i
ಅಣ್ಣತಮ್ಮಂದಿರ ಮನೆ ಕಟ್ಟಬೇಕೆಂಬ ಆಸೆ ಬೆಂಕಿಯಲ್ಲಿ ಸುಟ್ಟು ಬೂದಿ ಆಯ್ತು…
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಬೇಸಿಗೆ ಉರಿ ಬಿಸಿಲು ಒಂದು ಕಡೆಯಾದರೆ ಅಷ್ಟೇ ವೇಗವಾಗಿ ಬೀಸುವ ಗಾಳಿಯಿಂದಾಗಿ ಬೆಂಕಿಯ ಅವಘಡಗಳು ದಿನ ದಿನ ಹೆಚ್ಚಾಗುತ್ತಲೇ ಇವೆ. ಇಂತಹ ಬೆಂಕಿಯ ಅವಘಡಗಳಲ್ಲಿ ಅದೆಷ್ಟು ಜೀವಿಗಳು ಪ್ರಾಣಿಗಳು ಹಾಗೂ ಗೃಹ ಉಪಯೋಗಿ ವಸ್ತುಗಳು ಸುಟ್ಟು ಕರಕಲಾಗುತ್ತವೆ ಹೇಳಲಾಗದು.
ಆದರೆ ಅಂತದ್ದೆ ಒಂದು ಪ್ರಕರಣ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಗ್ರಾಮದ ನಿಂಗರಾಜು ಹಾಗೂ ಮಹಾಂತೇಶ್ ರವರಿಗೆ ಸೇರಿದ ಎರಡು ತೋಟದ ಮನೆಗಳು ಬೆಂಕಿಗೆ ಆಹುತಿಯಾಗಿವೆ.
ಇದರಿಂದಾಗಿ ಮನೆಯಲ್ಲಿದ್ದಂತಹ ಲಕ್ಷಾಂತರ ಮೌಲ್ಯದ ವಸ್ತುಗಳು ಸಂಪೂರ್ಣವಾಗಿ ಅಗ್ನಿಗಾಹುತಿಯಾಗಿದೆ.
ಗ್ರಾಮದಿಂದ ಸಲ್ಪ ದೂರದಲ್ಲಿ ಇರುವ ತೋಟದಲ್ಲಿ ಅಣ್ಣ ತಮ್ಮಂದಿರು ಮನೆಗಳನ್ನು ಕಟ್ಟಿಕೊಂಡಿದ್ದರು ತೋಟದಲ್ಲಿ ಕೆಲಸಕ್ಕೆ ಹೋಗಿದ ಸಮಯದಲ್ಲಿ ಈ ಅವಘಡ ಸಂಭವಿಸಿದೆ.
ಆಕಸ್ಮಿಕ ಅಗ್ನಿ ಅವಘಡ ದಿಂದ ಎರಡು ಮನೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅಣ್ಣ ತಮ್ಮಂದಿರು ಹೊಸದಾಗಿ ಮನೆ ಕಟ್ಟಬೇಕೆಂದು 6 ಲಕ್ಷ ಹಣವನ್ನು ಮನೆಯ ಬೀರಿವಿನಲ್ಲಿ ಇಟ್ಟಿದ್ದರು ಮತ್ತು 5 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಬಂಗಾರದ ಒಡವೆಗಳು ಹಾಗೂ ಗೃಹ ಉಪಯೋಗಿ ವಸ್ತುಗಳು, ಮಹಿಳೆಯರ, ಮಕ್ಕಳ, ವಯೋವೃದ್ಧ ಎಲ್ಲ ಬಟ್ಟೆಗಳು, ದವಸ ಧಾನ್ಯಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಸಹೋದರ ಮನೆ ಕಟ್ಟುವ ಕನಸು ಭಗ್ನವಾಗಿದಲ್ಲದೆ ಈಗ ವಾಸ ಮಾಡಲು ಸೂರು ಇಲ್ಲದೆ ಬೀದಿಗೆ ಬಿದ್ದಿದ್ದಾರೆ. ಸ್ಥಳೀಯರು ಅಗ್ನಿ ಅನಾಹುತದ ಬಗ್ಗೆ ಅಗ್ನಿಶಾಮಕ ದಳದವರಿಗೆ ಮಾಹಿತಿ ತಿಳಿಸಿದ ಕೂಡಲೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸುವುದರಷ್ಟರಲ್ಲಿ ಮುಕ್ಕಾಲು ಭಾಗ ಮನೆ ಸುಟ್ಟು ಕರಕಲಾಗಿತ್ತು.
ಅಣ್ಣ ತಮ್ಮಂದಿರು ತೋಟದಲ್ಲಿ ಹೊಸದಾಗಿ ಮನೆ ಕಟ್ಟಬೇಕೆಂಬುವ ಕನಸು ಸುಟ್ಟು ಬೂದಿಯಾಗಿದೆ. ಕುಟುಂಬಸ್ಥರಿಗೆ ನೆರವಿಗೆ ಯಾರೊಬ್ಬ ಅಧಿಕಾರಿಗಳು ಹಾಗೂ ರಾಜಕೀಯ ವ್ಯಕ್ತಿಗಳು ಬರದೇ ಇರುವುದು ಬೇಸರದ ವಿಚಾರವಾಗಿದೆ. ಬೆಂಕಿ ಸಂತ್ರಸ್ತ ಕುಟುಂಬವನ್ನು ಯಾರು ಕೈಹಿಡಿದು ಮೇಲೆತ್ತಲಿದ್ದಾರೆ ಎನ್ನುವುದು ಮಾತ್ರ ಮಿಲಿಯನ್ ಡಾಲರ್ ಯಕ್ಷ ಪ್ರಶ್ನೆಯಾಗಿದೆ.