i
ಹಿರಿಯೂರಿನಲ್ಲಿ ಶೌಚಾಲಯ ಸಮಸ್ಯೆ, ಮಹಿಳೆಯರು ವಯೋವೃದ್ಧರ ಪಾಡು ಆ ದೇವರಿಗೆ ಪ್ರೀತಿ…
ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಹೆಬ್ಬಾಗಿಲಂತಿರುವ ಹಿರಿಯೂರು ತಾಲೂಕು ಕೇಂದ್ರದಲ್ಲಿ ಶೌಚಾಲಯ ಸಮಸ್ಯೆ ತೀವ್ರವಾಗಿದ್ದು ತಾಲೂಕು ಕೇಂದ್ರಕ್ಕೆ ಬಂದು ಹೋಗುವ ಪ್ರಯಾಣಿಕರ ಪರದಾಟ ಹೇಳ ತೀರದು, ಶೌಚಾಲಯ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು ನಗರಸಭೆ ಆಡಳಿತ ಕಣ್ಣು ಮುಚ್ಚಿ ಕೂತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಾರೆ.
ಹಿರಿಯೂರು ನಗರದ ಟಿಬಿ ವೃತ್ತದಲ್ಲಿನ ಚಳ್ಳಕೆರೆ ರಸ್ತೆಯ ಬಸ್ ನಿಲ್ದಾಣದ ಹಿಂಭಾಗದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ನಗರಸಭೆಯವರು ಒಂದು ಶೌಚಾಲಯ ನಿಮಾರ್ಣ ಮಾಡಲು ಕಾಮಗಾರಿ ಆರಂಭಿಸಿದ್ದರು. ಆ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದ್ದು ನಗರಸಭೆ ಕಣ್ಣು ಮುಚ್ಚಿ ಕುಳಿತಿದೆ. ಹಿರಿಯೂರು ತಾಲೂಕಿನ ವಿವಿಧ ಹಳ್ಳಿಗಳಿಂದ ಮತ್ತು ಹೊರ ಜಿಲ್ಲೆ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ ಚಳ್ಳಕೆರೆ, ಬಳ್ಳಾರಿ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಬಂದು ಹೋಗುವ ಪ್ರಯಾಣಿಕರಿಗೆ ಶೌಚಾಲಯ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ. ಅದರಲ್ಲೂ ಮಹಿಳೆಯರು, ವಯೋವೃದ್ಧರು, ಮಕ್ಕಳು ಪಾಡು ಹೇಳ ತೀರದಾಗಿದೆ. ಸಾರ್ವಜನಿಕರು, ಪ್ರಯಾಣಿಕರು ಮಲ ಮೂತ್ರ ವಿಸರ್ಜನೆ ಮಾಡಲು ಶೌಚಾಲಯಕ್ಕೆ ಹೋಗಬೇಕಂದರೆ ಪರದಾಡುವಂತಾಗಿದೆ. ಟಿ.ಬಿ.ವೃತ್ತದ ಬಳಿ ಒಂದು ಸಾರ್ವಜನಿಕ ಶೌಚಾಲಯ ಕೂಡಾ ಇಲ್ಲ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಮತ್ತು ಎರಡು ಮೂರು ರಾಷ್ಟ್ರೀಯ ಹೆದ್ದಾರಿಗಳು ಟಿಬಿ ವೃತ್ತದಿಂದ ಹಾದು ಹೋಗುತ್ತಿದ್ದರೂ ಕನಿಷ್ಠ ಒಂದು ಶೌಚಾಲಯ ವ್ಯವಸ್ಥೆ ಮಾಡಬೇಕೆನ್ನುವ ಸಾಮಾನ್ಯ ಜ್ಞಾನ ನಗರಸಭೆಗೆ ಇದ್ದಂತಿಲ್ಲ.
ಟಿಬಿ ವೃತ್ತದಿಂದ ಹಿರಿಯೂರು, ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ, ಹುಳಿಯಾರು, ಬಳ್ಳಾರಿ ಕಡೆಗಳಿಂದ ಬಂದು ಬೆಂಗಳೂರಿಗೆ ಹೋಗುವಂತ ಪ್ರಯಾಣಿಕರಿಗೆ ಶೌಚಾಲಯ ಸಮಸ್ಯೆ ತೀವ್ರವಾಗಿದೆ.
ಶೌಚಾಲಯ ನಿರ್ಮಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡಿದ್ದರೂ ನಗರಸಭೆಗೆ ಇದು ತಿಳಿಯದಾಗಿದೆ. ಶೌಚಾಲಯ ಇಲ್ಲದಿರುವುದು ವಿಪರ್ಯಾಸವಾಗಿದೆ.
ನಗರಸಭೆ ಅನುದಾನದಲ್ಲಿ ಶೌಚಾಲಯ ಕಾಮಗಾರಿ ಪ್ರಾರಂಭವಾಗಿ ವರ್ಷ ಕಳೆದರೂ ಕಾಮಗಾರಿ ಮಾತ್ರ ಪೂರ್ಣವಾಗಿಲ್ಲ, ಅಲ್ಲದೆ ಹಂದಿ, ನಾಯಿ ಸೇರಿಕೊಳ್ಳುವ ಗೂಡಾಗಿದೆ. ದೂರ ಪ್ರಯಾಣಿಸುವ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತದೆ. ನಗರಸಭೆ ಎಚ್ಚತ್ತುಕೊಂಡು ಕಾಮಗಾರಿ ಮುಗಿಸಿ ದೂರ ಹೋಗುವ ಪ್ರಯಾಣರಿಗೆ ಅನುಕೂಲ ಮಾಡಿಕೊಂಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಗೌರವ ಅಧ್ಯಕ್ಷ ಗೋ ಬಸವರಾಜು ಒತ್ತಾಯಿಸಿದ್ದಾರೆ.