i
JDS ಅಧಿಕಾರಕ್ಕೆ ಬಂದರೆ ತೆಲಂಗಾಣ ಮಾದರಿಯಂತೆ ರೈತರ ಪ್ರತಿ ಎಕರೆಗೆ ವರ್ಷಕ್ಕೆ 10 ಸಾವಿರ ರೂ ಉಚಿತ…
ಚಂದ್ರವಳ್ಳಿ ನ್ಯೂಸ್, ಯಾದಗಿರಿ:
ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ರಾಜ್ಯ ಸರ್ಕಾರದ ಮಾದರಿಯಂತೆ ಪ್ರತಿಯೊಬ್ಬ ರೈತರಿಗೂ ಪ್ರತಿ ಎಕರೆಗೆ ವರ್ಷಕ್ಕೆ 10 ಸಾವಿರ ರೂ.ಗಳಂತೆ ಎಷ್ಟು ಎಕರೆ ಇದ್ದರೂ ನೆರವು ನೀಡಲಾಗುವುದು, ಜೊತೆಗೆ 24 ಗಂಟೆ ವಿದ್ಯುತ್ ನೀಡಲಾಗುವುದು ಎಂದು ಮಾಜಿ ಸಚಿವ, ಶಾಸಕ ಜೆಡಿಎಸ್ ನಾಯಕ ಬಂಡೆಪ್ಪ ಖಾಶೆಂಪೂರ್ ಭರವಸೆ ನೀಡಿದರು.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ಯರಗೋಳ ಗ್ರಾಮದಲ್ಲಿ ಆಯೋಜಿಸಿದ್ದ 88ನೇ ಜೆಡಿಎಸ್ ಪಂಚರತ್ನ ರಥ ಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿದರು. ತಾತ್ಕಲಿಕ ಲಾಭ ನೋಡದೆ ನಿರಂತರವಾಗಿ ರೈತರಿಗೆ, ಬಡವರಿಗೆ, ಅಂಗವಿಕಲರಿಗೆ, ವಯೋವೃದ್ಧರಿಗೆ ಅನುಕೂಲವಾಗುವಂತ ಜನಪರ ಕಾರ್ಯಕ್ರಮಗಳನ್ನು ಕುಮಾರಸ್ವಾಮಿ ಜಾರಿಗೆ ತರಲಿದ್ದಾರೆ. ರೈತಪರ ಕಾಳಜಿಯ ಕುಮಾರಸ್ವಾಮಿಯನ್ನು ಅಧಿಕಾರಕ್ಕೆ ತನ್ನಿ. ಇದು ಜನಪರ ಕಾಳಜಿಯ ಪಕ್ಷ ಎಂದ ಅವರು, ರೈತ ಕುಟುಂಬದ ಪ್ರತಿ ಯುವತಿಯ ಮನೆಗೆ 2 ಲಕ್ಷ ರು. ನೆರವು, ರೈತರ ಹಾಗೂ ಸ್ವ ಸಹಾಯ ಸಂಘಗಳ ಸಾಲ ಮನ್ನಾ, 65 ವರ್ಷ ಮೇಲ್ಪಟ್ಟ ಬಾರಿಗೆ 5 ಸಾವಿರ ಮಾಸಿಕ ವೃದ್ಧ್ಯಾಪ್ಯ ವೇತನ, ಮುಂತಾದವುಗಳ ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷವು 4 ಗ್ಯಾರಂಟಿ ಕಾರ್ಡುಗಳನ್ನು ಚುನಾವಣೆ ಪ್ರಣಾಳಿಕೆಯಿಂದ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಗ್ಯಾರಂಟಿ ಇಲ್ಲದ ಪಕ್ಷವಾಗಿದೆ ಎಂದು ಕಾಂಗ್ರೆಸ್ ಪ್ರಣಾಳಿಕೆ ಕುರಿತು ಬಂಡೆಪ್ಪ ಲೇವಡಿ ಮಾಡಿದರು.
ಜೆಡಿಎಸ್ ನಿಯೋಜಿತ ಅಭ್ಯರ್ಥಿ ಶರಣಗೌಡ ಕಂದಕೂರ ಗೆಲ್ಲಿಸಲು ಕ್ಷೇತ್ರದ ಜನರು ಮುಂದಾಗಬೇಕು ಎಂದು ಮನವಿ ಮಾಡಿದರು.