i
ಏ.25 ರಿಂದ ಏ.29ರವರೆಗೆ ಕಣಿವೆ ಮಾರಮ್ಮ ದೇವಿ ರಥೋತ್ಸವ, ದನಗಳ ಜಾತ್ರಾ ಮಹೋತ್ಸವ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು: kanive maramma devi
ಹಿರಿಯೂರು ತಾಲೂಕಿನ ವಾಣಿವಿಲಾಸಪುರದ ಸಮೀಪದ ವಾಣಿ ವಿಲಾಸ ಜಲಾಶಯಕ್ಕೆ ಹೊಂದಿಕೊಂಡಿರುವ ಶ್ರೀಕಣಿವೆ ಮಾರಮ್ಮದೇವಿಯ ಬ್ರಹ್ಮ ರಥೋತ್ಸವ 29-04-203ರಂದು ಶುಕ್ರವಾರ ನಡೆಯಲಿದೆ. ಹಾಗೂ ವಿವಿಧ ಕಾರ್ಯಕ್ರಮಗಳು ಮತ್ತು ದನಗಳ ಭಾರೀ ಜಾತ್ರಾ ಮಹೋತ್ಸವ ದಿನಾಂಕ-25-04-2023 ರಿಂದ 29-04-23ರವರೆಗೆ ಅದ್ಧೂರಿಯಾಗಿ ನಡೆಯಲಿದೆ ಎಂದು ಶ್ರೀಕಣಿವೆ ಮಾರಮ್ಮದೇವಿ ದೇವಸ್ಥಾನದ ಸಮಿತಿಯವರು ತಿಳಿಸಿದ್ದಾರೆ.
ದಿನಾಂಕ-25-04-23ನೇ ಮಂಗಳವಾರ ಮದಲಿಂಗಿತ್ತಿ ಶಾಸ್ತ್ರ, ಏ.26 ರಂದು ಬುಧವಾರ ಗಂಗಾ ಪೂಜೆ ಮತ್ತು ಜಲ್ದಿ ಉತ್ಸವ, ಏ.27 ರಂದು ಗುರುವಾರ ಉತ್ಸವ ಮತ್ತು ಆರತಿ ಪೂಜೆ, 28 ರಂದು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಶ್ರೀಕಣಿವೆ ಮಾರಮ್ಮದೇವಿ ಅಮ್ಮನವರ ಬ್ರಹ್ಮ ರಥೋತ್ಸವ ಪೂಜಾ ಕಾರ್ಯಕ್ರಮ ಇರುತ್ತದೆ. ಏ.29 ರಂದು ಶನಿವಾರ ಸಿಡಿ ಉತ್ಸವವನ್ನು ಏರ್ಪಡಿಸಲಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.
ಹಿರಿಯೂರು, ಹೊಸದುರ್ಗ ತಾಲೂಕಿನ ಸಾವಿರಾರು ಭಕ್ತರು ಸೇರಿದಂತೆ ಜಿಲ್ಲೆಯಾದ್ಯಂತ ಸಾವಿರ ಭಕ್ತರು ದೇವಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಶೇಷಃ
ಪ್ರಸಿದ್ಧ ವಾಣಿ ವಿಸಾಲ ಸಾಗರ ಡ್ಯಾಂ ಬುಡಕ್ಕೆ ಹೊಂದಿಕೊಂಡಂತೆ ಇರುವ ಶ್ರೀಕಣಿವೆ ಮಾರಮ್ಮ ದೇವಿಗೆ ಭಕ್ತಾದಿಗಳು ನಾನಾ ರೀತಿಯ ಹರಕೆ ಮಾಡಿಕೊಳ್ಳುವುದುಂಟು. ರಥೋತ್ಸವದ ನಂತರ ಬಾಳೆ ಹಣ್ಣು, ಹೂವು ಇತ್ಯಾದಿಗಳನ್ನು ರಥೋತ್ಸವಕ್ಕೆ ಭಕ್ತರು ಎಸೆದು ತಮ್ಮ ಹರಕೆ ತೀರಿಸಿಕೊಳ್ಳುವರು. ಪ್ರಸಿದ್ಧ ವಾಣಿ ವಿಲಾಸ ಸಾಗರ ಡ್ಯಾಂ ಕಟ್ಟಡ ನಿರ್ಮಾಣದ ವೇಳೆ ಸಾಕಷ್ಟು ಅಡ್ಡಿ, ಆತಂಕಗಳು ಬಂದಾಗ ಶಕ್ತಿ ದೇವತೆ ಶ್ರೀಕಣಿವೆ ಮಾರಮ್ಮ ದೇವಿಯೇ ರಕ್ಷಣೆಯಾಗಿ ನಿಂತು ಡ್ಯಾಂ ಕಟ್ಟಡ ನಿರ್ಮಾಣ ಮಾಡಲು ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಪೂರ್ತಿ ಮಾಡಲಾಯಿತು ಎಂಬ ಪ್ರತೀತಿ ಇದೆ. ಈಗಲು ಡ್ಯಾಂ ಕಟ್ಟಡವನ್ನು ಕಣಿವೆ ಮಾರಮ್ಮ ದೇವಿ ರಕ್ಷಣೆ ಮಾಡುತ್ತಿದ್ದಾಳೆ ಎಂದು ಕೆಲವರು ಹೇಳುತ್ತಿದ್ದಾರೆ. ಸಾಕಷ್ಟು ಭಕ್ತ ಕೋಟಿಯನ್ನು ಹೊಂದಿರುವ ಶುಕ್ರವಾರ, ಮಂಗಳವಾರ ದೇವಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತಿದೆ. ಅಲ್ಲದೆ ಪ್ರತಿನಿತ್ಯವು ದೇವಿಗೆ ವಿಶೇಷ ಪೂಜೆ ನಡೆಯುತ್ತಿರುತ್ತದೆ. ಡ್ಯಾಂ ನೋಡಲು ಬರುವ ಸಾವಿರಾರು ಪ್ರವಾಸಿಗರು ದೇವಿಯ ದರ್ಶನ ಪಡೆದು ಭಕ್ತರಾಗುವುದು ಉಂಟು.
ಸಿಡಿ ಉತ್ಸವ- ಕಣಿವೆ ಮಾರಮ್ಮ ದೇವಿಯ ಸಿಡಿ ಉತ್ಸವ ನಂತರ ದೇವಿ ಗುಡ್ಡ ಇಳಿಯುವ ಕಾರ್ಯಕ್ರಮ ಇರುತ್ತದೆ, ಭರಮಗಿರಿ ಕೆರೆ ಹಿಂಭಾಗದಲ್ಲಿ ದೊಡ್ಡ ಎಡೆ ಸೇವೆ ಮುಗಿಸಿಕೊಂಡು ದೇವಿ ಗುಡ್ಡ ಹತ್ತುವ ಕಾರ್ಯಕ್ರಮ ಇರುತ್ತದೆ. ಚಪ್ಪರ ಇಳಿಸುವ ಪೂಜಾ ಕಾರ್ಯಕ್ರಮ ಸೇರಿದಂತೆ ಮತ್ತಿತರ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.