i
18 ವರ್ಷದ ಯುವಕರು/ಯುವತಿಯರು ಮತದಾನ ಪಟ್ಟಿಗೆ ಹೆಸರು ಸೇರಿಸಿ…..
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮತದಾರರ ಪಟ್ಟಿಯಲ್ಲಿರುವಂತೆ ಅವರವರ ವ್ಯಾಪ್ತಿಗೆ ಬರುವ ಮತಗಟ್ಟೆಗಳಲ್ಲಿ ಸರಾಗವಾಗಿ ಮತದಾನ ಮಾಡಲು ಅನುಕೂಲ ಮಾಡಿಕೊಡಲಾಗುವುದೆಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.
ಮತಾದನ ಸಂದರ್ಭದಲ್ಲಿ ಯಾವುದೇ ಗೊಂದಲವಿಲ್ಲದೆ ಈ ಬಾರಿ ಮತದಾನ ಮಾಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಾಗೃತಿ ಮೂಡಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಒ ಎಂ.ಎಸ್.ದಿವಾಕರ್ ಮಾತನಾಡಿ 18 ವರ್ಷ ತುಂಬಿದ ಯುವಕರು/ಯುವತಿಯರು ಮತದಾನ ಪಟ್ಟಿಯಲ್ಲಿ ಹೆಸರನ್ನು ಸೇರಿಸಿ, ಕಡ್ಡಾಯವಾಗಿ ಮತದಾನದ ಹಕ್ಕನ್ನ ಚಲಾಯಿಸುವ ಮೂಲಕ ಯೋಗ್ಯ ಸರ್ಕಾರವನ್ನು ರಚಿಸಲು ಮುಂದಾಗಬೇಕು ಎಂದು ಹೇಳಿದರು.
2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕೆಲವು ಮತಗಟ್ಟೆಗಳಲ್ಲಿ ಅತೀ ಕಡಿಮೆ ಮತದಾನವಾಗಿದೆ. ಮತದಾರರು ಇದಕ್ಕೆ ಅವಕಾಶ ನೀಡದೆ ಕಡ್ಡಾಯವಾಗಿ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.
EVM(ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್) ಮತ್ತು VVPat ಬಗ್ಗೆ ಅರಿವು ಮೂಡಿಸಿದ ಅವರು, ಇದರ ಬಗ್ಗೆ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ತಿಳಿಸಲಾಗುತ್ತದೆ, ಎಲ್ಲರೂ ಸುಗಮವಾಗಿ ಮತದಾನ ಮಾಡಲು ಅನುಕೂಲ ವಾಗುವುದೆಂದು ಸಿಇಓ ತಿಳಿಸಿದರು.
ಚಿತ್ರದುರ್ಗ ತಾಲ್ಲೂಕಿನ ಎಂ. ಕೆ. ಹಟ್ಟಿ ಗ್ರಾಮ ಪಂಚಾಯತಿಯ ಎಂ. ಕೆ. ಹಟ್ಟಿ ಗ್ರಾಮದಲ್ಲಿ ಮೆದೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿದ್ಯಾನಗರ ಹಾಗೂ ಮದಕರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಳ್ಳೆಕೆರೆನಹಳ್ಳಿ ಗ್ರಾಮಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಿದರು. ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲ ಮತದಾರರು ಕಡ್ಡಾಯವಾಗಿ ತಮ್ಮ ಹಕ್ಕನ್ನ ಚಲಾಯಿಸುವಂತೆ ಪ್ರೇರೇಪಿಸಿದರು.
ಸಾರ್ವಜನಿಕರ ಕೋರಿಕೆಯಂತೆ ಪ್ರತಿ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಗ್ರಾಮಗಳಲ್ಲಿ ಕಡಿಮೆ ಮತದಾನವಾಗುತ್ತಿದ್ದು,ಇದಕ್ಕೆ ಮೂಲ ಕಾರಣವೆಂದರೆ ಮತಗಟ್ಟೆಗಳಲ್ಲಿ ಬೂತ್ ಗಳನ್ನು ಹೆಚ್ಚಾಗಿ ಮಾಡಿದ್ದರಿಂದ ಮತದಾರರು ಯಾವ ಬೂತ್ ಗಳಲ್ಲಿ ಮತದಾನ ಮಾಡಬೇಕೆನ್ನುವ ಗೊಂದಲ ಉಂಟಾಗಿ, ಮತಗಟ್ಟೆಗಳಿಗೆ ಮತದಾನ ಮಾಡುವುದಕ್ಕೆ ಅಲೆಯುವುದರಿಂದ
ನಮ್ಮಲ್ಲಿ ಮತದಾನ ಕುಂಠಿತವಾಗಲು ಕಾರಣ ಎಂದು ಕೆಲ ಮತದಾರರು ತಿಳಿಸಿದರು.
ಇದಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು ಮತದಾರರ ಪಟ್ಟಿಯಲ್ಲಿರುವಂತೆ, ಅವರವರ ವ್ಯಾಪ್ತಿಗೆ ಬರುವ ಮತಗಟ್ಟೆಗಳಲ್ಲಿ ಸರಾಗವಾಗಿ ಮತದಾನ ಮಾಡಲು ಅನುಕೂಲ ಮಾಡಿಕೊಡಲಾಗುವುದೆಂದು ತಿಳಿಸಿದರು. ಹಾಗೂ ಯಾವುದೇ ಗೊಂದಲವಿಲ್ಲದೆ ಈ ಬಾರಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರು.
ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ, ಪಿ ಡಿ ಓ, ಸಿಬ್ಬಂದಿಗಳು ಹಾಗೂ ಸಾರ್ವಜನಿಕರುಗಳು ಭಾಗವಹಿಸಿದ್ಧರು.