i
ಸಿನಿಮಾ ಸ್ಕೋಪ್ ಸೊಸೆ ತಂದ ಸೌಭಾಗ್ಯ……
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಚಿತ್ರರಂಗ 90……1931 – 1934 – 2023….ಮೂಕಿ ಚಿತ್ರದಿಂದ………ಮೃಚ್ಛಕಟಿಕ…..ಟಾಕಿ ಚಿತ್ರ…..ಸತಿ ಸುಲೋಚನ…..ಮೊದಲ ನಿರ್ದೇಶಕ : ವೈ ವಿ ರಾವ್…..ಮೊದಲ ನಾಯಕ : ಸುಬ್ಬಯ್ಯ ನಾಯ್ಡು….. ಮೊದಲ ನಾಯಕಿ : ತ್ರಿಪುರಾಂಭ……ಮೊದಲ ಬಣ್ಣದ ಚಿತ್ರ : ಅಮರಶಿಲ್ಪಿ ಜಕಣಾಚಾರಿ…..
ಮೊದಲ ಸಿನಿಮಾ ಸ್ಕೋಪ್ ಚಿತ್ರ : ಸೊಸೆ ತಂದ ಸೌಭಾಗ್ಯ…….ನಂತರದ ತಾಂತ್ರಿಕ ಕ್ರಾಂತಿ – ಕನ್ನಡ ಚಿತ್ರರಂಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ ರೀತಿ ಎಲ್ಲವೂ ನಮ್ಮ ಕಣ್ಣ ಮುಂದೆಯೇ ಇದೆ……ಕರ್ನಾಟಕದ ಸಂಸ್ಕೃತಿ ಭಾಷೆ ಜೀವನಶೈಲಿಯ ಬೆಳವಣಿಗೆಯಲ್ಲಿ ಕನ್ನಡ ಚಿತ್ರರಂಗದ ಪಾತ್ರವನ್ನು ನೆನೆಯುತ್ತಾ…….ಕನ್ನಡ ಚಿತ್ರರಂಗದ ಬೆಳವಣಿಗೆಯನ್ನು, ಕಥೆ – ಚಿತ್ರಕಥೆ ಮತ್ತು ಅಭಿನಯ ಶೈಲಿಯಲ್ಲಿ ಇಲ್ಲಿಯವರೆಗೂ ಆದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಮ್ಮ ಸಮಾಜದ ಸಾಮಾಜಿಕ ವ್ಯವಸ್ಥೆ ಮತ್ತು ಮಾನಸಿಕ ಸ್ಥಿತಿಯು ಹೇಗೆ ಪರಿವರ್ತನೆ ಹೊಂದಿದೆ ಮತ್ತು ಯಾವ ದಿಕ್ಕಿನತ್ತ ಸಾಗಿದೆ ಎಂಬುದರ ಒಳನೋಟ ಗೋಚರಿಸುತ್ತದೆ……..
ತೀರಾ ಆಳಕ್ಕೆ ಇಳಿಯದೆ ಸರಳವಾಗಿ ಕೆಲವೇ ವಾಕ್ಯಗಳಲ್ಲಿ ಅದನ್ನು ಹಿಡಿದಿಡುವ ಒಂದು ಸಣ್ಣ ಪ್ರಯತ್ನ………
ಪ್ರಾರಂಭದ ಪೌರಾಣಿಕ- ಐತಿಹಾಸಿಕ – ಕೌಟುಂಬಿಕ – ಗ್ರಾಮೀಣ ಹಿನ್ನೆಲೆಯ ಚಿತ್ರಕಥೆಗಳಿಂದ ಇಂದಿನ ಚಿತ್ರದವರೆಗೆ ಪ್ರೀತಿ ಪ್ರೇಮ ಪ್ರಣಯ ರಾಜಕೀಯ ಹಾಸ್ಯ ನಿಗೂಢ ಫ್ಯಾಂಟಸಿ ಮಕ್ಕಳು ಪ್ರಕೃತಿ ಪರಿಸರ ಭಯಾನಕ ಮುಂತಾದ ಎಲ್ಲಾ ಪ್ರಕಾರದ ನವರಸದ ಚಿತ್ರಗಳು ಆಯಾ ಕಾಲದ ಜನರ ಜೀವನಶೈಲಿಯನ್ನು ಪ್ರತಿನಿಧಿಸುತ್ತದೆ……
ಸುಮಾರು ಎರಡು ಗಂಟೆ ಸಮಯದ ಚಿತ್ರ ಸಂಪೂರ್ಣ ಕಾಲ್ಪನಿಕತೆಯನ್ನು ಸಾಂಕೇತಿಕವಾಗಿ ಹೊಂದಿದ್ದರೂ ವಾಸ್ತವದ ನೆಲೆಯ ಮೇಲೆಯೇ ನಿಂತಿರುತ್ತದೆ. ಸಾಹಿತ್ಯದಂತೆ ನಿರ್ದೇಶಕನ ಕಲ್ಪನೆಗೆ ತಕ್ಕಂತೆ ಚಿತ್ರಕಥೆ ವಿಜೃಂಭಿಸಿದರೂ ಹಾಡು ಸಂಗೀತ ಹೊಡೆದಾಟಗಳಿದ್ದರೂ, ಒಟ್ಟು ಆಶಯ ಸಾಮಾಜಿಕ ವ್ಯವಸ್ಥೆಯ ಪ್ರತಿಫಲನವೇ ಆಗಿರುತ್ತದೆ………
ಇಂದಿನ ದಿನಮಾನದ ಮೌಲ್ಯಗಳ ಕುಸಿತ, ಆಧುನಿಕತೆ, ಮಾನಸಿಕ ತಳಮಳ, ಸಂಬಂಧಗಳ ಹುಡುಕಾಟ ಎಲ್ಲವನ್ನೂ ತಮ್ಮ ತಿಳುವಳಿಕೆ ಮತ್ತು ಸ್ವಾರ್ಥದಿಂದ ಸಮರ್ಥಿಸಿಕೊಳ್ಳುವ ಜಾಣತನ ಎಲ್ಲವೂ ಹೇಗೆ 90 ವರ್ಷಗಳಷ್ಟು ಸಮಯದಲ್ಲಿ ಸೂಕ್ಷ್ಮವಾಗಿ ಬದಲಾಗುತ್ತಾ ಸಾಗುತ್ತಿದೆ ಎಂಬುದನ್ನು ಗಮನಿಸಿಬಹುದು…… ಹಾಗೆಯೇ ನಟರ ಅಭಿನಯ ಶೈಲಿಯೂ, ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಲ್ಲಿಯೂ ತೀವ್ರ ಸ್ವರೂಪದ ಬದಲಾವಣೆಗಳನ್ನು ಗುರುತಿಸಬಹುದು……. ತೀವ್ರ ಭಾವನಾತ್ಮಕ ಸನ್ನಿವೇಶಗಳಲ್ಲಿ ಅದರಲ್ಲೂ ತನ್ನ ತಾಯಿ ಅಥವಾ ತಂದೆಯ ಸಾವಿನ ದೃಶ್ಯಗಳಲ್ಲಿ ಆಕಾಶದೆತ್ತರಕ್ಕೆ ಧ್ವನಿ ಕೇಳುವಂತೆ ಕಿರುಚುತ್ತಾ ಗೋಳಾಡುತ್ತಿದ್ದುದು, ಮುಂದೆ ಕಣ್ಣ ಹನಿಯನ್ನು ಜಾರಿಸುವ ಮುಖಾಂತರ ಮೌನ ರೋದನೆಯನ್ನು ಮುಖಭಾವದಲ್ಲಿ ವ್ಯಕ್ತಪಡಿಸುತ್ತಿದ್ದುದು, ಇದೀಗ ಸಾವು ಸಹಜ ಕ್ರಿಯೆ, ಸಾವಿನ ನಂತರದ ನೋವನ್ನು ಹೆಚ್ಚು ತೋರ್ಪಡಿಸುವುದಕ್ಕಿಂತ ಬದುಕಿರುವಾಗ ತಾವು ತಮ್ಮ ಪ್ರೀತಿ ಪಾತ್ರರಿಗೆ ತೋರಿಸುವ ನಮ್ಮ ಜವಾಬ್ದಾರಿ ಮುಖ್ಯವಾಗಿರುತ್ತದೆ. ಅದು ಸರಿಯಾಗಿದ್ದಲ್ಲಿ ಸಾವಿನ ತೀವ್ರತೆ ನಮಗೆ ಅಷ್ಟಾಗಿ ಕಾಡುವುದಿಲ್ಲ ಎಂಬ ಅರ್ಥದಲ್ಲಿ ಭಾವನೆಗಳನ್ನು ನಿಯಂತ್ರಿಸುವುದನ್ನು ಕಾಣಬಹುದು………
ಹಾಗೆಯೇ ಪ್ರೀತಿ ಪ್ರೇಮ ರಸಿಕತೆಯ ದೃಶ್ಯಗಳಲ್ಲಿ ವ್ಯಕ್ತಪಡಿಸುವ ಭಾವನೆಗಳಿಗೂ ಈಗಿನ ನಟರ ಕಿಲ್ಲಿಂಗ್ ದೃಷ್ಟಿಗೂ ಬಹಳಷ್ಟು ವ್ಯತ್ಯಾಸ ಗಮನಿಸಬಹುದು. ಇನ್ನೂ ಮುಂದುವರಿದು ಹಾಸ್ಯ ಮತ್ತು ತಿರಸ್ಕಾರದಿಂದಲೇ ತೀವ್ರ ಪ್ರೀತಿ ವ್ಯಕ್ತಪಡಿಸುವ ರೀತಿ ನಮ್ಮ ಯುವ ಪ್ರೇಮಿಗಳ ಭಾವನೆಯ ಪ್ರತಿಬಿಂಬದಂತೆಯೇ ಇದೆ…….
ಸಂಪೂರ್ಣ ತಲೆಗೆ ಸೆರಗು ಹೊದ್ದು ಕಾಸಿನಗಲ ಕುಂಕುಮವಿಟ್ಟು ಗಂಡಸನ್ನು ನೇರವಾಗಿ ದೃಷ್ಟಿಸಿಯೂ ನೋಡದ ಅಂದಿನ ಕಾಲದ ಮಹಿಳಾ ಪಾತ್ರಧಾರಿಗಳಿಗೂ – ಒಳ ಉಡುಪು ಕಾಣುವ ಮತ್ತು ಅದನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸಲೇ ಹೊಸ ಹೊಸ ಫ್ಯಾಷನ್ ಟೆಕ್ನಾಲಜಿಯ ಮೊರೆ ಹೋಗಿ ಅದನ್ನೇ ಅಭಿನಯವೆಂದು ಭಾವಿಸುವ ಮಟ್ಟದ ಬದಲಾವಣೆ ಇಂದಿನ ನಟಿಯರಲ್ಲಿ ಕಾಣಬಹುದು……
ಇದು ಮಹಿಳಾ ಪಾತ್ರಗಳ ಒಂದು ಮುಖವಾದರೆ ಪುರುಷ ಸಾಮ್ರಾಜ್ಯದ ಒಳನುಗ್ಗಿ ಅದನ್ನು ತನ್ನ ಪ್ರತಿಭೆ ಚಾಕಚಕ್ಯತೆಯಿಂದ ಗಂಡಸನ್ನೇ ತನ್ನ ಅಡಿಯಾಳಾಗಿ ಮಾಡಿಕೊಳ್ಳುವ ಕೆಚ್ಚೆದೆಯ ಪಾತ್ರಗಳ ಇನ್ನೊಂದು ಮುಖ ಕೂಡ ಅನಾವರಣಗೊಳ್ಳುತ್ತಿದೆ…….
ಸಂಗೀತ ಸಾಹಿತ್ಯ ಸಂಕಲನ ಛಾಯಾಗ್ರಹಣ ಹಂಚಿಕೆ ಬಿಡುಗಡೆ ಮಾರುಕಟ್ಟೆ ಎಲ್ಲದರಲ್ಲೂ ವಿಶ್ವಮಟ್ಟದ ತಂತ್ರಜ್ಞಾನದ ಬಳಕೆಯನ್ನು ನೋಡಬಹುದು……. ಹೀಗೆ ಸಿನಿಮಾ ನಮ್ಮ ವ್ಯವಸ್ಥೆಯ ಭಾಗವಾಗಿ ನಮ್ಮೊಂದಿಗೆ ಚಲಿಸುತ್ತಿರುವುದು ಮನರಂಜನೆಯನ್ನೂ ಮೀರಿದ ಅರ್ಥ ಮೂಡಿಸುತ್ತದೆ. ವಿವರಿಸಲು ಕನ್ನಡ ಚಿತ್ರರಂಗದ ಸಾಕಷ್ಟು ಮಗ್ಗುಲುಗಳಿವೆ. ಈಗ ಚಿತ್ರರಂಗವೆಂಬ ಸಾಗರದಲ್ಲಿ ಒಂದು ಬೊಗಸೆ ನೀರನ್ನು ಕೈಯಲ್ಲಿ ಹಿಡಿದು ಅದರ ಸಣ್ಣ ರೂಪವಿದು. ಇನ್ನೂ ಅರಿಯಲಾಗದ ಅಸಂಖ್ಯ ವಿಷಯಗಳನ್ನು ನಿಮ್ಮ ಆಯ್ಕೆಗೆ ಬಿಡುತ್ತಾ…. ಮುಂದೆ ಮತ್ತಷ್ಟು ವಿಷಯಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡುವ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ಲೇಖನ-ವಿವೇಕಾನಂದ ಎಚ್. ಕೆ.
9844013068…