i
ಬಿಜೆಪಿ ತೊರೆದು ಜೆಡಿಎಸ್ ಸೇರಿದ 500ಕ್ಕೂ ಹೆಚ್ಚು ಮುಖಂಡರು-ಕಾರ್ಯಕರ್ತರು…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಒಂದೇ ದಿನ 500ಕ್ಕೂ ಅಧಿಕ ಮಂದಿ ಬಿಜೆಪಿ ಮುಖಂಡರು ಕಾರ್ಯಕರ್ತರು ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗಿರುವ ಘಟನೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.
ಶಾಸಕ ಡಿ.ಸಿ.ಗೌರಿಶಂಕರ್ ಸಮ್ಮುಖದಲ್ಲಿ ತುಮಕೂರು ತಾಲೂಕು ನರುಗನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬೃಹತ್ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಸುಮಾರು 500ಕ್ಕೂ ಅಧಿಕ ಮಂದಿ ವಿವಿಧ ಜನಾಂಗಗಳ ಬಿಜೆಪಿ ಮುಖಂಡರಾದ ಹನುಮಂತಯ್ಯ, ಮಹಾಲಿಂಗಪ್ಪ, ನರಸೇಗೌಡ, ಶ್ರೀನಿವಾಸ್, ಜನಾರ್ದನ್, ಮೀಸೆ ರಂಗನಾಥ್, ಸೇರಿದಂತೆ ವಿಎಸ್ಎಸ್ಎನ್ ಸದಸ್ಯರು, ಗ್ರಾ.ಪಂ.ಹಾಲಿ ಸದಸ್ಯರು, ಮಾಜಿ ಸದಸ್ಯ ಹಾಗೂ ಭಾಜಪ ಮುಖಂಡರು ಅಪಾರ ಬೆಂಬಲಿಗರೊಂದಿಗೆ ಕಮಲ ಪಕ್ಷ ತೊರೆದು ತೆನೆಹೊತ್ತ ರೈತ ಮಹಿಳೆಯ ಕೈ ಹಿಡಿದರು. ಈ ವೇಳೆ ಪಕ್ಷ ಸೇರ್ಪಡೆಗೊಂಡ ಮುಖಂಡರನ್ನು ಜೆಡಿಎಸ್ ಬಾವುಟ ನೀಡಿ ಶಾಸಕ ಗೌರಿಶಂಕರ್ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಾಸಕ ಡಿ.ಸಿ.ಗೌರಿಶಂಕರ್ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆಯಾಗಿದ್ದು, ಇದನ್ನು ಮೆಚ್ಚಿ ಈಗಾಗಲೇ ಸಾವಿರಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಕೈ ಬಲಪಡಿಸಲು ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆ. ಇಂದೂ ಸಹ 500ಕ್ಕೂ ಅಧಿಕ ಮಂದಿ ಜೆಡಿಎಸ್ ಸೇರ್ಪಡೆಗೊಂಡಿದ್ದು, ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದರು.
ಕ್ಷೇತ್ರದಲ್ಲಿ ಮಾಜಿ ಶಾಸಕರು ಮಾಡಿರುವ ಕೆಲಸ ಏನೆಂಬುದು ಸಾಮಾನ್ಯ ಜನರಿಗೂ ಗೊತ್ತು. ಅವರು ಮತ್ತೆ ಅಧಿಕಾರಕ್ಕೆ ಬಂದರೆ ಪಂಚಾಯ್ತಿಗೊಂದು ಫೋಲಿಸ್ ಠಾಣೆ ತಂದು ಜನಸಾಮಾನ್ಯರ ಮೇಲೆ ಪ್ರಕರಣ ದಾಖಲಿಸುವ ಕೆಲಸ ಮಾಡುತ್ತಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸತ್ಯಾಂಶವನ್ನು ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕೆಂದು ಕರೆ ನೀಡಿದರು. ಈ ವೇಳೆ ಗ್ರಾಮಾಂತರ ಕ್ಷೇತ್ರದ ಹಿರಿಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.