i
ಚುನಾವಣೆಯಲ್ಲಿ ಸಹಾಯ ಮಾಡಿದ ಕಾಡುಗೊಲ್ಲರ ಮೇಲೆ ಅಟ್ರಾಸಿಟಿ ಕೇಸ್ ಹಾಕಿಸಿದ ಶಾಸಕಿ ಪೂರ್ಣಿಮಾ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಕಾಡುಗೊಲ್ಲ ಸಮಾಜದ ಬೃಹತ್ ಸಭೆ ನಡೆಯಿತು.
ಹಿರಿಯೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಮಾಜಿ ಸಚಿವ ಡಿ ಸುಧಾಕರ್ ಅವರಿಗೆ ಕಾಡು ಗೊಲ್ಲ ಸಮಾಜದ ಮುಖಂಡರು ಕಂಬಳಿ ಹೊದಿಸಿ ಕಾಡುಗೊಲ್ಲ ಯುವಕರು ಅದ್ಧೂರಿ ಸ್ವಾಗತ ಮಾಡಿದರು.
ಇದೇ ಸಂದರ್ಭದಲ್ಲಿ ಜವನಗೊಂಡನಹಳ್ಳಿಯ ಮುಖ್ಯ ರಸ್ತೆಯಲ್ಲಿ ಬೈಕ್ ರ್ಯಾಲಿ ಮುಖಾಂತರ ಕಾರ್ಯಕರ್ತರು ಸ್ವಾಗತ ಮಾಡಿರಲ್ಲದೆ ಸುಧಾಕರ್ ಅವರನ್ನು ಓಪನ್ ಕಾರಿನಲ್ಲಿ ರೋಡ್ ಶೋ ಮಾಡಿದರು.
ನಂತರ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಡಿ.ಸುಧಾಕರ್, ಕಳೆದ 10 ವರ್ಷದ ನನ್ನ ಅಧಿಕಾರಾವಧಿಯಲ್ಲಿ ಕಾಡುಗೊಲ್ಲರು ಸೇರಿದಂತೆ ಯಾವುದೇ ಜಾತಿಯ ಮೇಲೆ ಒಂದೇ ಒಂದು ಅಟ್ರಾಸಿಟಿ ಕೇಸ್ ಹಾಕಿಸಿಲ್ಲ, ಎಲ್ಲ ಜಾತಿಗಳನ್ನು ಗೌರವಿಸಿದ್ದೇನೆ. ಕ್ಷೇತ್ರದಲ್ಲಿ ಶಾಂತಿ ನೆಲಸುವಂತೆ ಮಾಡಿದ್ದೆ ಎಂದು ಹೇಳಿದರು.
ಆದರೆ ಶಾಸಕರಿಗೆ ಚುನಾವಣೆಯಲ್ಲಿ ಸಹಾಯ ಮಾಡಿದಂತ ಕಾಡುಗೊಲ್ಲ ಯುವಕ ಪ್ರಭು ಯಾದವ್ ಮತ್ತು ಕೃಷ್ಣ ಪೂಜಾರ್ ಮೇಲೆ ಅಟ್ರಾಸಿಟಿ ಕೇಸ್ ಹಾಕಿಸಿದರು. ಮ್ಯಾಕ್ಲೂರಹಳ್ಳಿ ಚಿದ್ದು ಅವರಿಗೆ (307 )ಕೇಸ್ ಹಾಕಿಸಿ ಜೈಲಿಗೆ ಕಳುಹಿಸಿದರು ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೆಸರೇಳದೆ ಸುಧಾಕರ್ ವಾಗ್ದಾಳಿ ಮಾಡಿದರು.
ಕಳೆದ 10 ವರ್ಷದಲ್ಲಿ ಕಾಡುಗೊಲ್ಲರ ದೇವಸ್ಥಾನಕ್ಕೆ ಕೋಟಿಗಟ್ಟಲೆ ಅನುದಾನ ನೀಡಿದ್ದೇನೆ. 3000 ಮನೆ ನೀಡಿದ್ದೇನೆ. ಕೃಷ್ಣ ಭವನ ನೀಡಿದ್ದೇನೆ, ಗಂಗಾ ಕಲ್ಯಾಣ ಬೋರ್ ಕೊಟ್ಟಿದ್ದೇನೆ ಮೂಲಭೂತ ಸೌಲಭ್ಯಕ್ಕೆ ಅನುದಾನ ನೀಡಿದ್ದೇನೆ ಜೆ ಜೆ ಹಳ್ಳಿ ಹೋಬಳಿಯ 122 ಹಳ್ಳಿಗೆ ಮನೆ ಮನೆಗೂ ಕುಡಿಯುವ ನೀರು ನೀಡಿದ್ದೇನೆ ಎಂದು ಹೇಳಿದರು.
ಕಾಡುಗೊಲ್ಲ ಸಂಘದ ಅಧ್ಯಕ್ಷ ಪಿ ಆರ್ ದಾಸ್ ಮಾತನಾಡಿ ಕಾಡುಗೊಲ್ಲರಿಗೆ ಬಿಜೆಪಿ ಪಕ್ಷದಿಂದ ಸಮಾಜಕ್ಕೆ ಯಾವುದೇ ಸಹಾಯ ಆಗಿಲ್ಲ ಎಸ್ ಟಿ ಮೀಸಲಾತಿ ಸೇರ್ಪಡೆಗೆ 10 ವರ್ಷ ಆದರೂ ಸೇರ್ಪಡೆ ಮಾಡಲಿಲ್ಲ ನಿಗಮ ಮಂಡಳಿ ಮಾಡಿ ಅನುದಾನ ಕೊಟ್ಟು ಅನುದಾನ ವಾಪಸ್ ತೆಗೆದುಕೊಂಡು ನೆಪ ಮಾತ್ರಕ್ಕೆ ಈಗ ಅಧ್ಯಕ್ಷರನ್ನು ಮಾಡಿದ್ದಾರೆ ಕಾಡುಗೊಲ್ಲರ ಎಸ್ ಟಿ ಸೇರ್ಪಡೆ ಆಗಬೇಕಾದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕು ಹಿರಿಯೂರಿನಲ್ಲಿ ಡಿ ಸುಧಾಕರ್ ಗೆಲ್ಲಬೇಕು. ಕಾಡುಗೊಲ್ಲ ಸಮಾಜ ಮುಂದಿನ ಚುನಾವಣೆಯಲ್ಲಿ ಡಿ ಸುಧಾಕರ್ ಗೆ ಮತ ನೀಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿ.ಎಸ್.ಪಾತಣ್ಣ, ನಗರಸಭೆ ಮಾಜಿ ಅಧ್ಯಕ್ಷೆ ಶಿವರಂಜಿನಿ ಯಾದವ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿ ಗೌಡ, ಕಾಡುಗೊಲ್ಲ ಸಮಾಜದ ಮುಖಂಡರಾದ ಯತೀಶ್ ಗೌಡ, ಎಸ್ ಆರ್. ತಿಪ್ಪೇಸ್ವಾಮಿ, ಪುಟ್ಟೇಗೌಡ, ದಿಂಡಾವರ ಮಹೇಶ್, ಬಬ್ಬೂರು ಹೇಮಂತ, ಎಸ್ ಟಿ ಮಂಜಣ್ಣ, ಯಲ್ಲದಕೆರೆ ಮಂಜು, ಜೆ.ಜೆ.ಹಳ್ಳಿ ಕೇಶವ್, ಪಿ.ಎಸ್.ಪ್ರಶಾಂತ್, ಚಿತ್ರಜಿತ್, ಚಿದು ಯಾದವ್ ಹಾಗೂ ಇನ್ನೂ ಹಲವಾರು ಜೆ.ಜಿ.ಹಳ್ಳಿ ಹೋಬಳಿಯ ಮುಖಂಡರು ಯುವಕರು ಉಪಸ್ಥಿತರಿದ್ದರು.