i
ಡಿಶ್ ಪ್ರೇಂ ನೂರಾರು ಬಿಜೆಪಿ ಮುಖಂಡರು ಸುಧಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದ ರಾಜಕೀಯ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು ನೂರಾರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ.
ಮಾಜಿ ಸಚಿವ ಡಿ.ಸುಧಾಕರ್ ಅವರಿಂದ ಕಳೆದ ಚುನಾವಣೆಯಲ್ಲಿ ದೂರಾಗಿದ್ದ ಕ್ಷೇತ್ರದ ವಿವಿಧ ಸಮುದಾಯಗಳ ಮುಖಂಡರು ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿರುವ ನೂರಾರು ಬಿಜೆಪಿ ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಆರ್.ತಿಮ್ಮಯ್ಯ, ವಕೀಲ ಬಬ್ಬೂರು ಸುರೇಶ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಧನಂಜಯ್ ಕುಮಾರ್, ಉದ್ಯಮಿ ಬೀರೆನಹಳ್ಳಿ ಷಡಕ್ಷರಿ, ನಾಗೇಶ್, ವೇಲು ಸ್ವಾಮಿ ನಾಯ್ಡು, ಆರ್.ಆರ್. ರಮೇಶ್ ರಂಗನಾಥಪುರ, ಪಿಟ್ಲಾಲಿ ಕರಿಬಸಣ್ಣ, ಭಾಗ್ಯ ಕೀರ್ತಿ ಪ್ರಕಾಶ್, ವಿ.ಹೆಚ್.ರಾಜ್, ಪಾಟೇಲ್ ಸಂಜೀವಪ್ಪ, ಮಲ್ಲಿಕಾರ್ಜುನ್ ಆಲೂರು, ಫಕ್ರುದ್ದೀನ್ ಕೂನಿಕೆರೆ ಮತ್ತು ಬೆಂಬಲಿಗರು, ಸಿದ್ದಪ್ಪ, ಕುಂಚಿಟಿಗ, ಕಾಡುಗೊಲ್ಲ, ತಮಿಳು ಸಮುದಾಯ, ಉಪ್ಪಾರ ಸಮುದಾಯ, ವೀರಶೈವ ಸಮುದಾಯ, ಮುಸ್ಲಿಂ ಸಮುದಾಯದ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗುವ ಪಟ್ಟಿಯದ್ದಾರೆ ಎನ್ನಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದಿದ್ದ ಬಹುತೇಕರು ಬಿಜೆಪಿ ಸೇರಿದ್ದು ಈಗ ಅವರೆಲ್ಲರೂ ಬಿಜೆಪಿ ತೊರೆಯುವ ನಿರ್ಧಾರ ಮಾಡಿ ಬಿಜೆಪಿಗೆ ಶಾಕ್ ನೀಡಿದ್ದಾರೆ.
ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗೆಲುವಿಗೆ ಸಾಕಷ್ಟು ದುಡಿದಿದ್ದ ನೂರಾರು ಮುಖಂಡರು ಅದರಲ್ಲೂ ಕಾಡುಗೊಲ್ಲ ಮುಖಂಡರು ವಿವಿಧ ಸಮುದಾಯಗಳ ಮುಖಂಡರು ಬಿಜೆಪಿ ತೊರೆಯುವ ಮುನ್ಸೂಚನೆ ನೀಡಿದ್ದಾರೆ. ಉದ್ಯಮಿ, ಮಾಜಿ ನಗರಸಭಾ ಸದಸ್ಯ ಹಾಗೂ ಕಾಡುಗೊಲ್ಲ ಸಮುದಾಯ ಮುಖಂಡ ಜಿ. ಪ್ರೇಮ್ ಕುಮಾರ್(ಡಿಶ್ ಪ್ರೇಂ), ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಕರಿಯಮ್ಮ ಶಿವಣ್ಣ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಈ ಇಬ್ಬರು ಕಾಡುಗೊಲ್ಲ ಮುಖಂಡರುಗಳ ಮನೆಗೆ ಭೇಟಿ ನೀಡಿದ ಮಾಜಿ ಸಚಿವ ಡಿ.ಸುಧಾಕರ್ ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಹಿರಿಯೂರು ಕ್ಷೇತ್ರದ ಬಿಜೆಪಿ ಮನೆ ಖಾಲಿ ಮನೆಯಾಗುವ ಎಲ್ಲ ಸೂಚನೆಗಳು ಲಭ್ಯವಾಗುತ್ತಿದ್ದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರಿಗೆ ದೊಡ್ಡ ಹಿನ್ನೆಡೆ ಉಂಟಾಗಿದೆ. ಈಗಾಗಲೇ ಮಾಜಿ ನಗರಸಭೆ ಅಧ್ಯಕ್ಷ ಟಿ.ಚಂದ್ರಶೇಖರ್, ಎಸ್ಟಿ ಮೋರ್ಚಾದ ಅಧ್ಯಕ್ಷ ಮಂಜುನಾಥ್, ಮಾಜಿ ನಗರಸಭಾ ಸದಸ್ಯ ಪ್ರೇಮ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಕರಿಯಮ್ಮ, ಕಾಡುಗೊಲ್ಲ ಸಮುದಾಯ ಮುಖಂಡ ದಿಂಡವಾರ ಶಿವಣ್ಣ ಸೇರಿದಂತೆ ಮತ್ತಿತರರು ಪಕ್ಷ ತೊರೆದಿದ್ದು, ಬಿಜೆಪಿ ಗೆಲುವಿಗೆ ಹಿನ್ನಡೆಯಾಗಲಿದೆ.