i
ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳನ್ನು ನೋಂದಾಯಿಸಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸ್ಕಿಲ್ ಕನೆಕ್ಟ್ ಪೋರ್ಟಲ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿ ಯುವಕ, ಯುವತಿಯರನ್ನು ನೊಂದಾಯಿಸಬೇಕು. ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಕಿಲ್ ಕನೆಕ್ಟ್ ಎನ್ನುವುದು ಉದ್ಯೋಗ ಪೋರ್ಟಲ್ ಆಗಿದ್ದು, ಉದ್ಯೋಗಧಾತರು ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಏಕ ಗವಾಕ್ಷಿ ವೇದಿಕೆಯಲ್ಲಿ ಸಂಪರ್ಕಿಸುವುದಾಗಿದೆ. ಜಿಲ್ಲೆಯ ಎಲ್ಲಾ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್, ಐಟಿಐ, ಇಂಜಿನಿಯರಿಂಗ್ ಕಾಲೇಜುಗಳಿಗೆ ಭೇಟಿ ನೀಡಿ, ಇನ್ನೂ ಹೆಚ್ಚು ಹೆಚ್ಚು ಉದ್ಯೋಗಾಕಾಂಕ್ಷಿಗಳನ್ನು ಪೋರ್ಟಲ್ನಲ್ಲಿ ನೋಂದಾಯಿಸಲು ಕ್ರಮವಹಿಸಬೇಕು ಎಂದರು.
ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಗೋಪಾಲರೆಡ್ಡಿ ಮಾತನಾಡಿ, ಸ್ಕಿಲ್ ಪೋರ್ಟಲ್ನಲ್ಲಿ ಇದುವರೆಗೂ 1480 ಉದ್ಯೋಗಾಕಾಂಕ್ಷಿಗಳನ್ನು ಪೋರ್ಟಲ್ನಲ್ಲಿ ನೋಂದಾಯಿಸಲಾಗಿದೆ. ಈಗಾಗಲೇ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ, ಕಾರ್ಯಗಾರ ಆಯೋಜಿಸಿ, ಮಾಹಿತಿ ನೀಡಲಾಗಿದೆ. ಜಿಲ್ಲೆಯ 12 ಕಾಲೇಜುಗಳ ಪೈಕಿ 8 ಕಾಲೇಜುಗಳಿಂದ 8000 ಪದವಿಧರರ ಮಾಹಿತಿ ಬಂದಿದ್ದು, ಸ್ಕಿಲ್ ಕನೆಕ್ಟ್ ಪೋರ್ಟಲ್ನಲ್ಲಿ ನೋಂದಾಯಿಸಲು ದೂರವಾಣಿ ಸಂಖ್ಯೆಗೆ ಸಂದೇಶ ಕಳುಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ವಿಶ್ವ ಕೌಲಶ್ಯ ಸ್ಪರ್ಧೆಗೆ ಉತ್ತಮ ತರಬೇತಿ ನೀಡಿ: ವಿಶ್ವ ಕೌಶಲ್ಯ ಸ್ಪರ್ಧೆ-2023ಕ್ಕೆ ಸ್ಪರ್ಧಿಸುವ ಜಿಲ್ಲೆಯ ಅಭ್ಯರ್ಥಿಗಳಿಗೆ ಮುಂಚಿತವಾಗಿಯೇ ಉತ್ತಮ ತರಬೇತಿ ನೀಡುವ ಮೂಲಕ ವಿಶ್ವ ಕೌಶಲ್ಯ ಸ್ಪರ್ಧೆಗೆ ಆಯ್ಕೆಯಾಗಲು ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಂಜಿಎನ್ಎಫ್ ಕಿರಣ್, ವಿಶ್ವ ಕೌಶಲ್ಯ ಸ್ಪರ್ಧೆಯು ಪ್ರಾನ್ಸ್ ದೇಶದ ಲಿಯನ್ನಲ್ಲಿ ನಡೆಯಲಿದ್ದು, ಇದಕ್ಕೆ ಪೂರಕವಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಇಂಡಿಯಾ ಸ್ಕಿಲ್ ಕರ್ನಾಟಕ-2023 ಸ್ಪರ್ಧೆ ಪ್ರಾರಂಭಿಸಿದೆ. ಪ್ರಾಥಮಿಕ ಹಂತ, ವಲಯ, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಗೆಲವು ಸಾಧಿಸುವವರಿಗೆ ನಿರಂತರ ತರಬೇತಿ ಒದಗಿಸಿ ಪ್ರಾದೇಶಿಕ ಮತ್ತು ರಾಷ್ಟಮಟ್ಟದಲ್ಲಿ ಗೆಲವು ಸಾಧಿಸಲು ಹಾಗೂ ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸಲು ವೇದಿಕೆ ಕಲ್ಪಿಸಿಕೊಡುವುದು ಇಂಡಿಯಾ ಸ್ಕಿಲ್ ಕರ್ನಾಟಕ ಸ್ಪರ್ಧೆಯ ಗುರಿಯಾಗಿದೆ. ಒಟ್ಟು 59 ವಿವಿಧ ರೀತಿಯ ಕೌಶಲ್ಯ ಸ್ಪರ್ಧೆಯಲ್ಲಿ 22 ವರ್ಷದೊಳಗಿನ ಯುವ ಜನತೆ, ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಈಗಾಗಲೇ ಜಿಲ್ಲೆಯಿಂದ ಸುಮಾರು ಸ್ಪರ್ಧಿಗಳು ತಮ್ಮ ಕೌಶಲ್ಯಕ್ಕೆ ಸಂಬಂಧಿಸಿದಂತೆ ಯೋಗ, ಕೇಶ ವಿನ್ಯಾಸ, ವೆಲ್ಡಿಂಗ್, ಆಹಾರ ಉತ್ಪನ್ನಗಳ ವಿಡಿಯೋ ಅಪ್ಲೋಡ್ ಮಾಡಿದ್ದಾರೆ ಎಂದು ಹೇಳಿದರು.
ಉಪಸಮಿತಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ: ಜಿಲ್ಲಾಮಟ್ಟದಲ್ಲಿ ಈಗಾಗಲೇ ಸೃಜಿಸಲಾಗಿರುವ ಜಿಲ್ಲಾ ಕೌಶಲ್ಯ ಮಿಷನ್ಗೆ ಪೂರಕವಾಗಿ ಹಾಗೂ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯನ್ನು ಜಿಲ್ಲಾಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ 8 ಉಪಸಮಿತಿಗಳು ಸಮನ್ವಯತೆಯಿಂದ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಯೋಜನಾ ನಿರ್ದೇಶಕ ಕೆ.ಎನ್.ಮಹಾಂತೇಶಪ್ಪ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಗೋಪಾಲರೆಡ್ಡಿ, ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ರವಿ, ಅಭಿಯಾನ ವ್ಯವಸ್ಥಾಪಕ ಅತಿಕ್ ರೆಹಮಾನ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.