i
ಬಿಜೆಪಿ ತೆಕ್ಕೆಗೆ ಕೂನಿಕೆರೆ ಪಂಚಾಯಿತಿ, ಕಾಂಗ್ರೆಸ್ಸಿಗೆ ಮುಖಭಂಗ, ಅಧ್ಯಕ್ಷರಾಗಿ ಹುಚ್ಚವ್ವನಹಳ್ಳಿ ರಂಗಮ್ಮ ಉದಯ್ ಗೆಲುವು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಅತ್ಯಂತ ಕುತೂಹಲ ಕೆರಳಿಸಿದ್ದ ಹಿರಿಯೂರು ತಾಲೂಕಿನ ಕೂನಿಕೆರೆ ಅಧ್ಯಕ್ಷ ಹುದ್ದೆಯ ಚುನಾವಣೆ ಕೊನೆಗೂ ಲಾಟರಿ ಮೂಲಕ ಹುಚ್ಚವ್ವನಹಳ್ಳಿಯ ರಂಗಮ್ಮ ಉದಯ್ ಕುಮಾರ್ ಗೆಲುವು ಸಾಧಿಸುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು.
ಕಾಂಗ್ರೆಸ್ ಪಕ್ಷವು ಈ ಮೂಲಕ ತನ್ನ ಆಡಳಿತ ಕಳೆದುಕೊಂಡು ಮುಖಭಂಗ ಅನುಭವಿಸಿತು. 9 ಮಂದಿ ಬಿಜೆಪಿಯ ಸದಸ್ಯರಿದ್ದರು. 10 ಮಂದಿ ಕಾಂಗ್ರೆಸ್ ಸದಸ್ಯರ ಪೈಕಿ ಒಬ್ಬ ಸದಸ್ಯರ ಮತದಾನ ಅನೂರ್ಜಿತಕೊಂಡಿತ್ತು. ಮತ ಪತ್ರದಲ್ಲಿ ಹಣೆ ಹಚ್ಚುವ ಕುಂಕುಮವನ್ನು ಹಾಕಿದ್ದರಿಂದಾಗಿ ಒಬ್ಬ ಸದಸ್ಯರ ಮತದಾನ ಅನೂರ್ಜಿತವಾಯಿತು. ಆಗ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ತಲಾ 9 ಮತಗಳು ಬಂದವು.
ಆಗ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಬಿಇಒ ನಾಗಭೂಷಣ್ ಅವರು ಲಾಟರಿ ಮೂಲಕ ಚುನಾವಣೆ ಮಾಡಿದ್ದು ಹುಚ್ಚವ್ವನಹಳ್ಳಿಯ ರಂಗಮ್ಮ ಉದಯಕುಮಾರ್ ಗೆಲುವು ಸಾಧಿಸಿದರು. ಈ ಮೂಲಕ ಬಿಜೆಪಿ ತೆಕ್ಕೆಗೆ ಅಧಿಕಾರ ಬಂದಿದ್ದು ಚುನಾವಣೆ ವರ್ಷ ಆಗಿರುವುದರಿಂದ ಮಹತ್ವ ಪಡೆದುಕೊಂಡಿದೆ.
ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಕೂನಿಕೆರೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರುಗಳು, ಅಭಿಮಾನಿಗಳು ಅಧ್ಯಕ್ಷರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು. ಚುನಾವಣೆ ಬಳಿಕ ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಅಧ್ಯಕ್ಷರಿಗೆ ಪುಷ್ಪಮಾಲೆ ಅರ್ಪಿಸಿ ಅಭಿನಂದಿಸಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿಕೊಂಡಲು ಹೋಗಲು ಸೂಚನೆ ನೀಡಿದರು.