i
ಜೆಡಿಎಸ್ ಅಧಿಕಾರಕ್ಕೆ ಬಂದರೆ ಪರಶುರಾಂಪುರ ತಾಲೂಕು ಕೇಂದ್ರ ರಚನೆ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ: jds party hdk
ಕರ್ನಾಟಕ ರಾಜ್ಯವನ್ನು ಸುಭಿಕ್ಷ ರಾಜ್ಯವನ್ನಾಗಿ ಮಾಡುವ ಮಹಾನ್ ಯೋಜನೆಯನ್ನು ಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್ ಪಕ್ಷ ರೂಪಿಸಿದ್ದು, ಇದನ್ನು ಸಾಕಾರಗೊಳಿಸಲು ಜೆಡಿಎಸ್ ಪಕ್ಷಕ್ಕೆ ರಾಜ್ಯದಲ್ಲಿ ೧೩೦ ಸ್ಥಾನದಲ್ಲಿ ಗೆಲ್ಲುವು ತಂದುಕೊಡುವಂತೆ ಸಾರ್ವಜನಿಕರಲ್ಲಿ ಜೆಡಿಎಸ್ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ಅವರು, ಭಾನುವಾರ ತಡರಾತ್ರಿ ನಗರದ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಜೆಡಿಎಸ್ ಪಕ್ಷ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಪರಶುರಾಂಪುರ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ರಚನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಜೆಡಿಎಸ್ನ ಸಾವಿರಾರು ಕಾರ್ಯಕರ್ತರು ಕುಮಾರಸ್ವಾಮಿಗೆ ಕೋಸು, ಹೂ, ಈರುಳ್ಳಿ, ಈಚಲಕಾಯಿ, ಸಾಲ ಮನ್ನಾ ಮಾಡಿದ ಆದೇಶ ಪ್ರತಿಗಳ ಹಾರವನ್ನು ಹಾಕಿ ಪಟಾಕಿ ಸಿಡಿಸಿ ವೇದಿಕೆಗೆ ಬರಮಾಡಿಕೊಂಡರು.
ರಾಜ್ಯದ ಪ್ರತಿಯೊಬ್ಬ ಕೂಲಿಕಾರ್ಮಿಕರೂ ಸೇರಿದಂತೆ ಎಲ್ಲಾ ಬಡ ಜನರಿಗೆ ಮನೆ ನಿರ್ಮಾಣ, ರೈತರಿಗೆ ಬೀಜ, ಗೊಬ್ಬರ ಕೊಳ್ಳಲು ಪ್ರತಿ ಎಕರೆಗೆ ೧೦ ಸಾವಿರದಂತೆ ಉಚಿತ ಸಾಲ, ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲೂ ಸುಸಜ್ಜಿತ ಆಸ್ಪತ್ರೆ, ಪ್ರತಿ ವೃದ್ದರಿಗೂ ಮಾಸಿನ ೫ ಸಾವಿರ, ವಿಧವೆಯರಿಗೆ ೨೫೦೦, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ೭ ಸಾವಿರ ಹೆಚ್ಚಿನ ವೇತನ, ೧೫ ವರ್ಷ ಪೂರೈಸಿದವರಿಗೆ ಪಿಂಚಣಿ, ಸ್ತ್ರಿ ಶಕ್ತಿ ಸ್ವಸಹಾಯ ಗುಂಪುಗಳ ಸಂಪೂರ್ಣ ಸಾಲ ಮನ್ನಾ, ರಾಜ್ಯದ ಪ್ರತಿ ಮನೆಗಳಲ್ಲೂ ಶೌಚಾಲಯ ನಿರ್ಮಾಣ ಮಾಡುವೆ.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಸರ್ಕಾರಗಳು ರಾಜ್ಯದ ರೈತರೂ ಸೇರಿದಂತೆಎಲ್ಲಾ ವರ್ಗದ ಜನರ ಹಿತವನ್ನು ಕಾಯುವಲ್ಲಿ ವಿಫಲವಾಗಿವೆ. ನನ್ನ ಆರೋಗ್ಯದ ಸಮಸ್ಯೆಯ ನಡುವೆಯೂ ಜನರ ಕಲ್ಯಾಣಕ್ಕಾಗಿ ಈ ಯಾತ್ರೆ ಕೈಗೊಂಡಿದ್ದೇನೆ. ನಾನು ಮುಖ್ಯಮಂತ್ರಿಯಾಗಿ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಿದ್ದೇನೆ. ಯಾವ ಸರ್ಕಾರವೂ ಮಾಡದ ರೈತ ಸಾಲ ಮನ್ನಾವನ್ನು ನಾನು ಮಾಡಿದೆ. ನನ್ನ ಅವಧಿಯಲ್ಲಿ ರಾಜ್ಯದ ೨೬ ಲಕ್ಷ ರೈತ ಕುಟುಂಬಗಳ ೨೫ ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ. ಚಳ್ಳಕೆರೆ ತಾಲ್ಲೂಕಿನ ೧೯ ಸಾವಿರ ರೈತರ ೧೬೦ ಕೋಟಿ ಸಾಲ ಮನ್ನಾ ಮಾಡಿದ್ದೇನೆ. ನೀಡಿದ ಭರವಸೆಯನ್ನು ಈಡೇರಿಸದೆ ಸುಮ್ಮನೆ ಕುಳಿತಿಲ್ಲ. ಉಚಿತ ಶಿಕ್ಷಣ, ಎಲ್ಲರಿಗೂ ಆರೋಗ್ಯ, ಸರ್ಕಾರದ ಎಲ್ಲಾ ಯೋಜನೆಗಳು ಬಡ ಜನರಿಗೆ ತಲುಪುವ ಕಾರ್ಯ ಮಾಡುತ್ತಾ ಬಂದಿದ್ದೇನೆ. ಎಲ್ಲಾ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿದ್ದೇನೆ. ಪ್ರಸ್ತುತ ದರಿದ್ರ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ರೈತರಿಗೆ ನೀಡಬೇಕಾದ ೧೮ ಸಾವಿರ ಕೋಟಿ ಸಾಲವನ್ನು ಇನ್ನೂ ಮನ್ನಾ ಮಾಡಿಲ್ಲ, ರೈತರ ಬಗ್ಗೆ ಕೇವಲ ಪತ್ರಿಕೆಗಳಲ್ಲಿಪ್ರಚಾರ ಮಾಡುತ್ತಾ ಜನರನ್ನು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ರೈತರ ಸಾಲ ಮನ್ನಾ ವಿಚಾರದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ವಿರೋಧ ವ್ಯಕ್ತಪಡಿಸಿದರೂ ನಾನು ಅದನ್ನು ಗಣನೆಗೆ ತೆಗೆದುಕೊಳ್ಳದೆ ರೈತರ ಸಾಲ ಮನ್ನಾ ಮಾಡಿದೆ ಎಂದರು. ರಾಜ್ಯದಲ್ಲಿ ಪಂಚರತ್ನ ರಥ ಯಾತ್ರೆಯ ಮೂಲಕ ಜನಜಾಗೃತಿ ಮಾಡುತ್ತಿದ್ದು, ಜನರು ಈ ಬಾರಿ ಜೆಡಿಎಸ್ಗೆ ಅಧಿಕಾರ ಕೊಡುವ ಸಂಕಲ್ಪ ಮಾಡಿದ್ದಾರೆಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಮಾಜಿ ಪ್ರಧಾನಮಂತ್ರಿ ದೇವೇಗೌಡ್ರರು ೯೨ನೇ ವಯಸ್ಸಿನಲ್ಲೂ ರಾಷ್ಟ್ರ ಮತ್ತು ರಾಜ್ಯದ ಹಿತದ ಬಗ್ಗೆ ಚಿಂತನೆ ನಡೆಸುತ್ತಾರೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಅವರ ಅಭಿವೃದ್ದಿಯ ಬಗ್ಗೆ ಚಿಂತನೆ ನಡೆಸುತ್ತಾರೆ. ಈ ಹಿಂದೆ ಮಾಜಿ ಪ್ರಧಾನಮಂತ್ರಿ ಚಂದ್ರಶೇಖರ್ ಅವಧಿಯಲ್ಲಿ ಎಚ್.ದೇವೇಗೌಡರು, ಎಸ್ಟಿ ಮೀಸಲಾತಿ ಆದೇಶವನ್ನು ತಂದರು. ಆದರೆ, ಇಂದಿನ ಸರ್ಕಾರ ಇದು ನನ್ನದು ಎಂದು ಸುಳ್ಳು ಪ್ರಚಾರ ನಡೆಸುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಹೆಚ್ಚು ಆದ್ಯತೆ ನೀಡಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಣ್ಣ ಕಾಂಗ್ರೆಸ್ ಪಕ್ಷದ ೧೭ ಶಾಸಕರನ್ನು ಬಿಜೆಪಿಗೆ ಕಳುಹಿಸಿ ಕುಮಾರಣ್ಣನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಆದರೆ, ರಾಜ್ಯದ ಜನತೆ ಇಂದು ೧೩೦ ಸ್ಥಾನ ನೀಡಿ ಕುಮಾರಣ್ಣನನ್ನು ಮತ್ತೆ ಮುಖ್ಯಮಂತ್ರಿ ಮಾಡುವ ಅಭಿಲಾಷೆ ಹೊಂದಿದ್ದಾರೆ ಎಂದರು.
ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ಕುಮಾರ್ ಮಾತನಾಡಿದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ, ಮಾಜಿ ಶಾಸಕ ಜಿ.ಬಸವರಾಜಮಂಡಿಮಠ, ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಗೌರವಾಧ್ಯಕ್ಷ ಎಚ್.ಆನಂದಪ್ಪ, ಹಿರಿಯೂರು ಅಭ್ಯರ್ಥಿ ಎಂ.ರವೀಂದ್ರ, ಹನುಮಂತಪ್ಪ, ಎಲೆಭದ್ರಣ್ಣ, ನಗರಸಭಾ ಸದಸ್ಯರಾದ ಸಿ.ಶ್ರೀನಿವಾಸ್, ವಿ.ವೈ.ಪ್ರಮೋದ್, ಕವಿತಾನಾಯಕಿ, ತಿಪ್ಪಮ್ಮ, ನಿರ್ಮಲ, ಸಿ.ಎಂ.ವಿಶುಕುಮಾರ್, ನಾಗವೇಣಿ, ಟಿ.ವಿಜಯಕುಮಾರ್, ರವಿಕುಮಾರ್, ಎಸ್.ಟಿ.ವಿಜಯ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.