i
ಜೆಡಿಎಸ್ ಪಕ್ಷಕ್ಕೆ ನಲವತ್ತು ವರ್ಷ ಕತ್ತೆಯಂತೆ ದುಡಿದಿದ್ದು ನನಗೆ ಟಿಕೆಟ್ ನೀಡಬೇಕು-ಪಿಲಾಜನಹಳ್ಳಿ ಜಯಣ್ಣ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸ್ಥಳೀಯರಿಗೆ ಜೆಡಿಎಸ್ ಟಿಕೆಟ್ ನೀಡಬೇಕು, ಹೊರಗಿನವರನ್ನು ನೋಡಿರುವ ಮತದಾರರು ಈ ಸಲ ಸ್ಥಳೀಯ ಅಭ್ಯರ್ಥಿ ಗೆಲ್ಲಿಸಲಿದ್ದಾರೆ, ಹಾಗಾಗಿ ಸ್ಥಳೀಯನಾಗಿರುವ ನನಗೆ ಟಿಕೆಟ್ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಿರಿಯೂರು ವಿಧಾನಸಭಾ ಕ್ಷೇತ್ರದ ಪ್ರಬಲ ಸ್ಪರ್ಧಾಕಾಂಕ್ಷಿ ಎಂ.ಜಯಣ್ಣ ಜೆಡಿಎಸ್ ವರಿಷ್ಠರಲ್ಲಿ ಮನವಿ ಮಾಡಿದರು.
ಇಲ್ಲಿನ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ವಿಧಾನಸಭೆ ಚುನಾವಣೆ ದೃಷ್ಠಿಯಿಂದ ಸೋಮವಾರ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಲವತ್ತು ವರ್ಷದಿಂದ ಪಕ್ಷಕ್ಕೆ ಕತ್ತೆ ದುಡಿದಂತೆ ದುಡಿದಿದ್ದೇನೆ. ಎತ್ತಿನಂತೆ ನನ್ನಿಂದ ಬೇಸಾಯ ಮಾಡಿಸಿಕೊಂಡಿದ್ದೀರಿ. ನನ್ನ ಸಾಮರ್ಥ್ಯ ಏನು ಎಂದು ನಿಮಗೆ ಗೊತ್ತಿದೆ. ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದನಿದ್ದೇನೆ. ನನ್ನ ಹೆಸರನ್ನು ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೆಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇವರುಗಳಿಗೆ ನೀವೆ ಶಿಫಾರಸ್ಸು ಮಾಡಬೇಕು ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಿ.ಯಶೋಧರ ಅವರಲ್ಲಿ ತಾಕೀತು ಮಾಡಿ ಮನವಿ ಮಾಡಿದರು.
ಹಿರಿಯೂರು ತಾಲ್ಲೂಕು ಜೆಡಿಎಸ್ ಅಧ್ಯಕ್ಷನಾಗಿ ಹದಿನೇಳು ವರ್ಷಗಳ ಕಾಲ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಸ್ಪರ್ಧಿಸಲು ಅವಕಾಶ ಮಾಡಿಕೊಡಿ ಎಂದು ಸಾಕಷ್ಟು ಬಾರಿ ಕೇಳಿಕೊಂಡಿದ್ದೇನೆ. ಅದಕ್ಕಾಗಿ ನನ್ನ ಪರ ವರಿಷ್ಠರುಗಳ ಮುಂದೆ ವಕಾಲತ್ತು ವಹಿಸಬೇಕು. ನನ್ನಿಂದ ದುಡಿಸಿಕೊಂಡಿರುವವರು ನೀವು ಯಾವುದೇ ಕಾರಣಕ್ಕೂ ಹೊರಗಿನವರಿಗೆ ಟಿಕೆಟ್ ಕೊಡಿಸಬೇಡಿ. ಎ.ಕೃಷ್ಣಪ್ಪ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಎಪ್ಪತ್ತು ಸಾವಿರ ಮತಗಳನ್ನು ಪಡೆದು ಸೋತು ನಂತರ ನಮ್ಮ ಪಕ್ಷದ ಕೆಲವು ಕಾರ್ಯಕರ್ತರನ್ನು ಹಿಂದೆ ಹಾಕಿಕೊಂಡು ಓಟ ಕಿತ್ತರು. ೨೦೧೮ ರ ಚುನಾವಣೆಯಲ್ಲಿ ಅವರ ಪುತ್ರಿ ಪೂರ್ಣಿಮಾ ಇಲ್ಲಿಂದ ಸ್ಪರ್ಧಿಸಿ ಈಗ ಶಾಸಕಿಯಾಗಿದ್ದಾರೆಂದರೆ ನಮ್ಮವರೆ ಕೆಲವರು ಕೈಜೋಡಿಸಿದ್ದಾರೆ. ಅದಕ್ಕಾಗಿ ಹೊರಗಿನವರಿಗೆ ಕೊಟ್ಟರೆ ಅನಾಹುತವಾಗುತ್ತೆ. ಸ್ಥಳೀಯರೆ ಸ್ಪರ್ಧಿಸಲು ಅವಕಾಶ ಒದಗಿಸಿ. ನಾನು ಸಾವಿರಾರು ಕೋಟಿಗಳ ಒಡೆಯಲ್ಲ. ಆದರೆ ನಿಮ್ಮ ನಿರೀಕ್ಷೆಗೂ ಮೀರಿ ಚುನಾವಣೆ ಆಡುತ್ತೇನೆ. ನೊಂದು ಬೆಂದು ಕಾರ್ಯಕರ್ತರು ಹಾಳಾಗಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್ ಉಳಿಯಬೇಕಾದರೆ ದುಡಿದವರಿಗೆ ಮನ್ನಣೆ ಕೊಡಿ ಎಂದು ಉಸ್ತುವಾರಿ ಮೀನಳ್ಳಿ ತಾಯಣ್ಣ ಹಾಗೂ ಜಿಲ್ಲಾಧ್ಯಕ್ಷ ಡಿ.ಯಶೋಧರ ಇವರುಗಳ ಗಮನ ಸೆಳೆದರು.