i
ಮಠ ಮಂದಿರ ಮಸೀದಿ ಕಡೆ ದೌಡಾಯಿಸುತ್ತಿರುವ ಕಾಂಗ್ರೆಸ್ ಮಾಜಿ ಶಾಸಕ ರಘು ಆಚಾರ್ ಮತ್ತು ದಂಪತಿಗಳು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಶಾಸಕ ಜಿ.ರಘು ಆಚಾರ್ ಮತ್ತು ಅವರ ದಂಪತಿಗಳು ಚಿತ್ರದುರ್ಗದಲ್ಲಿನ ಮಠ, ಮಂದಿರ, ಮಸೀದಿ, ದರ್ಗಾಗಳ ಭೇಟಿ ನೀಡಿ ಶುಭ ಕಾರ್ಯಕ್ಕೆ ಆಹ್ವಾನ ನೀಡುವಲ್ಲಿ ಬ್ಯುಸಿಯಾಗಿದ್ದಾರೆ.
ಚಿತ್ರದುರ್ಗ ಹೊರವಲಯದ ಕ್ಯಾದಿಗೆರೆ ಸಮೀಪ ರಾ.ಹೆದ್ದಾರಿ ಬಳಿ ನಿರ್ಮಾಣ ಮಾಡಿರುವ “ಪ್ರಕೃತಿ” ಗೃಹ ಪ್ರವೇಶ ಮಾರ್ಚ್ 10ರಂದು ನೆರವೇರಲಿದ್ದು, ಈ ಹಿನ್ನೆಲೆಯಲ್ಲಿ ಜಿ.ರಘು ಆಚಾರ್ ಅವರು ದರ್ಗಾ ಮಸೀದಿಗಳು ಸೇರಿದಂತೆ ಮುಸ್ಲಿಂ ಮುಖಂಡರುಗಳನ್ನು ಭೇಟಿಯಾಗಿ ಗೃಹ ಪ್ರವೇಶದ ಆಮಂತ್ರಣ ಪತ್ರಿಕೆ ನೀಡಿ ಆತ್ಮೀಯವಾಗಿ ಆಹ್ವಾನ ಮಾಡುತ್ತಿದ್ದಾರೆ.
ಮತ್ತೊಂದೆಡೆ ಪತಿ ರಘು ಆಚಾರ್ ಅವರಿಗೆ ಬೆನ್ನೆಲುಬಾಗಿ ನಿಂತಿರುವ ಅವರ ಪತ್ನಿ ಆಶಾ ರಘು ಆಚಾರ್, ಹಿಂದು ದೇವಾಲಯಗಳಿಗೆ ಭೇಟಿ ನೀಡುವ ಜೊತೆಗೆ ಗ್ರಾಮಗಳಲ್ಲಿ ನಡೆಯುವ ಜಾತ್ರೆಗಳಲ್ಲೂ ಭಾಗವಹಿಸಿ ಗಮನ ಸೆಳೆಯುತ್ತಿದ್ದಾರೆ. ಚಿತ್ರದುರ್ಗ ತಾಲೂಕಿನ ಸಿಂಗಾಪುರ ಗ್ರಾಮದಲ್ಲಿ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿ ಭಕ್ತಾದಿಗಳ ಜೊತೆಗೂಡಿ ರಥ ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ನಂತರ ಗ್ರಾಮದ ಮುಖಂಡರುಗಳ ಮನೆ ಮನೆಗೆ ತೆರಳಿ ಗೃಹ ಪ್ರವೇಶದ ಆಮಂತ್ರಣ ಪತ್ರಿಕೆ ನೀಡಿ ಕುಟುಂಬ ಸಮೇತರಾಗಿ ಬಂದು ಹಾರೈಸುವಂತೆ ಮನವಿ ಮಾಡಿದರು.
ಈ ವೇಳೆ ಮುಖಾಮುಖಿಯಾದ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿತ್ ಕುಮಾರ್, ಅಮ್ ಆದ್ಮಿ ಪಕ್ಷದ ಅಭ್ಯರ್ಥಿ ಜಗದೀಶ್ ಅವರನ್ನು ಆತ್ಮೀಯವಾಗಿ ಮಾತನಾಡಿಸುವ ಮೂಲಕ ಅಚ್ಚರಿ ಮೂಡಿಸಿದರು.
ಒಟ್ಟಾರೆ ಕಳೆದ ಕೆಲವು ದಿನಗಳಿಂದ ಪತಿ ಪತ್ನಿ ಇಬ್ಬರೂ ಕ್ಷೇತ್ರದಾದ್ಯಂತ ಮಿಂಚಿನ ಪ್ರವಾಸ ಮಾಡುತ್ತಾ ಗೃಹ ಪ್ರವೇಶದ ಆಮಂತ್ರಣ ಪತ್ರಿಕೆ ನೀಡಿ ಕುಟುಂಬ ಸಮೇತರಾಗಿ ಬನ್ನಿ, ಹರಸಿ ಹಾರೈಸಿ ಎಂದು ಕಳಕಳಿಯಿಂದ ಆಹ್ವಾನಿಸುತ್ತಾ ಗಮನ ಸೆಳೆಯುತ್ತಿದ್ದಾರೆ.