i
ವಿಮೆ ಹೆಸರಿನಲ್ಲಿ ರೈತರಿಗೆ ವಂಚನೆ, ರೈತ ಬಂಧು ಯೋಜನೆ ಜಾರಿ…
ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ಆರೋಗ್ಯ, ಶಿಕ್ಷಣ, ಕೃಷಿಗಾಗಿ ಸಾಲದ ಶೂಲಕ್ಕೆ ಸಿಲುಕಬೇಡಿ. ನಿಮ್ಮ ಬದುಕನ್ನು ನಾನು ಹಸನು ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರೈತರಿಗೆ ಭರವಸೆ ನೀಡಿದರು.
ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಪಂಚರತ್ನ ರಥಯಾತ್ರೆಯ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಅವರು ಭಾಷಣ ಮಾಡಿದರು.
ಕೃಷಿಗೆ ದಿನದ 24 ಗಂಟೆಕಾಲ ಗುಣಮಟ್ಟದ ಉಚಿತ ವಿದ್ಯುತ್ ನೀಡುವ ಯೋಜನೆ ತರುತ್ತೇನೆ. ತೆಲಂಗಾಣದಲ್ಲಿ ಜಾರಿಯಲ್ಲಿ ಇರುವಂತೆ ರೈತ ಬಂಧು ಯೋಜನೆ ಜಾರಿ ಮಾಡುತ್ತೇನೆ. ಪ್ರತಿ ಎಕರೆಗೆ ಹತ್ತು ಸಾವಿರ ರೂ.ಗಳನ್ನು ಕೊಡುತ್ತೇನೆ, ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ರೈತರು ಸಾಲ ಮಾಡಬೇಕಿಲ್ಲ. ಪ್ರತಿ ಮಳೆಗಾಲಕ್ಕೆ ಮುನ್ನ ಈ ಹಣ ರೈತರ ಖಾತೆಗೆ ಜಮೆ ಆಗುತ್ತದೆ ಎಂದು ಅವರು ಭರವಸೆ ನೀಡಿದರು.
ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಕೊಡುವ ಖಾತರಿ ಕೊಡುತ್ತೇನೆ. ಬೆಳೆ ಕೆಡದಂತೆ ಸಂರಕ್ಷಣೆ ಮಾಡಲು ಕೋಲ್ಡ್ ಸ್ಟೋರೇಜ್ ಗಳನ್ನು ಪ್ರತೀ ಪಂಚಾಯತಿ ಮಟ್ಟದಲ್ಲಿ ನಿರ್ಮಾಣ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಬೆಳೆ ವಿಮೆಗಾಗಿ 193 ಕೋಟಿ ರೂ.ಗಳನ್ನು ರೈತರು ಕಟ್ಟಿದ್ದಾರೆ. ಆದರೆ ವಿಮಾ ಕಂಪನಿಯಗಳು ರೈತರಿಗೆ ನೀಡಿರುವುದು ಕೇವಲ 28 ಕೋಟಿ ಮಾತ್ರ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹೆಸರಲ್ಲಿ ಕೇಂದ್ರ ಸರ್ಕಾರ ರೈತರಿಗೆ ವಂಚನೆ ಮಾಡುತ್ತಿದೆ. ನಿಮ್ಮಲ್ಲ ಕಷ್ಟ ಸುಖಗಳನ್ನು ಬಗೆಹರಿಸಲು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಕಾಷೆಂಪೂರ್, ವೆಂಕಟರಾವ್ ನಾಡಗೌಡ, ಸೇಡಂ ಕ್ಷೇತ್ರದ ಅಭ್ಯರ್ಥಿ ಬಾಲರಾಜ್ ಗುತ್ತೇದಾರ್, ಚಿಂಚೋಳಿ ಕ್ಷೇತ್ರದ ಅಭ್ಯರ್ಥಿ ಸಂಜೇವನ್ ಯಾಕಾಪುರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುರೇಶ್ ಮಾಗಾವಂಕರ್ ಮುಂತಾದವರು ಹಾಜರಿದ್ದರು.