i
ಲಿಂಗಾಯತರಿಗೆ ಅವಹೇಳನ ಮಾಡಿದ್ದರೆ ನೇಣುಗಂಬಕ್ಕೆ ಹಾಕಿ-ಜಿ.ರಘು ಆಚಾರ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಲಿಂಗಾಯತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಕಿಡಿಗೇಡಿಗಳು ಬಿಡುಗಡೆ ಮಾಡಿರುವ ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ, ಒಂದು ವೇಳೆ ಲಿಂಗಾಯತರಿಗೆ ಅವಹೇಳನ ಮಾಡಿದ್ದರೆ ನನ್ನನ್ನು ನೇಣುಗಂಬಕ್ಕೆ ಹಾಕಿ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಜಿ.ರಘು ಆಚಾರ್ ಸವಾಲ್ ಹಾಕಿದರು.
ಚಿತ್ರದುರ್ಗ ಜಿಲ್ಲಾ ಪತ್ರಕರ್ತರ ಭವನದಲ್ಲಿ ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಲಿಂಗಾಯತರು ನನ್ನ ಸಹೋದರರು, ನಾನು ಲಿಂಗಾಯತ ಧರ್ಮದ ಅಪ್ಪಟ ಅನುಯಾಯಿ ಹಾಗೂ ಅಹಿಂದ ವರ್ಗಗಳ ಪರವಾಗಿದ್ದೇನೆಯೇ ಹೊರತು, ಯಾರಿಗೂ ವಿರೋಧಿಯಲ್ಲ, ನಾನು ಸುತ್ತೂರು ಮಠದಲ್ಲಿ ಓದಿ ಬೆಳೆದವನಾಗಿದ್ದು, ನನ್ನ ಜೀವಮಾನದಲ್ಲಿ ಎಂದೂ ಜಾತಿ ಬೇಧಮಾಡಿ ಗೊತ್ತಿಲ್ಲ, ಮಠ ಮಾನ್ಯಗಳು ನಮ್ಮ ಸಂಸ್ಕೃತಿಯ ಪ್ರತೀಕ, ನನಗೆ ಸುತ್ತೂರು ಮಠ ಸಂಸ್ಕಾರ ಕಲಿಸಿಕೊಟ್ಟಿದೆ. ನನಗೆ ಎಲ್ಲಾ ಜಾತಿ ಧರ್ಮಗಳ ಬಗ್ಗೆ ಗೌರವವಿದೆ. ನಾನು ಯಾವುದೇ ಜಾತಿ ಧರ್ಮದ ವಿರುದ್ದ ಹಗುರವಾಗಿ ಮಾತನಾಡಿಲ್ಲ. ಆದರೆ ಯಾರೋ ಕಿಡಿಗೇಡಿಗಳು ಯಾರದೋ ಆಡಿಯೋ ಬಳಸಿಕೊಂಡು ನನ್ನ ವಿರುದ್ದ ಷಢ್ಯಂತ್ರ ಮಾಡಿ ನನ್ನ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.
ನಕಲಿ ಆಡಿಯೋ ಕುರಿತು ಈಗಾಗಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ, ಕ್ಷಮೆ ಕೇಳಬೇಕು ಎನ್ನುತ್ತಿರುವವರು ಮೊದಲು ನನ್ನ ತಪ್ಪನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದ ರಘು ಆಚಾರ್, ರಾಜಕೀಯ ಮಾಡುವವರು ನೇರವಾಗಿ ಚುನಾವಣೆ ಎದುರಿಸಬೇಕು, ಅದನ್ನು ಬಿಟ್ಟು ಇಂತಹ ಕೀಳು ಮಟ್ಟಕ್ಕೆ ಇಳಿದು, ಕಡಿಮೆ ಜನಸಂಖ್ಯೆ ಇರುವ ಸಮುದಾಯದಿಂದ ಬಂದಿರುವ ನನ್ನ ವಿರುದ್ದ ಕುತಂತ್ರ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಾನು ಚಿತ್ರದುರ್ಗದಿಂದಲೇ ಸ್ಪರ್ಧೆ ಮಾಡುತ್ತೇನೆ, ಚಿತ್ರದುರ್ಗದ ಜನರು ನನ್ನ ಭವಿಷ್ಯ ಬರೆಯುತ್ತಾರೆ, ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ, ಆಗ ಇದೇ ಲಿಂಗಾಯತ ಸಹೋದರರೊಂದಿಗೆ ಮತ್ತೇ ಸುದ್ದಿಗೋಷ್ಠಿ ಮಾಡಿ ಹೇಳುತ್ತೇನೆ ಎಂದು ತಿಳಿಸಿದರು.
ನಾನು ನನ್ನ ಒಂಬತ್ತು ವರ್ಷದ ಸೇವಾವಧಿಯಲ್ಲಿ ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಯಾರಿಗೂ ಮೋಸ ವಂಚನೆ ಮಾಡಿಲ್ಲ, ನಾನು ಏನು ಕೆಲಸ ಮಾಡಿದ್ದೇನೆ ಎಂಬುದನ್ನು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ನನ್ನನ್ನು ಗಿಲ್ಲಿಸಿದ್ದ ಜನಪ್ರತಿನಿಧಿಗಳನ್ನು ಕೇಳಲಿ, ನಾನು ಪ್ರಾಮಾಣಿಕವಾಗಿ ಅಭಿವೃದ್ದಿ ರಾಜಕೀಯ ಮಾಡುತ್ತೇನೆ ಹೊರತು, ತೀರಾ ಇಷ್ಟು ಕೆಳಮಟ್ಟಕ್ಕೆ ಇಳಿದು ರಾಜಕೀಯ ಮಾಡುವುದಿಲ್ಲ, ನಾನು ತಪ್ಪು ಮಾಡಿದ್ದರೆ ಬಹಿರಂಗವಾಗಿ ಕ್ಷಮೆ ಕೇಳುತ್ತಿದ್ದೆ, ತಪ್ಪೇ ಮಾಡದಿದ್ದಾಗ ಕ್ಷಮೆ ಕೇಳುವ ಅಗತ್ಯವಿಲ್ಲ, ಬದಲಾಗಿ ನನ್ನ ವಿರುದ್ದ ನಕಲಿ ಆಡಿಯೋ ಬಿಟ್ಟಿರುವ ವ್ಯಕ್ತಿ ನನ್ನ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಮುಖಂಡ ಕೆ.ಆರ್ ಪುನೀತ್ ಸಿಂಗಾಪುರ, ದಲಿತ ಮುಖಂಡ ಕ್ಯಾದಿಗೆರೆ ತಿಪ್ಪೇಸ್ವಾಮಿ, ವಾಲ್ಮೀಕಿ ಸಮುದಾಯದ ಆನಂದ್, ಕಾಂಗ್ರೆಸ್ ಮುಖಂಡರಾದ ಮಹಮದ್ ರೆಹಮಾನ್, ವಸೀಂ ಬಡಾಮಖಾನ್ ಹಾಜರಿದ್ದರು.