i
ತೋಟಗಾರಿಕಾ ಕಚೇರಿಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತೋಟಗಾರಿಕಾ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿನಡೆಸಿ ದಾಖಲೆಗಳ ಪರಿಶೀಲನೆ ನಡೆಸಿ ಅಚ್ಚರಿಸಿದ್ದಾರೆ.
ಸಪ್ನಾ ಮಲ್ಲನಗೌಡ ಪಾಟೀಲ್ ಅವರು ನೀಡಿದ ದೂರಿನನ್ವಯ ತೋಟಗಾರಿಕೆ ಇಲಾಖೆ ನಿರ್ದೇಶಕರ ಕಚೇರಿ, ಜಂಟಿ ನಿರ್ದೇಶಕರ ಕಚೇರಿ, ಎಂ.ಎಸ್.ಬಿಲ್ಡಿಂಗ್ನಲ್ಲಿರುವ ಪ್ರಧಾನ ಕಾರ್ಯದರ್ಶಿ ಕಚೇರಿಯಲ್ಲಿ ತನಿಖಾಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.
ಏನು ದೂರು?: ಪಂಚಮ ಎಂಟರ್ಪ್ರೈಸಸ್ ಎಂಬ ಹೆಸರಿನ ತೋಟಗಾರಿಕಾ ಕಂಪನಿಯನ್ನು ವಿಜಯಪುರದಲ್ಲಿ ತೆರೆದಿದ್ದು, ನೋಂದಣಿಗಾಗಿ ತೋಟಗಾರಿಕಾ ಇಲಾಖೆಯ ವೆಬ್ಸೈಟ್ನಲ್ಲಿ ದೂರುದಾರರು ಅರ್ಜಿ ಸಲ್ಲಿಸಿದ್ದರು.
ನೊಂದಣಿ ನಂತರ ಕಂಪನಿಯಿಂದ ಸಬ್ಸಿಡಿ ಮೂಲಕ ರೈತರಿಗೆ ಯಂತ್ರೋಪಕರಣ, ಹನಿ ನೀರಾವರಿ ಪರಿಕರಗಳ ಪೂರೈಕೆ ಮಾಡಲು ಉದ್ದೇಶಿಸಲಾಗಿತ್ತು. ಈ ಕುರಿತು ದೂರುದಾರರು ಸಾಕಷ್ಟು ಬಾರಿ ಓಡಾಡಿದರೂ ಕಂಪನಿ ನೋಂದಣಿ ಮಾಡಿಕೊಡದೇ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಡಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿ ರಾಜ್ಯದ ಕಂಪನಿಗಳಿಗೆ ನೋಂದಣಿ ಮಾಡಿಕೊಡದೇ ಅನ್ಯರಾಜ್ಯದ ಕಂಪನಿಗಳಿಗೆ ನೋಂದಣಿ ಮಾಡಿ ಅನ್ಯಾಯ ಮಾಡಲಾಗಿದೆ ಎಂದು ಸಪ್ನಾ ಮಲ್ಲನಗೌಡ ಪಾಟೀಲ್ ದೂರಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ತೋಟಗಾರಿಕೆ ಕಚೇರಿಗಳ ಮೇಲೆ ದಾಳಿ ನಡೆಸಿ ತನಿಖೆ ಮಾಡಿದ್ದಾರೆ.