
ಖರ್ಗೆ-ಸಿದ್ದರಾಮಯ್ಯ-ಶಿವಕುಮಾರ್ ಮಕ್ಕಳು ಬಿಜೆಪಿ ಸೇರ್ಪಡೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಖರ್ಗೆ ಅವರ ಮಕ್ಕಳು ಪ್ರಧಾನಿ ನರೇಂದ್ರ ಮೋದಿ ಅವರ ಆದರ್ಶಗಳಿಗೆ ಮನಸೋತು ಮುಂದಿನ ದಿನದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮೈಸೂರಿನ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ವಾಸು ಅವರ ಪುತ್ರ ಕವೀಶ್ ಗೌಡ ವಾಸು ಸೇರಿ ಹಳೇ ಮೈಸೂರು ಭಾಗದ ಹಲವು ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇವಲ ವಾಸು ಅವರ ಪುತ್ರ ಕವೀಶ್ ಗೌಡ ಮಾತ್ರವಲ್ಲ ಕಾಂಗ್ರೆಸ್ನ ಇನ್ನಿತರ ನಾಯಕರ ಮನೆಗಳ ಮಕ್ಕಳು ಬಿಜೆಪಿ ಸೇರಲಿದ್ದಾರೆ, ಬಿಜೆಪಿ ಪರವಾದ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ತಿಳಿಸಿದರು.
ಹೋಗುತ್ತ ಹೋಗುತ್ತ ಕಾಂಗ್ರೆಸ್ ಬಸ್ ಬ್ರೇಕ್ ಫೇಲ್ ಆಗಿದೆ. ಜೆಡಿಎಸ್ ಪಂಚರತ್ನ ಯಾತ್ರೆ ವಿಜಯಪುರ ತಲುಪುವ ಹೊತ್ತಿಗೆ ಹಾಸನದಲ್ಲಿ ಪಂಕ್ಚರ್ ಆಗಿದೆ. ಆದರೆ, ಬಿಜೆಪಿ ಸಂಕಲ್ಪ ಯಾತ್ರೆ ವಿಜಯಿ ಯಾತ್ರೆಯಾಗಿ ಪರಿವರ್ತನೆ ಹೊಂದುತ್ತಿದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲಿದ್ದೇವೆ ಎಂದು ತಿಳಿಸಿದರು.
ಸಚಿವ ಗೋಪಾಲಯ್ಯ ಮಾತನಾಡಿ, ಬಿಜೆಪಿ ಸೇರಿದವರಿಗೆ ಉಜ್ವಲ ಭವಿಷ್ಯವಿದೆ. ಮೈಸೂರು, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ, ರಾಮನಗರ ಭಾಗದಿಂದ ಅನೇಕ ಮುಖಂಡರು ಬಿಜೆಪಿಗೆ ಸೇರಲಿದ್ದಾರೆ. ಪಕ್ಷ ಸೇರ್ಪಡೆ ಆದವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕವೀಶ್ ಗೌಡ ಪಕ್ಷ ಸೇರ್ಪಡೆಯಾಗಿ ಮಾತನಾಡಿ, ಬಿಜೆಪಿ ತತ್ವ ಸಿದ್ಧಾಂತ, ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದಾಗ ಬಿಜೆಪಿಯಲ್ಲಿ ಇರಬೇಕಿತ್ತು ಅನಿಸಿತ್ತು. ಪ್ರಧಾನ ಮಂತ್ರಿಯವರ ಅಮೃತ ಕಾಲ ಪರಿಕಲ್ಪನೆ ಅತ್ಯುತ್ತಮವಾಗಿದೆ. ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಅವರು ಹೇಳಿದರು.
ಜೆಡಿಎಸ್ ಮುಖಂಡರಾದ ಸೋಮಶೇಖರ್, ಗಿರೀಶ್ ನಾಶಿ, ಕಾಂಗ್ರೆಸ್ನ ವೆಂಕಟೇಶ್, ದಿವಾಕರ್ ಗೌಡ, ಸಿ.ವಿ. ರಾಜಪ್ಪ ಹಾಗೂ ಪುಣ್ಯ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕಿ ಡಾ| ಪುಣ್ಯವತಿ ನಾಗರಾಜ್ ಅವರು ಬಿಜೆಪಿ ಸೇರಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.