i
ಮೋದಿ ಬಂದರೆ ಮೋದಿ ಮೋದಿ ಅಂತಿರಾ, ಅವರು ದೇವರೆನ್ನುತ್ತೀರಾ, ಮೋದಿ ಸರ್ವಾಧಿಕಾರಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯಕ್ಕೆ ಮೋದಿ ಬಂದರೆ ಮೋದಿ ಮೋದಿ ಅಂತಿರಾ, ಮೋದಿಯನ್ನು ದೇವರೆನ್ನುತ್ತೀರಾ, ಮೋದಿ ಒಬ್ಬ ಸರ್ವಾಧಿಕಾರಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜ್ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಐಕ್ಯತಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮದಕರಿ ನಾಯಕ- ಓಬವ್ವ ಅವರನ್ನ ಸ್ಮರಿಸಿದ ಖರ್ಗೆ ಎಸ್ಸಿ, ಎಸ್ಟಿ ಸಮಾವೇಶದಲ್ಲಿ ಇಷ್ಟು ಸಂಖ್ಯೆಯಲ್ಲಿ ಸೇರಿದ್ದು ಖುಷಿಯಾಗಿದೆ. ನಮ್ಮ ಪಕ್ಷದ ನಾಯಕರು ವಿಶಿಷ್ಟ ರೀತಿಯಲ್ಲಿ ಸಮಾವೇಶ ಆಯೋಜನೆ ಮಾಡಿದ್ದಾರೆ. ಪ್ರಸ್ತುತ ದಿನಗಳಲ್ಲಿ ಈ ಸಂಘಟನೆ ಬಹಳ ಮುಖ್ಯ. ಎಸ್ಸಿ, ಎಸ್ಟಿ ಸಮಾಜಗಳು ಛಿದ್ರ ಛಿದ್ರ ಆದರೆ ನಿಮ್ಮನ್ನ ಕೇಳುವವರಿರಲ್ಲ. ಒಗ್ಗಟ್ಟು ಇಲ್ಲ ಅಂದರೆ ತುಂಡು ತುಂಡು ಮಾಡಿ, ಡಿವೈಡ್ ಅಂಡ್ ರೂಲ್ ಮಾಡುತ್ತಿದ್ದರು. ಇದನ್ನ ನೀವು ತಲೆಯಲ್ಲಿ ಇಟ್ಟು ಕೊಳ್ಳಬೇಕು. ದೇಶದ ಪ್ರಜಾ ತಂತ್ರ ಉಳಿಸಬೇಕು ಎಂಬುದು ನಿಮ್ಮ ಗುರಿ ಆಗಬೇಕು. ಸಂವಿಧಾನದ ಉಳಿಸುವುದು ನಿಮ್ಮ ಗುರಿ ಆಗಬೇಕು ಎಂದು ಹೇಳಿದರು.
ಸಂವಿಧಾನ ಧಿಕ್ಕರಿಸಿ ಕೇಂದ್ರ ಸರ್ಕಾರ ಆಡಳಿತ ಮಾಡುವಾಗ ನಿಮಗೇನು ಸಿಗುತ್ತದೆ. ಹೀಗಾಗಿ ನೀವೆಲ್ಲರೂ ಕೂಡಾ ಒಗ್ಗಟ್ಟಿನಿಂದ ಇರಬೇಕು.
ನೀವು ಎಲ್ಲರೂ ಸೇರಿ, ದೇಶ, ಸಂವಿಧಾನ ರಕ್ಷಣೆ ಮಾಡಬೇಕು ಎಂದು ಖರ್ಗೆ ಮನವಿ ಮಾಡಿದರು.
ರಾಹುಲ್ ಗಾಂಧಿ ಜೊತೆ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಹೋಗಿದ್ದೆ.
ಲಕ್ಷಾಂತರ ಜನರು ಅವರ ಜೊತೆಗೆ ಹೆಜ್ಜೆ ಹಾಕುತ್ತಿದ್ದಾರೆ. ಪಕ್ಷದ ಕಾರ್ಯಕ್ರಮ ಅನುಷ್ಠಾನಕ್ಕೆ ತರಲು ನಾನು ಸೇರಿದ್ದೇನೆ. ನಿರುದ್ಯೋಗ, ಬೆಲೆ ಏರಿಗೆ, ನೌಕರಿ, ಕುರಿತು ನಮ್ಮ ಹೋರಾಟ ನಡೆಯಬೇಕಿದೆ. ದೇಶದಲ್ಲಿ 30 ಲಕ್ಷ ಹುದ್ದೆ ಖಾಲಿ ಇದೆ.
ಪ್ರಧಾನಿ ಮೋದಿ ಅವರು ಭರ್ತಿ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಭರ್ತಿ ಮಾಡಿದಲ್ಲಿ 15 ಲಕ್ಷ ಹುದ್ದೆಗಳು SC- ST ಜನರಿಗೆ ಸಿಗುತ್ತವೆ. ಬಡವನ ಕೈಯಲ್ಲಿ ಹಣ ಬಂದರೆ ನಮ್ಮ ಆಟ ನಡೆಯಲ್ಲ ಎಂದು ಕೇಂದ್ರ ಸರ್ಕಾರ ಹುದ್ದೆಗಳನ್ನ ಭರ್ತಿ ಮಾಡುತ್ತಿಲ್ಲ. ಕೇವಲ ದಿನಗೂಲಿ, ಹೊರಗುತ್ತಿಗೆ ಮೇಲೆ ಹುದ್ದೆಗಳನ್ನ ನೀಡುತ್ತಿದ್ದಾರೆ. ಇದನ್ನ ನಾವು ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಬೇಕು, ಕೇಂದ್ರ ಸರ್ಕಾರ ನಡೆಸುವವರು ಬಾಯಿ ಮುಚ್ಚಿಕೊಂಡು ಕುಳಿತ್ತಿದ್ದಾರೆ ಎಂದು ಆರೋಪಿಸಿದರು.
ಮೋದಿ ಬಂದರೆ ಮೋದಿ ಮೋದಿ, ಷಾ ಬಂದರೆ ಷಾ ಅಂತೀರಾ? ಇದೆನ್ನೇಲ್ಲಾ ನೀವು ಪ್ರಶ್ನೆ ಮಾಡಬೇಕಿದೆ. 2 ಕೋಟಿ ಉದ್ಯೋಗ ನೀಡಿದ್ದರಾ, 15 ಲಕ್ಷ ಅಕೌಂಟ್ ಗೆ ಹಾಕುತ್ತೇನೆ ಎಂದು ಸುಳ್ಳು ಹೇಳಿದ್ದರು. ಸುಳ್ಳು ಹೇಳಿ ಸರ್ಕಾರ ಮಾಡುತ್ತಾರೆಂದು ದೂರಿದರು.
SC- ST ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಮೋದಿ ಬಂದ್ ಮಾಡಿದ್ದಾರೆ. ಸ್ಕಾಲರ್ ಶಿಪ್ ದುಡ್ಡು ಕೂಡಾ ಬಿಡುಗಡೆ ಆಗುತ್ತಿಲ್ಲ.
ಇದಕ್ಕೆ ನಮ್ಮ ಸಮಾಜಗಳು ಯಾಕೆ ಹೋರಾಟ ಮಾಡುತ್ತಿಲ್ಲ. ಹೀಗಾಗಿ ಒಗ್ಗಟ್ಟಿನಿಂದ ಪ್ರಶ್ನೆ ಮಾಡಬೇಕಿದೆ. BR ಅಂಬೇಡ್ಕರ್ ಹೋರಾಟ ಮಾಡಿ ಗಾಂಧಿ ಜೊತೆ ಚರ್ಚಿಸಿ ಮೀಸಲಾತಿ ನೀಡಿದ್ದರು. ಅವರು ಕೊಟ್ಟ ಮೀಸಲಾತಿ ಉಳಿಸಿಕೊಳ್ಳಬೇಕು, ಸ್ವಾತಂತ್ರ್ಯ ಬಳಿಕ ನೆಹರೂ ಕ್ಯಾಬಿನೆಟ್ ನಲ್ಲಿ ಕಾನೂನು ಸಚಿವರಾಗಿ ಸಂವಿಧಾನ ನೀಡಿದ್ದಾರೆ. ಸಂವಿಧಾನ ಉಳಿಸಿ ಎಂದು ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.
ಪ್ರಗತಿಪರ ಚಿಂತಕರು ಸರ್ಕಾರ ವಿರುದ್ದ ಬರೆದರೆ ಜೈಲಿಗೆ ಕಳಿಸುತ್ತಾರೆ. ಎಷ್ಟೋ ಮಂದಿ ಮಾಧ್ಯಮಗಳು ಮೋದಿ ಬಂದಾಗ ಎಲ್ಲವನ್ನೂ ತೋರಿಸುತ್ತಾರೆ. ಮಾಲೆ ಹಾಕಿದರೂ, ಗುಹೆಯಲ್ಲಿ ಕುಳಿತರು ತೋರಿಸುತ್ತಾರೆ ಆದರೆ ನಮ್ಮ ಬಗ್ಗೆ ಮಾಧ್ಯಮಗಳು ತೋರಿಸುವುದಿಲ್ಲ ಎಂದು ದೂರಿದರು.
ಗುಜರಾತ್ ನಲ್ಲಿ ಮೋದಿ ನಾನು ಗುಜರಾತ್ ಮಣ್ಣಿನ ಮಗ ಎನ್ನುತ್ತಾರೆ. ನೀವೆಲ್ಲಾ ಸೇರಿ ನಾವು ಕರ್ನಾಟಕದವರು ತಾನೇ ನೀವು ನಮ್ಮನ್ನ ಎತ್ತಬೇಕಲ್ಲ. ನಾವು ಕೂಡಾ ಕರ್ನಾಟಕದ ಮಣ್ಣಿನ ಮಕ್ಕಳು ಇದ್ದೇವೆ. ಗುಜರಾತ್ ನಾಯಕರನ್ನ ನಾವು ತಲೆ ಮೇಲೆ ಇಟ್ಟುಕೊಂಡು ನಡೆಸಿಕೊಂಡಿದ್ದೇವೆ. ಮಹಾತ್ಮ ಗಾಂಧಿ ಅವರನ್ನು ಮೊದಲಿನ ಸ್ಥಾನ ನೀಡಿದ್ದೇವೆ. ಸರ್ಧಾರ್ ವಲ್ಲಾಬಾಯ್ ಪಟೇಲ್ ಗುಜರಾತ್ ನವರು. ಮೋದಿ ಎಲ್ಲಿ ಹೋಗುತ್ತಾರೆ ಅಲ್ಲಿ ಹೊಸ ಹೊಸ ವಿಚಾರ ಹೇಳುತ್ತಾರೆ. ಬಿಜೆಪಿ ನಾಯಕರು ಏನೂ ಮಾಡುತ್ತಿಲ್ಲ ಮಜಾ ಮಾಡಿಕೊಂಡು ಸುತ್ತಾಡುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.
ಕರ್ನಾಟಕ ಒಂದು ಪ್ರಗತಿಪರ ರಾಜ್ಯ. ಬಿಜೆಪಿ ನೇತೃತ್ವದಲ್ಲಿ ಪ್ರಗತಿಪರ ರಾಜ್ಯ ಕೆಟ್ಟು ಹೋಗಿದೆ. ಧರ್ಮ ಧರ್ಮದ ನಡುವೆ ಜಗಳ ಇಟ್ಟಿದ್ದು ಬಿಜೆಪಿ ಅವರು. ನಾನೂ ನೋಡಿದ ಯಾವುದೇ ಮುಖ್ಯಮಂತ್ರಿ ಕೂಡಾ ಹೀಗಿರಲಿಲ್ಲ. ದುಡ್ಡೆ ದೊಡ್ಡಪ್ಪ ಎಂಬಂತ ವ್ಯವಸ್ಥೆ ಬಿಜೆಪಿ ಸರ್ಕಾರದಲ್ಲಿ ಆಗಿದೆ. ಅಂತ ಸರ್ಕಾರ ಉಳಿಯಬಾರದು ಎಂದರೆ ನೀವೆಲ್ಲಾ ಒಗಟ್ಟಾಗಬೇಕು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ JP ನಡ್ಡಾ ಅವರಿಗೆ ಹಿಮಾಚಲ ಪ್ರದೇಶದಲ್ಲಿ ಸೋಲಾಗಿದೆ. ಕಾಂಗ್ರೆಸ್ ಪಕ್ಷದ ಹಿಮಾಚಲ ಪ್ರದೇಶದಲ್ಲಿ ಸರ್ಕಾರ ಬಂದಿದೆ.
ಅಲ್ಲಿ ಸಲ್ಲದ JP ನಡ್ಡಾ ಇಲ್ಲಿ ಎಲ್ಲಾ ಕಡೆ ತಿರುಗುತ್ತಿದ್ದಾರೆ. ಮೋದಿ ಮೋದಿ ಎನ್ನುತ್ತೀರಾ, ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಗೆ ದೇವರು ಎಂದರೆ ಅದು ಸರ್ವಾಧಿಕಾರಿ ಆಗಲಿದ್ದಾರೆ ಎಂದು ತಿಳಿಸಿದರು.
ಅಖಿಲ ಭಾರತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಸಮಾವೇಶದ ಅಧ್ಯಕ್ಷರಾದ ಡಾ. ಜಿ.ಪರಮೇಶ್ವರ, ವೇದಿಕೆ ಸಮಿತಿ ಅಧ್ಯಕ್ಷ ಹೆಚ್.ಆಂಜನೇಯ, ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಮೆಂಬರ್ ಕೆ.ಹೆಚ್.ಮುನಿಯಪ್ಪ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಹೆಚ್.ಸಿ.ಮಹದೇವಪ್ಪ, ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಕಾಂಗ್ರೆಸ್ ಹಿರಿಯ ನಾಯಕರು ಎ.ಐ.ಸಿ.ಸಿ. ಮತ್ತು ಕೆ.ಪಿ.ಸಿ.ಸಿ.ಯ ಪದಾಧಿಕಾರಿಗಳು, ಎಸ್ಸಿ, ಎಸ್ಟಿ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಪ್ರತಿನಿಧಿಗಳು ಇದ್ದರು.