i
ಸದ್ದು ಮಾಡುತ್ತಿರುವ ಪೋಟೋಗಳು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾ ಮಲ್ಲೇಶ್ ಪೋಟೋ ವೈರಲ್…
ಚಂದ್ರವಳ್ಳಿ ನ್ಯೂಸ್, ಮಾಯಕೊಂಡ:
ವಿಧಾನಸಭಾ ಚುನಾವಣೆ ಸಮೀಪವಾಗುತ್ತಿರುವ ಸಂದರ್ಭದಲ್ಲೇ ಟಿಕೆಟ್ ಆಕಾಂಕ್ಷಿಯೊಬ್ಬರ ಸುಂದರವಾದ ಪೋಟೋ ಎಗ್ಗಿಲ್ಲದೆ ಎಡಿಟ್ ಆಗಿದ್ದು ಆ ಪೋಟೋಗಳೆಲ್ಲ ಈಗ ವೈರಲ್ ಆಗಿವೆ.
ದಾವಣಗೆರೆ ಜಿಲ್ಲೆಯ ಮಾಯಕೊಂಡ ಎಸ್ಸಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾಬಾಯಿ ಮಲ್ಲೇಶ್ ನಾಯ್ಕ್ ರವರದ್ದು ಎನ್ನಲಾದ ಹಸಿಬಿಸಿ ಪೋಟೋಗಳು ಈಗ ಎಲ್ಲರ ಮೊಬೈಲ್ ನಲ್ಲಿ ವೈರಲ್ ಆಗಿದ್ದು ಸವಿತಾಬಾಯಿಗೆ ಇರುಸುಮುನಿಸು ಆಗಿದ್ದು ಸಾಕಷ್ಟು ಕುಗ್ಗಿ ಹೋಗಿದ್ದಾರೆ.
ಅತಿ ಹಿಂದುಳಿದ ಪ್ರದೇಶ ಮಾಯಕೊಂಡ. ಅತ್ತ ಸಿಟಿಯೂ ಅಲ್ಲ ಇತ್ತ ಗ್ರಾಮವೂ ಅಲ್ಲ, ಒಂದು ದೊಡ್ಡ ಊರು ಮಾಯಕೊಂಡ. ಚಿತ್ರದುರ್ಗ ಪಾಳೇಗಾರರು ಆಳಿದ ಊರು.
ಅಂದಿನ ರಾಜ ಹಿರೇಮದಕರಿನಾಯಕ ಆಳಿದ ಪಾಳೆಪಟ್ಟೇ ಮಾಯಕೊಂಡ. ಮಾಜಿ ಶಾಸಕ ಎಸ್.ಎ.ರವೀಂದ್ರನಾಥ್, ಮಾಜಿ ಸಚಿವೆ ನಾಗಮ್ಮ ಇವರುಗಳು ಪ್ರತಿನಿಧಿಸಿದ ಕ್ಷೇತ್ರ ಮಾಯಕೊಂಡ.
ಮೂಲತಃ ಸಿನೆಮಾ ನಟಿ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸವಿತಾ ಬಾಯಿ ಅವರ ಸ್ವಂತ ಊರು ಮಾಜಿ ಸಿಎಂ ಜೆ.ಎಚ್.ಪಟೇಲ್ ಅವರ ಕಾರಿಗನೂರು. ಸವಿತಾಬಾಯಿ ಮಾಡಲಿಂಗ್ ಕ್ಷೇತ್ರ ಹುಡುಕಿಕೊಂಡು ದುಬೈ, ತಮಿಳುನಾಡು, ವಿದೇಶಕ್ಕೆ ಹೋಗಿ ಜೀವನಕಟ್ಟಿಕೊಂಡಿದ್ದರು.
ಆದರೆ ರಾಜಕೀಯ ಕ್ಷೇತ್ರ ಅವರನ್ನು ಕೈಬೀಸಿ ಕೆರಿದ್ದು ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವತಿಯಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿರುವ ಸವಿತಾಬಾಯಿ ಹೆಸರು ಜೋರಾಗಿ ಓಡುತ್ತಿರುವುದರಿಂದ ಅವರ ಎದುರಾಳಿಗಳಿಗೆ ಬಿಸಿ ತಟ್ಟಿದೆ. ಹಾಗಾಗಿ ಅವರ ಹಸಿ ಬಿಸಿ ಪೋಟೋಗಳನ್ನು ಮನ ಬಂದಂತೆ ಎಡಿಟ್ ಮಾಡಿ ವೈರಲ್ ಮಾಡುವ ಮೂಲಕ ಕೆಟ್ಟ ಹೆಸರ ತರುವ ಹುನ್ನಾರ ಮಾಡಲಾಗಿದೆ ಎಂದು ಸವಿತಾ ಬಾಯಿ ನೋವು ತೋಡಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಅಲ್ಲದೆ ಇತರೆ ಕಾಂಗ್ರೆಸ್ ಸಭೆ, ಸಮಾರಂಭಗಳಲ್ಲಿ ಹೈಲೈಟ್ ಆಗುತ್ತಿರುವ ಇವರ ಓಟಕ್ಕೆ ಬ್ರೇಕ್ ಹಾಕಬೇಕೆಂದೆ ಅವರ ಪೋಟೋ ವೈರಲ್ ಮಾಡಲಾಗಿದೆ ಎನ್ನಲಾಗುತ್ತಿದೆ.
ಮಾಯಕೊಂಡ ಕ್ಷೇತ್ರದಲ್ಲಿ ಲಂಬಾಣಿ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರದ್ದೇ ಭಾಷೆಯಲ್ಲಿ ಮಾತನಾಡುವ ಮೂಲಕ ಒಂದು ರೀತಿಯಲ್ಲಿ ಮನೆ ಮಗಳಾಗಿರುವ ಸವಿತಾ ಬಾಯಿ ಅವರು ಬಹುಬೇಗ ಎಲ್ಲರ ಗಮನ ಸೆಳೆಯುತ್ತಾರೆ. ಲಿಂಗಾಯಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಮುದಾಯದ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಮಾಯಕೊಂಡ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿ ಒಟ್ಟು 12 ಜನ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಸವಿತಾಬಾಯಿ ಮಲ್ಲೇಶ್ ನಾಯ್ಕ್ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವಂತಪ್ಪ ಇವರುಗಳ ಹೆಸರುಗಳು ಜೋರಾಗಿ ಕೇಳಿ ಬರುತ್ತಿವೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಾಜಿ ಸಚಿವ ಆಂಜನೇಯ ಅವರ ಅಳಿಯ ಬಸವಂತಪ್ಪ. ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಫರ್ಧಿಸಿ ಅಲ್ಪ ಮತದ ಅಂತರದಿಂದ ಸೋತಿದ್ದರು. 2018ರಲ್ಲಿ ಸೋತ ಬಸವಂತಪ್ಪ 2023 ರ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಅಲ್ಲದೇ ಕೋವಿಡ್ ಸಮಯದಲ್ಲಿ ಬಡವರಿಗೆ ಹೆಚ್ಚಿನ ಸಹಾಯ ಮಾಡಿದ್ದರಿಂದ ಕ್ಷೇತ್ರದಲ್ಲಿ ಇವರ ಹೆಸರು ಸಾಕಷ್ಟು ಓಡುತ್ತಿದೆ.
ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಸವಿತಾಬಾಯಿ ಹಾಗೂ ಬಸವಂತಪ್ಪರ ನಡುವೆ ನೇರ ಸ್ಫರ್ಧೆ ಏರ್ಪಟ್ಟಿದ್ದು ಇಬ್ಬರು ಕೂಡ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಆದರೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಸವಂತಪ್ಪ ಅವರು ತನಗೆ ಟಿಕೆಟ್ ಸಿಗೋದಿಲ್ಲ ಎನ್ನುವ ಆತಂಕದಲ್ಲಿ ನನ್ನ ಪೋಟೋಗಳನ್ನು ಎಡಿಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ. ಓರ್ವ ಮಹಿಳೆಯನ್ನು ಈ ರೀತಿ ತೇಜೊವಧೆ ಮಾಡುತ್ತಿದ್ದಾರೆ ಎಂಬುದು ಸವಿತಾಬಾಯಿ ಆರೋಪವಾಗಿದೆ. ಆದರೆ ಇದನ್ನ ಸಂಪೂರ್ಣ ಅಲ್ಲಗಳೆದಿರುವ ಬಸವಂತಪ್ಪ ನನಗೆ ಮೊಬೈಲ್ ಬಳಕೆ ಮಾಡೋದಕ್ಕೆ ಬರೋದಿಲ್ಲ. ನಾನೇಕೆ ಅವರ ಪೋಟೋಗಳನ್ನು ಎಡಿಟ್ ಮಾಡಿ ಹಾಕಲಿ. ಅವರೇ ತನಿಖೆ ಮಾಡಿಸಲಿ ಸತ್ಯ ಎಲ್ಲರಿಗೂ ಗೊತ್ತಾಗಲಿದೆ ಎಂದು ಬಸವಂತಪ್ಪ ಹೇಳಿದ್ದಾರೆ.