i
ಅಧಿಕಾರಕ್ಕೆ ಬಂದ ಮೊದಲ ದಿನವೇ ರೈತರ ಸಾಲ ಮನ್ನಾ, ಯಾವ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ…
ಚಂದ್ರವಳ್ಳಿ ನ್ಯೂಸ್, ಕಲಬುರಗಿ:
2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ ಮೊದಲ ದಿನವೇ ರೈತರ ಸಾಲ ಮನ್ನಾ ಮಾಡಲಾಗುತ್ತದೆ, ಯಾವೊಬ್ಬ ರೈತರು ಸಾಲಕ್ಕಾಗಿ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ ನಾನಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರೈತರಿಗೆ ಭರವಸೆ ನೀಡಿದರು.
ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಪಂಚರತ್ನ ರಥಯಾತ್ರೆಯ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಅವರು ಭಾಷಣ ಮಾಡಿದರು.
ಜಾತ್ಯತೀತ ಜನದಾಳ ಅಧಿಕಾರದ ಚುಕ್ಕಾಣಿ ಹಿಡಿದ ಕೂಡಲೇ ಅನ್ನದಾತರ ನೆರವಿಗೆ ಧಾವಿಸಿ ಸಾಲ ಮನ್ನಾ ಮಾಡುತ್ತೇನೆ. 2018ರಲ್ಲಿ ನಾನು 25 ಸಾವಿರ ಕೋಟಿ ರೂ, ಸಾಲ ಮನ್ನಾ ಮಾಡಿದ್ದೆ. ಆದರೆ, ನನ್ನ ಸರ್ಕಾರವನ್ನು ಆಪರೇಶನ್ ಕಮಲದ ಮೂಲಕ ತೆಗೆದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈ ಮೊತ್ತದಲ್ಲಿ ಸುಮಾರು 7000 ಕೋಟಿ ರೂ ಸಾಲ ಮನ್ನಾ ಹಣವನ್ನು ರಾಷ್ಟ್ರೀಯ ಬ್ಯಾಂಕುಗಳಿಗೆ ಜಮೆ ಮಾಡದೆ ಬೇರೆ ಕಡೆಗೆ ವರ್ಗಾವಣೆ ಮಾಡಿಕೊಂಡಿತು. ಇದರಿಂದ ಎರಡು ಲಕ್ಷಕ್ಕೂ ಹೆಚ್ಚು ಸಾಲ ಮನ್ನಾ ಫಲಾನುಭವಿಗಳಿಗೆ ಅನ್ಯಾಯ ಆಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮತದಾರ ಪ್ರಭುಗಳು ಪೂರ್ಣ ಪ್ರಮಾಣದ ಐದು ವರ್ಷಗಳ ಸರ್ಕಾರ ಕೊಟ್ಟರೆ ಎಲ್ಲಾ ರೈತರ ಸಾಲ ಮನ್ನಾ ಮಾಡಿ, ಇಡೀ ರೈತ ಸಂಕುಲಕ್ಕೆ ಚೈತನ್ಯ ನೀಡುತ್ತೇನೆ. ಶಾಶ್ವತವಾಗಿ ಯಾವ ರೈತನೂ ಆತ್ಮಹತ್ಯೆ ಮಾಡಿಕೊಳ್ಳದಂತೆ ರೈತ ಚೈತನ್ಯ ಯೋಜನೆ ಜಾರಿಗೆ ತರುತ್ತೇನೆ. ಪಂಚರತ್ನ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನುಕೂಲ ಆಗುತ್ತವೆ. ದುಡುಕಿ ಆತ್ಮಹತ್ಯೆ ಮಾಡಿಕೊಂಡು ಕುಟುಂಬಕ್ಕೆ ಅನಾಥರನ್ನಾಗಿ ಮಾಡಬೇಡಿ ಎಂದು ಅವರು ಮನವಿ ಮಾಡಿದರು.
ಇತ್ತೀಚೆಗೆ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ. ಮೂರು ದಿನಗಳ ಹಿಂದೆ ಆಳಂದದಲ್ಲಿ ರೈತರೊಬ್ಬರು ಅನಾರೋಗ್ಯ ಪೀಡಿತರಾದ ತನ್ನ ಧರ್ಮಪತ್ನಿ ಅವರ ದುಸ್ಥಿತಿ ಕಂಡು ತನ್ನಿಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಯಮಾಡಿ ಯಾವ ರೈತನೂ, ಸಾಮಾನ್ಯ ವ್ಯಕ್ತಿಯೂ ಇಂಥ ವಿಪರೀತ ನಿರ್ಧಾರ ಕೈಗೊಳ್ಳಬಾರದು ಎಂದು ಅವರು ಕೈಜೋಡಿಸಿ ಮನವಿ ಮಾಡಿಕೊಂಡರು.
ರೈತರ ಕಡೆ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಗಮನ ಹರಿಸುತ್ತಿಲ್ಲ. ರೈತರಿಗೆ ಈ ಸರ್ಕಾರದಲ್ಲಿ ಪರಿಹಾರ ದೊರೆಯುತ್ತಿಲ್ಲ. ರೈತರ ಮೂರು ನಾಲ್ಕು ತಿಂಗಳ ದೈರ್ಯದಿಂದ ಕಾಲ ತಳ್ಳಿ. ನನಗೆ ವಿಶ್ವಾಸವಿದೆ. ನಿಮ್ಮ ಕಷ್ಟವನ್ನು ಬಗೆಹರಿಸುತ್ತೇನೆ. ನಿಮ್ಮ ಬದುಕಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡುತ್ತೇನೆ ಎಂದು ಅವರು ಭರವಸೆ ನೀಡಿದರು.