i
ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ನತ್ತ ಮುಖ ಮಾಡಿದ ಗೂಳಿಹಟ್ಟಿ ಶೇಖರ್…
ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಬಿಜೆಪಿ ಪಕ್ಷದಿಂದ ಹೊಸದುರ್ಗ ಕ್ಷೇತ್ರಕ್ಕೆ ಟಿಕೆಟ್ ಸಿಗದ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಪಕ್ಷದತ್ತ ಮುಖ ಮಾಡಿರುವ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಶಿರಸಿಯಲ್ಲಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಚೇರಿಗೆ ಗುರುವಾರ ರಾತ್ರಿ 9ರ ಸುಮಾರಿಗೆ ಬಂದ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆಗೆ ಮುಂದಾದ ಶಾಸಕ ಗೂಳಿಹಟ್ಟಿ ಶೇಖರ್ ಮನವೊಲಿಸಲು ಕಾಗೇರಿ ಅವರು ಪ್ರಯತ್ನ ವಿಫಲವಾಯಿತು ಎನ್ನಲಾಗಿದೆ.
ನಂತರ ಪತ್ರಕರ್ತರ ಜೊತೆ ಮಾತನಾಡಿದ ಗೂಳಿಹಟ್ಟಿ, ಹೊಸದುರ್ಗ ವಿಧಾನಸಭೆ ಕ್ಷೇತ್ರ ಸಾಮಾನ್ಯವಾಗಿದ್ದರೂ ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿಲ್ಲ. ನನಗೆ ಟಿಕೆಟ್ ನೀಡದಿರುವುದು ಪಕ್ಷ ವರಿಷ್ಠರ ನಿಲುವು. ಆದರೆ ವಿಜಯೇಂದ್ರ ಆಪ್ತರಿಗೆ ಟಿಕೆಟ್ ನೀಡುವುದಕ್ಕೆ ಅವಕಾಶ ನೀಡಲಾಗಿದೆ. ಈ ಹಿನ್ನಲೆಯಲ್ಲಿ ರಾಜೀನಾಮೆ ಕೊಟ್ಟು, ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ. ನನಗೆ ಇನ್ನೂ ವಯಸ್ಸಿದೆ. ನನ್ನ ನಂಬಿದ ಕಾರ್ಯಕರ್ತರಿಗೆ ಅನ್ಯಾಯ ಮಾಡಲಾರೆ. ಹಲವು ಪಕ್ಷಗಳಿಂದ ಕರೆ ಬಂದಿದ್ದು, ಮುಂದಿನ ತಿರ್ಮಾನ ಕೈಗೊಳ್ಳುತ್ತೇನೆ. ಮುಂದಿನ ನಡೆಯ ಮಾತುಕತೆಯ ನಂತರ ತೀರ್ಮಾನ ಆಗಲಿದೆ. ಬೆಂಬಲಿಗರ ಸಭೆ ನಡೆಸಿ ತೀರ್ಮಾನಿಸುತ್ತೇನೆ. ಮೀಸಲು ಕ್ಷೇತ್ರದಲ್ಲಿ ಆಯಾ ಸಮುದಾಯದವರಿಗೆ ಟಿಕೆಟ್ ನೀಡುವ ಕಲ್ಪನೆ ಪಕ್ಷದಲ್ಲಿದೆ. ಈ ವಿಷಯವಾಗಿ ಯಾರನ್ನೂ ಟೀಕೆ ಮಾಡುವುದಿಲ್ಲ ಎಂದರು.
ಗೂಳಿಹಟ್ಟಿ ಶೇಖರ್ ಹೊಸದುರ್ಗ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿದ್ದರು. 2018ರಲ್ಲಿ ಗೆಲುವು ಸಾಧಿಸಿದ್ದ ಗೂಳಿಹಟ್ಟಿ ಶೇಖರ್ ಸಹಜವಾಗಿ ಬಿಜೆಪಿಯಿಂದ ಮರು ಸ್ಪರ್ಧೆ ಬಯಸಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ತಾಲ್ಲೂಕು ಬಿಜೆಪಿಯಲ್ಲಿ ಅನೇಕ ರಾಜಕೀಯ ಬದಲಾವಣೆಗಳಾಗಿದ್ದವು.
ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವಂತೆ ಹೆಚ್ಚಿನ ಸಲಹೆ ಸೂಚನೆಗಳು ಬಂದಿದ್ದು ಈಗಾಗಲೇ ರಘು ಆಚಾರ್ ಮೂಲಕ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರನ್ನು ದೂರವಾಣಿ ಮೂಲಕ ಭೇಟಿ ಮಾಡಿ ಮಾತನಾಡಿರುವ ಕುರಿತು ವರದಿಯಾಗಿದ್ದು ಶೀಘ್ರ ಜೆಡಿಎಸ್ ಸೇರಲಿದ್ದಾರೆ ಎನ್ನಲಾಗಿದೆ.