i
ಬಿಜೆಪಿ ಮುಖಂಡ ಕುಬೇಂದ್ರಪ್ಪ ಹಾಗೂ ಹಲವರು ಆಂಜನೇಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ…
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸ್ಪರ್ಧಾಕಾಂಕ್ಷಿ ಹೆಚ್.ಆಂಜನೇಯರವರು ಜೈಪುರ ಹಾಗೂ ಮಲ್ಲಾಡಿಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜಯಂತಿ ನಗರ ನೆಹರು ಕಾಲೋನಿ, ಅರೇಹಳ್ಳಿ, ಗುಂಡಿಮಡು, ಮಲ್ಕಾಪುರ, ಪುಣಜೂರು, ಅಗ್ರಹಾರ ಮತ್ತು ಶಿವಪುರ ಗ್ರಾಮಗಳಲ್ಲಿ ಮಂಗಳವಾರ ಮನೆ ಮನೆಗೆ ತೆರೆಳಿ ಬಿರುಸಿನ ಪ್ರಚಾರ ಕೈಗೊಂಡರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅನ್ನಭಾಗ್ಯ ಸೇರಿದಂತೆ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ನೀಡಿದೆ. ರೈತರು, ಮಹಿಳೆಯರು, ಶೋಷಿತರು, ಬಡವರು, ನಿರ್ಗತಿಕರ ಪರವಾಗಿರುವ ಕಾಂಗ್ರೆಸ್ನಿಂದ ಮಾತ್ರ ಸಾಮಾಜಿಕ ನ್ಯಾಯ ನೀಡಲು ಸಾಧ್ಯ. ಹಾಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಆಶೀರ್ವದಿಸಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಕ್ಷೇತ್ರದ ಮತದಾರರಲ್ಲಿ ಹೆಚ್.ಆಂಜನೇಯ ಮನವಿ ಮಾಡಿದರು.
ಈಗಾಗಲೆ ಉಚಿತ ಗ್ಯಾರೆಂಟಿ ಕಾರ್ಡ್ಗಳನ್ನು ವಿತರಿಸಲಾಗುತ್ತಿದ್ದು, ಅದರಲ್ಲಿ ಭರವಸೆ ನೀಡಿರುವಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನೂರು ಯೂನಿಟ್ ಉಚಿತ ವಿದ್ಯುತ್, ಜಿ.ಎಸ್.ಟಿ.ಗಾಗಿ ಐದುನೂರು ಹಾಗೂ ಅಡುಗೆ ಅನಿಲಕ್ಕಾಗಿ ಐದುನೂರು, ಬೆಲೆ ಏರಿಕೆಗಾಗಿ ಒಂದು ಸಾವಿರ ರೂ.ಗಳು ಒಟ್ಟು ಎರಡು ಸಾವಿರ ರೂ.ಗಳನ್ನು ಪ್ರತಿ ಮನೆಯ ಮಹಿಳೆಗೆ ಪ್ರತಿ ತಿಂಗಳು ನೀಡಲಾಗುವುದು. ನಮ್ಮದು ನುಡಿದಂತೆ ನಡೆಯುವ ಪಕ್ಷ. ಕೋಮುವಾದಿ ಬಿಜೆಪಿ.ಯಿಂದ ಜನ ಬೇಸತ್ತಿದ್ದು, ಕಾಂಗ್ರೆಸ್ಗೆ ರಾಜ್ಯದೆಲ್ಲೆಡೆ ಉತ್ತಮ ಒಲವು ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲೋಹಿತ್ಕುಮಾರ್, ಮುಖಂಡರಾದ ಮಂಜಣ್ಣ, ಶಿವಣ್ಣ, ದೇವರಾಜ್, ಅಶೋಕ್, ಪರಶುರಾಮ್ ಇನ್ನು ಮುಂತಾದವರು ಈ ಸಂದರ್ಭದಲ್ಲಿದ್ದರು.
ಹೊಳಲ್ಕೆರೆ:
ಹೊಳಲ್ಕೆರೆ ತಾಲ್ಲೂಕಿನ ಗುಂಡಿಮಡು ಗ್ರಾಮದ ಬಿಜೆಪಿ ಮುಖಂಡ ಕುಬೇಂದ್ರಪ್ಪ ಹಾಗೂ ಸಂಗಡಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಹೆಚ್.ಆಂಜನೇಯರವರಿಗೆ ಬೆಂಬಲ ಸೂಚಿಸಿದರು.
ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಹೆಚ್.ಆಂಜನೇಯರವರು ಕ್ಷೇತ್ರಾದ್ಯಂತ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳು ಹಾಗೂ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಸಂಗಡಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗಿರುವುದಾಗಿ ಕುಬೇಂದ್ರಪ್ಪ ತಿಳಿಸಿದರು.