i
ದೇವೇಗೌಡರ ಸಾವು ಬಯಸಿದ್ದವರಿಗೆ ತಕ್ಕ ಪಾಠ ಕಲಿಸಿ-ಕುಮಾರಸ್ವಾಮಿ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ರೈತರ, ಮಹಿಳೆಯರ, ಬಡವರ ಭವಿಷ್ಯಕ್ಕಾಗಿ ಮಧುಗಿರಿ ಕ್ಷೇತ್ರದ ಮತದಾರರು ಜೆಡಿಎಸ್ ಗೆಲ್ಲಿಸುವ ಪಣ ತೊಡಬೇಕು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ಅವರು ಮಧುಗಿರಿಯ ಕೈಮರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಕೊಂಡವಾಡಿ ಚಂದ್ರಶೇಖರ್ಗೆ ಜೆಡಿಎಸ್ ಶಾಲು ಹೊದಿಸಿ ಸ್ವಾಗತ ಕೋರಿದ ಅವರು, ಹಿರಿಯ ಮುತ್ಸದ್ದಿಗಳಾದ ದೇವೇಗೌಡರ ಸಾವನ್ನು ಬಯಸಿದ್ದವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ದೇವೇಗೌಡರ ಆಶೀರ್ವಾದದಿಂದ ಗೆದ್ದ ಕೆ.ಎನ್.ರಾಜಣ್ಣ ಈಗ ದೇವೇಗೌಡರ ಸಾವನ್ನು ಬಯಸಿದ್ದಾರೆ. ಕುತಂತ್ರ ರಾಜಕಾರಣದಿಂದ ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಲಾಯಿತು. ಆ ನೋವಿನಿಂದ ಮಾನಸಿಕವಾಗಿ ಕುಗ್ಗಿ ಇವತ್ತು ಆರೋಗ್ಯ ತಪ್ಪಿದ್ದಾರೆ. ದೇವೇಗೌಡರು ಇನ್ನೂ ನಮ್ಮ ಜೊತೆ ಜೀವಂತವಾಗಿ ಇರಬೇಕಾದರೆ ತುಮಕೂರಿನಲ್ಲಿ 11ಕ್ಕೆ 11 ಕ್ಷೇತ್ರ ಗೆಲ್ಲಿಸಿ ಕೊಡಬೇಕು. ತುಮಕೂರು ಜಿಲ್ಲೆಯ ಜನತೆ ಈ ಕೆಲಸ ಮಾಡಬೇಕು, ದೇವೇಗೌಡರ ಸಾವನ್ನು ಬಯಸಿದ್ದವರಿಗೆ ಪಾಠ ಕಲಿಸಿದಂತಾಗಲಿದೆ ಎಂದು ಅವರು ಭಾವನಾತ್ಮಕವಾಗಿ ಹೇಳಿದರು.
ಮಧುಗಿರಿ ಕ್ಷೇತ್ರಕ್ಕೆ 2008ರ ಉಪ ಚುನಾವಣೆಯಲ್ಲಿ ಅನಿತಾಳನ್ನು ನಿಲ್ಲಿಸಿದೆ. ಅದಕ್ಕೂ ಮುಂಚೆ ಅನಿತಾ ಬಳಿ ಒಪ್ಪಿಗೆ ಕೇಳಿದೆ. ಆಗ ನನ್ನ ಮಗ ನಿಖಿಲ್, ನಮ್ಮಪ್ಪ ತೀಟೆ ತೀರಿಸಿಕೊಳ್ಳಲು ನಿನ್ನನ್ನು ನಿಲ್ಲಿಸ್ತಿದ್ದಾನೆ, ನೀನು ಸ್ಪರ್ಧೆ ಮಾಡಬೇಡ ಎಂದಿದ್ದ. ಕೊನೆಗೂ ಅನಿತಾ ಸ್ಪರ್ಧೆ ಮಾಡಿ ಗೆದ್ದು ಬಂದಳು. ಅನಿತಾ ಮದುವೆಗೆ ಮುಂಚೆ ನನಗೆ ಷರತ್ತು ಹಾಕಿದ್ದಳು. ರಾಜಕೀಯಕ್ಕೆ ಹೋಗಲ್ಲ ಅಂದರೆ ಮಾತ್ರ ಮದುವೆ ಆಗುವೆ ಅಂದಿದ್ದರು. ದೇವರ ಇಚ್ಛೆ ಅನಿತಾ ಕೂಡ ರಾಜಕೀಯಕ್ಕೆ ಬರುವಂತಾಯಿತು ಎಂದು ಕುಮಾರಸ್ವಾಮಿ ಹೇಳಿದರು.