i
ಗುತ್ತಿಗೆದಾರರಿಂದ ಕಮಿಷನ್ ಪಡೆಯಲಿಲ್ಲ, ಉತ್ತಮ ಕೆಲಸ ಮಾಡಿಯೂ ಸೋಲು ಕಾಣಬೇಕಾಯಿತು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದೆ. ಬಡವರಿಗೆ ಅನ್ನಭಾಗ್ಯ, ಶಿಕ್ಷಣ ಭಾಗ್ಯ ಹಾಸ್ಟೆಲ್ ಭಾಗ್ಯ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ನೀಡಿಯೂ ಸೋಲಬೇಕಾಯಿತು ಎಂದು ಮಾಜಿ ಸಚಿವ ಹೆಚ್.ಆಂಜನೇಯ ನೋವು ತೋಡಿಕೊಂಡರು.
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ನೂತನ ಅಧ್ಯಕ್ಷ ಎಮ್ಮೆಹಟ್ಟಿ ಕೃಷ್ಣಮೂರ್ತಿ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಅವರು, ಹತ್ತಾರು ಎಸ್ಸಿ, ಎಸ್ಟಿ, ಇತರೆ ಒಬಿಸಿ ವರ್ಗಗಳ ಮಕ್ಕಳಿಗೆ ಹಾಸ್ಟೆಲ್ ಕಟ್ಟಡ ನಿರ್ಮಾಣ, ವಿಜ್ಞಾನ-ಕಲಾ ಕಾಲೇಜ್ ಗೆ ವಿಶ್ವದರ್ಜೆ ಗುಣಮಟ್ಟದ ಬೃಹತ್ ಕಟ್ಟಡಗಳ ನಿರ್ಮಾಣ, ಹಲವು ಸಮುದಾಯಗಳಿಗೆ ಭವನ ನಿರ್ಮಾಣ ನಾನಾ ರೀತಿಯ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಜಿಲ್ಲೆಯಾದ್ಯಂತ ಉತ್ತಮ ಗುಣ ಮಟ್ಟದ ಶಾಲಾ-ಕಾಲೇಜಿನ ಕಟ್ಟಡಗಳು ಹಾಸ್ಟಲ್ಗಳನ್ನು ನಿರ್ಮಾಣ ಮಾಡುವುದರ ಮೂಲಕ ಶೈಕ್ಷಣಿಕವಾಗಿ ಜಿಲ್ಲೆಯನ್ನು ಮಾರ್ಪಡಿಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರಿಗೆ ಅಭಿವೃದ್ಧಿ ಕಾರ್ಯ ಮಾಡಿ ಗೊತ್ತಿದೆ. ಆದರೆ ಪ್ರಚಾರದ ಗೀಳು ಇಲ್ಲದ ಕಾರಣ ನಾವು ಮಾಡಿದ ಅದ್ಭುತ ಕಾರ್ಯಗಳು ಜನರಿಗೆ ತಿಳಿಯದಾಗಿದೆ. ಹಾಗಾಗಿ ಕಳೆದ ಬಾರಿ ಸೋಲು ಅನುಭವಿಸಬೇಕಾಯಿತು ಎಂದು ನೊಂದು ನುಡಿದರು.
ನಮ್ಮ ಅಧಿಕಾರದ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಯಾವುದೇ ಗುತ್ತಿಗೆದಾರರನಿಂದ ಕಮಿಷನ್ ಪಡೆಯಲಿಲ್ಲ, ಆಗುವ ಕೆಲಸಗಳನ್ನು ನಿಲ್ಲಿಸಲಿಲ್ಲ, ನಮ್ಮ ಪಾಡಿಗೆ ನಾವು ಕೆಲಸ ಮಾಡುತ್ತಾ ಹೋದೆವು. ಆದರೆ ಈಗಿನ ಬಿಜೆಪಿ ಭ್ರಷ್ಟ ಸರ್ಕಾರ ಪ್ರತಿಯೊಂದಕ್ಕೂ ಕಮಿಷನ್ ಪಡೆಯುವುದರ ಮೂಲಕ ಮತದಾರರ ಕೋಪಕ್ಕೆ ಗುರಿಯಾಗಿದ್ದಾರೆ. ಬಿಜೆಪಿ ಪಕ್ಷದ ಸರ್ಕಾರ ಲಂಚ ಲಂಚ ಎನ್ನುತ್ತಿದೆ, ರಾಜಕೀಯ ಎನ್ನುವುದು ಕೊಳೆತು ನಾರುತ್ತಿದೆ. ಸಜ್ಜನರು, ಅಭಿವೃದ್ಧಿ ಚಿಂತಕರು ರಾಜಕೀಯ ಕ್ಷೇತ್ರಕ್ಕೆ ಬಾರದಿದ್ದರೆ ರಾಜಕೀಯ ಮತ್ತಷ್ಟು ಹಾಳಾಗಲಿದೆ. ಮುಂದಿನ ದಿನದಲ್ಲಿ ನಡೆಯುವ ಚುನಾವಣೆಯಲ್ಲಿ ಉತ್ತಮವಾದ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಿದೆ. ಕಳೆದ 5 ವರ್ಷದ ಅಧಿಕಾರ ಅವಧಿಯಲ್ಲಿ ಉತ್ತಮ ಆಡಳಿತವನ್ನು ಸಿದ್ದರಾಮಯ್ಯ ನೀಡಿದ್ದಾರೆ. ನನ್ನ ಮೇಲೂ ಹಾಸಿಗೆ ದಿಂಬುನಲ್ಲಿ ಹಗರಣ ನಡೆದಿದೆ ಎಂದು ಬೋಬ್ಬೆ ಹೊಡೆದಿದ್ದರು. ಇದರ ಬಗ್ಗೆ ಸೂಕ್ತ ತನಿಖೆ ಮಾಡಿಸಿ ಎಂದು ನಾನೇ ಹೇಳುತ್ತೇನೆ ಎಂದು ಆಂಜನೇಯ ತಿಳಿಸದರು.
ದೇಶಕ್ಕಾಗಿ ಪ್ರಧಾನಮಂತ್ರಿ ಹುದ್ದೆ ತ್ಯಾಗ ಮಾಡಿದ ಸೋನಿಯಾ ಗಾಂಧಿ ದೇಶಕ್ಕೆ ಆದರ್ಶ ಪ್ರಾಯರಾಗಿದ್ದಾರೆ. ಇಂಥವರ ಬಗ್ಗೆ ಅವಹೇಳನ ರೀತಿಯಲ್ಲಿ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಮಾಡಿದ ಕಾರ್ಯಗಳನ್ನು ಯೂಟೂಬ್ ಚಾನಲ್ ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡುವುದರ ಮೂಲಕ ಪಕ್ಷ ಸಂಘಟಿಸಬೇಕಿದೆ ಎಂದು ಕಿವಿ ಮಾತು ಹೇಳಿದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಗ್ಯಾಸ್ ಬೆಲೆ 360 ರೂ. ಇತ್ತು. ಆ ಸಂದರ್ಭದಲ್ಲಿ ಬಿಜೆಪಿ ನಾಯಕರು ಬೀದಿಯಲ್ಲಿ ನಿಂತು ಬೊಬ್ಬೆ ಹಾಕಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ 9 ವರ್ಷಗಳಲ್ಲೇ 1100 ರೂ.ಗೆ ಗ್ಯಾಸ್ ಬೆಲೆ ಏರಿಕೆ ಆಗಿದೆ. ಪೆಟ್ರೋಲ್, ಡಿಸೇಲ್ ಬೆಲೆಗಳನ್ನು ಕೇಳುವಂತಿಲ್ಲ, ಅಕ್ಕಿ ತಿನ್ನುವಂತಿಲ್ಲ, ನಮ್ಮ ಸರ್ಕಾರ 10 ಕೆಜಿ ಅಕ್ಕಿ ನೀಡುತ್ತಿಲ್ಲ, ಈಗ 5 ಕೆಜಿಗೆ ಇಳಿಕೆ ಮಾಡುವ ಮೂಲಕ ಬಡವರ ಹೊಟ್ಟೆ ಮೇಲೂ ಬಿಜೆಪಿ ಸರ್ಕಾರ ಹೊಡೆದಿದೆ ಎಂದು ಮಾಜಿ ಸಚಿವ ಆಂಜನೇಯ ವಾಗ್ದಾಳಿ ಮಾಡಿದರು.
ಯುಪಿಎ ಸರ್ಕಾರ ಇದ್ದಾಗ ರೈತರ ಸಾಲ ಮನ್ನಾ ಮಾಡಿತ್ತು. ಆದರೆ ಈಗಿನ ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳಾದ ಅಂಬಾನಿ, ಆದಾನಿ, ಮೋದಿಯಂತಹರ ಸಾಲ ಮನ್ನಾ ಮಾಡಿದೆ, ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ಸರ್ಕಾರ ಕಿತ್ತೊಗೆಯಬೇಕು ಎಂದು ಆಂಜನೇಯ ಕರೆ ನೀಡಿದರು.
ಜಿಲ್ಲಾ ಪ್ರಚಾರ ಸಮಿತಿ ಮಾಜಿ ಅಧ್ಯಕ್ಷ ಜಿ.ಎಸ್.ಮಂಜುನಾಥ್ವ ಮಾತನಾಡಿ, ಕಾಂಗ್ರೆಸ್ ಪಕ್ಷ ಮಾಡಿದ ಉತ್ತಮ ಕೆಲಸ ಕಾರ್ಯಗಳನ್ನು ಜನರಿಗೆ ತಿಳಿಸುವಲ್ಲಿ ನಾವು ಸೋತಿದ್ದೇವೆ. ಸರಿಯಾದ ರೀತಿಯಲ್ಲಿ ಪ್ರಚಾರ ಮಾಡುವಲ್ಲಿ ಪಕ್ಷದ ಮುಖಂಡರು ಎಡವಿದ್ದಾರೆ. ಉತ್ತಮ ಪ್ರಚಾರ ನೀಡಿದ್ದರೆ ಕಳೆದ ಸಾರಿಯೂ ಪಕ್ಷ ಅಧಿಕಾರಕ್ಕೆ ಬರುತ್ತಿತ್ತು. ಈಗ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಆದರೆ ಮಾಡದ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ಬಿಜೆಪಿ ಸರ್ಕಾರ ಕೇವಲ ನಮ್ಮ ನಾಯಕರಾದ ಸಿದ್ದರಾಮಯ್ಯ, ಡಿಕೆಶಿವಕುಮಾರ್ ರವರನ್ನು ಟೀಕೆ ಮಾಡುತ್ತಿದ್ದಾರೆ ಎಂದು ಗರಂ ಆದರು. 2023ರ ಚುನಾವಣೆಯಲ್ಲಿ ಟಿಕೆಟಿಗಾಗಿ ಹೊರಾಟ ಮಾಡುತ್ತಿದ್ದಾರೆ. ಯಾರಿಗೆ ಟಿಕೆಟ್ ಸಿಕ್ಕರೂ ಅಭ್ಯರ್ಥಿಯ ಗೆಲುವಿಗೆ ನಾವೆಲ್ಲ ದುಡಿಯಬೇಕು. ಆದರೆ ಬೇರೆಯವರಿಗೆ ಟಿಕೆಟ್ ಸಿಕ್ಕರೆ ಇತರೆ ಟಿಕೆಟ್ ಆಕಾಂಕ್ಷಿಗಳು ಪಕ್ಷದ ಕಡೆ ಬರುವುದೇ ಇಲ್ಲ ಇದು ದುರಂತ ಎಂದು ಹೇಳಿದರು.
ನಿಕಟಪೂರ್ವ ಚುನಾವಣೆಯ ಪರಾಜಿತ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ಮಾತನಾಡಿ, ಚುನಾವಣೆ ಹತ್ತಿರ ಬರುತ್ತಿದ್ದು ದಿನದ 24 ಗಂಟೆ ಪಕ್ಷ ಸಂಘಟನೆ ಮಾಡಬೇಕಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡುತ್ತಿರುವ ತಪ್ಪುಗಳನ್ನು ಮತದಾರರ ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಮಾಡಬೇಕಿದೆ. ಚಿತ್ರದುರ್ಗದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಬೇಕಿದೆ. ಪಕ್ಷದಲ್ಲಿ ಕಾರ್ಯಕರ್ತರನ್ನು ಕಡೆಗಣಿಸಬಾರದು ಎಂದು ಪಕ್ಷದ ಮುಖಂಡರಿಗೆ ಕಿವಿ ಮಾತು ಹೇಳಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಪ್ರಚಾರ ಸಮಿತಿ ಹುದ್ದೆ ಅತ್ಯಂತ ಪ್ರಮುಖವಾಗಿದೆ. ಪಕ್ಷ ನೀಡಿರುವ ಹೊಣೆಗಾರಿಕೆಯನ್ನು ಕೃಷ್ಣಮೂರ್ತಿ ಪರಿಣಾಮಕಾರಿಯಾಗಿ ನಿಭಾಯಿಸಬೇಕು ಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಭಾಷೆಯನ್ನು ಹಿಡಿತದಲ್ಲಿ ಇಟ್ಟುಕೊಂಡು ಮಾತನಾಡಬೇಕಿದೆ. ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡಬಾರದು, ತಾವು ಏನು ಮಾಡಿದೇವೆ ಎಂಬುದನ್ನು ತಿಳಿಸುವ ಕಾರ್ಯ ಮಾಡುವುದರ ಮೂಲಕ ಮತ ಕೇಳ ಬೇಕೇ ವಿನಃ ಬೇರೆಯವರನ್ನು ಬೈಯುವುದರ ಮೂಲಕ ಟೀಕೆ ಮಾಡಬಾರದೆಂದು ಕಿವಿ ಮಾತು ಹೇಳಿದರು. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಮ್ಮೆಹಟ್ಟಿ ಕೃಷ್ಣಮೂರ್ತಿಯವರಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಮುಂಬರುವ ಚುನಾವಣೆಯಲ್ಲಿ ಎಲ್ಲರೂ ನೆರವಾಗಬೇಕಿದೆ. ಬಿಜೆಪಿ ಸರ್ಕಾರದ ವೈಫಲ್ಯಗಳು ಹಾಗೂ ಕೇಂದ್ರ ಯುಪಿಎ ಸರ್ಕಾರದ ಸಾಧನೆಯನ್ನು ಮತದಾರರಿಗೆ ತಿಳಿಸುವ ಕಾರ್ಯವಾಗಬೇಕಿದೆ. ತತ್ವ ಸಿದ್ದಾಂತದ ಮೂಲಕ ಚುನಾವಣೆ ಗೆಲ್ಲಬೇಕಿದೆ. ಇದಕ್ಕಾಗಿ ಪಕ್ಷದ ಮುಖಂಡರು ಕಾರ್ಯಕರ್ತರು ಒಂದಾಗಬೇಕಿದೆ. ಕೃಷಮೂರ್ತಿಯವರ ಮೇಲೆ ಹೆಚ್ಚಿನ ರೀತಿಯ ಜವಾಬ್ದಾರಿಯಿದೆ ಎಂದು ತಿಳಿಸಿದರು.
ಜಿಲ್ಲಾ ಪ್ರಚಾರ ಸಮಿತಿ ನೂತನ ಅಧ್ಯಕ್ಷರಾದ ಅಧಿಕಾರ ಸ್ಪೀಕಾರ ಮಾಡಿದ ಎಮ್ಮೆಹಟ್ಟಿ ಕೃಷ್ಣಮೂರ್ತಿ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಪ್ರತಿಯೊಬ್ಬರು ಹೋರಾಟ ಮಾಡಬೇಕಿದೆ. ಏನು ಕೆಲಸ ಮಾಡದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಮುಂದಾಗಿರುವುದು ದುರಂತವಾಗಿದೆ. ಆರ್ ಎಸ್.ಎಸ್ ನಂತಹ ಸಂಘಟನೆ ಇತರೆ ವರ್ಗದವರಿಗೆ ಶಿಕ್ಷಣ ಕಲಿಯಬಾರದೆಂದು ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿತ್ತು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯರಾದ ಜಿ.ಎಸ್.ಚಂದ್ರಶೇಖರ್, ಕಾರ್ಯಧ್ಯಕ್ಷ ಹಾಲಸ್ವಾಮಿ, ಕುಮಾರಗೌಡ, ಜಯಲಕ್ಷ್ಮೀ, ಶಶಿಕಲಾ ಸುರೇಶಬಾಬು, ನೇತಾಜಿ, ತಿಪ್ಪೇಸ್ವಾಮಿ, ಸಂಪತ್ ಕುಮಾರ್, ಜಗದೀಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ಜಯಮ್ಮ, ಜಿ.ಪಂ.ಮಾಜಿ ಸದಸ್ಯರಾದ ನರಸಿಂಹರಾಜು, ಅನಂತ್, ಅನ್ವರ್ ಪಾಷ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದನಿಗೌಡ, ಮುದಸೀರ್, ಅಜ್ಜಪ್ಪ, ಆಶೋಕ್ ನಾಯ್ಡು, ಮಹಡಿ ಶಿವಮೂರ್ತಿ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಎನ್.ಡಿ.ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು. ಡಿಸಿಸಿ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ಪೀರ್ ಅಧ್ಯಕ್ಷತೆ ವಹಿಸಿದ್ದರು.