i
ಜನ ವಿರೋಧಿ ಭ್ರಷ್ಟ ಬಿಜೆಪಿ ಆಡಳಿತ ಅಂತ್ಯ ಆಗಲಿದೆ-ಡಿಕೆಶಿ…
ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಪ್ರಜಾಧ್ವನಿ ಯಾತ್ರೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಮಿಂಚಿನ ಸಂಚಾರ ಮಾಡಿತು.
ಹೊಸದುರ್ಗದ ಯಾಲಕಪ್ಪನಹಟ್ಟಿ ಸಮೀಪದ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ ರಾಜ್ಯದಲ್ಲಿ ಶೇ 40ರಷ್ಟು ಭ್ರಷ್ಟ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ರೈತ ಮತ್ತು ಜನ ವಿರೋಧಿ ಬಿಜೆಪಿ ಸರ್ಕಾರ ಅಂತ್ಯವಾಗುವ ಕಾಲ ಸಮೀಪದಲ್ಲಿದೆ ಎಂದು ಅವರು ತಿಳಿಸಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ರೈತರ ಬೆಳೆಗಳಿಗೆ ಸರಿಯಾದ ಬೆಲೆ ನೀಡುತ್ತಿಲ್ಲ. ಬೊಮ್ಮಾಯಿ ಸರ್ಕಾರ, ಮೋದಿ ಸರ್ಕಾರದ ಪ್ರಣಾಳಿಕೆ ಒಮ್ಮೆ ನೋಡಿದರೆ ರೈತರ ಆದಾಯ ಡಬಲ್ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಆ ಪ್ರಣಾಳಿಕೆಯಲ್ಲಿ ಡಬಲ್ ಮಾಡುವ ಯಾವುದೇ ಪ್ರಸ್ತಾಪವಿಲ್ಲ. ಕಾಂಗ್ರೆಸ್ ಕಾಲದ ಕಾರ್ಯಕ್ರಮ ಸರಿಯಾದ ರೀತಿ ಉಪಯೋಗ ಮಾಡಿಕೊಳ್ಳಲು ಅವರು ತಿಳಿಸಿದರು.
ಸರ್ಕಾರ ರಾಗಿಗೆ ಸರಿಯಾದ ಬೆಂಬಲ ಬೆಲೆ ಕೊಡುತ್ತಿಲ್ಲ. ಕೋವಿಡ್ ನಿಂದ ಸಂಕಷ್ಟ ಎದುರಿಸಿದ ಕುಟುಂಬಗಳಿಗೆ ಸರ್ಕಾರ ಏನೇನೂ ಸಹಾಯ ಮಾಡಲಿಲ್ಲ. ವಿರೋಧ ಪಕ್ಷಗಳ ಒಂದು ಪ್ರಶ್ನೆಗೂ ಬಿಜೆಪಿಯವರು ಉತ್ತರ ಕೊಡುತ್ತಿಲ್ಲ ಎಂದು ವಾಗ್ದಾಳಿ ಮಾಡಿದರು.
ಹೊಸದುರ್ಗ ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಎಲ್ಲ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸ್ವತಃ ಕಾಂಗ್ರೆಸ್ ಮುಖಂಡ ಜಿ.ಎಸ್.ಮಂಜುನಾಥ್ ಅವರೇ ಎಲ್ಲರಿಗೂ ಊಟ ಬಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಕೆ.ಎಚ್ ಮುನಿಯಪ್ಪ, ಉಗ್ರಪ್ಪ, ನಹಿಂ ಅಹಮದ್, ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಹೊಸದುರ್ಗ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಬಿ.ಜಿ.ಗೋವಿಂದಪ್ಪ, ಗೋ.ತಿಪ್ಪೇಸ್ವಾಮಿ ಸೇರಿ ಹಲವರು ಭಾಗಿಯಾಗಿದ್ದರು.