ಆಟವಾಡಿದ್ದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ ಯುವಜನೋತ್ಸವದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
ಮಕ್ಕಳು ತಮಗೆ ಜನ್ಮ ನೀಡಿದ ತಂದೆ ತಾಯಿಯನ್ನು ಎಂದಿಗೂ ಸಹ ಕಡೆಗಣಿಸಬೇಡಿ ಎಂದು ಮನವಿ ಮಾಡಿದರು.
ದಾವಣಗೆರೆ ವಿಶ್ವವಿದ್ಯಾಲಯದ ಉಪ ಕುಲಪತಿ ಬಿ.ಡಿ.ಕುಂಬಾರ್ ಮಾತನಾಡಿ ನಾನು ಉಪ ಕುಲಪತಿ ಆದ ನಂತರ ಇದಕ್ಕೆ ವಿಶ್ವವಿದ್ಯಾಲಯದಲ್ಲಿ ಮೊದಲು ಅಂತರ ಕಾಲೇಜು ಯುವಜನೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದನ್ನು ಇನ್ನು ಮುಂದೆ ಪ್ರತಿ ಮಾಡಲು ನಿರ್ಧರಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಕೊಠಡಿಯಲ್ಲಿ ಪಾಠ ಕೇಳಿ ಹೋಗುವುದಲ್ಲ. ವಿದ್ಯಾರ್ಥಿಗಳು ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರಕ್ಕೆ ಒತ್ತು ನೀಡಿ ಪ್ರೋತ್ಸಾಹ ನೀಡಲಾಗುತ್ತದೆ. ಮಕ್ಕಳು ಮಾನಸಿಕವಾಗಿ ನೆಮ್ಮದಿಯಿಂದ ಇರಲು ಸಾಂಸ್ಕೃತಿಕ ಕಾರ್ಯಕ್ರಮ ಅಗತ್ಯವಿದೆ. ಒತ್ತಡದಿಂದ ಹೊರ ತರುವ ಶಕ್ತಿ ಸಂಗೀತಕ್ಕೆ ಇದೆ. ದಾವಣಗೆರೆ ವಿಶ್ವ ವಿದ್ಯಾಲಯದ ಚಿತ್ರದುರ್ಗ , ದಾವಣಗೆರೆ ಸಿಟಿ, ದಾವಣಗೆರೆ ಜಿಲ್ಲೆ ಸೇರಿ ನಾಲ್ಕು ವಿಭಾಗಗಳು ಮಾಡಿದ್ದು ಜನವರಿ 10 ರಂದು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಎಲ್ಲಾ ವಿಭಾಗಗಳಲ್ಲಿ ಜಯಶೀಲರಾದವರಿಗೆ ಸ್ವರ್ಧೆ ಏರ್ಪಡಿಸಲಾಗಿದೆ. ಯುವಕ ಯುವತಿಯರು ನಿಮ್ಮ ಶಕ್ತಿಯನ್ನು ವೇದಿಕೆಯಲ್ಲಿ ಪ್ರದರ್ಶನ ಮಾಡಿ ತೋರಿಸಬೇಕು. ವಲಯ ಮಟ್ಟದಲ್ಲಿ ಸ್ವರ್ಧೆ ಮಾಡಿ ಗೆದ್ದವರು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ರಾಜ್ಯ ಮತ್ತು ರಾಷ್ಟ್ರದ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಂತೆ ಸಿದ್ದವಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾನ್ ಬಾಸ್ಕೋ ಸಂಸ್ಥೆಯ ಫಾದರ್ ಸಜಿ ಗಿರ್ಗಿ, ದಾವಣಗೆರೆ ವಿಶ್ವವಿದ್ಯಾಲಯದ ರಿಜಿಸ್ಟರ್ ಡಾ.ಕೆ.ಶಿವಶಂಕರ್, ಯುವಜನೋತ್ಸವದ ಸಂಯೋಜಕ ಡಾ.ಅಶೋಕ್ ಕುಮಾರ್ ಪಾಲೇಡ್, ಡಾ. ಆರ್.ಶಶಿಧರ್, ಡಾನ್ ಬೋಸ್ಕೋ ಕಾಲೇಜಿನ ಪಾಂಶುಪಾಲ ಡಾ.ಜೋಹಿ, ಡಾನ್ ಬಾಸ್ಕೋ ಕಾಲೇಜಿನ ಸಂಯೋಜನಾಧಿಕಾರಿ ಧನಕೋಟಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.