i
ತೋಟ ಒಣಗಿಸಿಕೊಂಡ ಯಾರೊಬ್ಬರೂ ಸುಧಾಕರ್ ಮತ ಹಾಕಲ್ಲ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಶಿವಪ್ಪನಾಯಕ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಜೆಡಿಎಸ್ ಮುಖಂಡ ಜಯಶೀಲನಾಯ್ಕ ಬಬ್ಬೂರು ಫಾರಂ, ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಕೀಲ ಎಂ.ಆರ್. ಹನುಮಂತಪ್ಪ, ಸುಂದರ್, ಬುಡೇನ್ ಸಾಬ್ ಮತ್ತು ಜೆಡಿಎಸ್ ಪುರಸಭೆಯ ಮಾಜಿ ಸದಸ್ಯ ಮಾರಪ್ಪ ಇವರುಗಳು ಶಾಸಕಿ ಪೂರ್ಣಿಮಾಶ್ರೀನಿವಾಸ್ ಹಾಗೂ ಡಿ.ಟಿ.ಶ್ರೀನಿವಾಸ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಪೂರ್ಣಿಮಾಶ್ರೀನಿವಾಸ್ ಮಾತನಾಡಿ ಕ್ಷೇತ್ರದಲ್ಲಿ ಅಭಿವೃದ್ಧಿ ತಂದು ಬದಲಾವಣೆ ಮಾಡಿದ್ದರಿಂದಾಗಿ ಅನೇಕರು ಬಿಜೆಪಿಯತ್ತ ಮುಖಮಾಡಿದ್ದಾರೆ. ಕ್ಷೇತ್ರದ ಮಹಿಳಾ ಶಾಸಕಿಯಾಗಿ ಕ್ಷೇತ್ರವನ್ನು ಪ್ರತಿನಿಧಿಸಿ ಸರ್ಕಾರದ ಮಟ್ಟದಲ್ಲಿ ಅನುದಾನ ತಂದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಮತದಾರರಿಗೆ ಮನವರಿಕೆಯಾಗಿದೆ. ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಗುರಿ ನನ್ನದಾಗಿದ್ದು ಜಾತಿಜಾತಿಗಳ ಮಧ್ಯೆ ಕೊಳ್ಳಿ ಇಡುವ ಕೆಲಸ ಮಾಡುತ್ತಿರುವ ಇತರೆ ಪಕ್ಷಗಳಿಗೆ ಮತದಾರರೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಹೇಳಿದರು.
ಬಿಜೆಪಿ ಸೇರ್ಪಡೆಯಾದ ವಕೀಲ ಎಂ.ಆರ್ ಹನುಮಂತಪ್ಪ ಮಾತನಾಡಿ ನಾವುಗಳು ಯಾರೂ ಕೂಡ ಅಧಿಕಾರ ಬಯಸಿ ಬಂದವರಲ್ಲ ಶಾಸಕಿ ಪೂರ್ಣಿಮಾಶ್ರೀನಿವಾಸ್ ರವರ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಸೇರ್ಪಡೆಯಾಗಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಡಿ. ಸುಧಾಕರ್ ತನ್ನ ಹತ್ತು ವರ್ಷಗಳ ಆಡಳಿತದಲ್ಲಿ ಹಿರಿಯೂರು ತಾಲ್ಲೂಕನ್ನು ಬರದ ನಾಡನ್ನಾಗಿಸಿ ಪರಿವರ್ತಿಸಿದ್ದರು. ವಿವಿ ಸಾಗರದ ನೀರನ್ನು ಚಳ್ಳಕೆರೆಗೆ ತೆಗೆದುಕೊಂಡೊಯ್ದ ಸುಧಾಕರ್ ಕ್ರಮದಿಂದ ಹಿರಿಯೂರು ತಾಲೂಕಿನ ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರಿಲ್ಲದಾಯಿತು. ಆಗ ಮಕ್ಕಳಂತೆ ಸಾಕಿದ್ದ ತೆಂಗು, ಅಡಿಕೆ ಇತರೆ ತೋಟಗಾರಿಕೆ ಫಸಲು ಒಣಗಿ ಹೋಗುವ ಮೂಲಕ ಇಡೀ ಕ್ಷೇತ್ರ ಬರದ ನಾಡಾಗಿ ಪರಿವರ್ತನೆಗೊಂಡಿತು. ಈ ನೋವುಂಡವರು ಎಂದೂ ಸುಧಾಕರ್ ಅವರಿಗೆ ಮತ ನೀಡುವುದಿಲ್ಲ, ಹಾಗಾಗಿ ನಾನು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದೇನೆಂದು ಎಂ.ಆರ್.ಹನುಮಂತಪ್ಪ ಹೇಳಿದರು.
ಸುಧಾಕರ್ ಅವರು ತೆಗೆದುಕೊಂಡ ನಿರ್ಧಾರದಿಂದಾಗಿ ಇಡೀ ಕ್ಷೇತ್ರದ ರೈತರು ಸಂಕಷ್ಟಕ್ಕೆ ಸಿಲುಕಿದರು. ಅವರು ರಾಜಕೀಯ ಬದ್ದತೆ ಮತ್ತು ಇಚ್ಚಾಶಕ್ತಿಯಿಂದ ಕೆಲಸ ಮಾಡಿದ್ದರಿಂದ ಹಿರಿಯೂರಿನ ಯಾವುದೇ ತೋಟಗಳು ಒಣಗುತ್ತಿರಲಿಲ್ಲ ಎಂದರಲ್ಲದೆ ಶಾಸಕಿ ಪೂರ್ಣಿಮಾಶ್ರೀನಿವಾಸ್ ಅವರ ಕಾರ್ಯವೈಖರಿಯನ್ನು ಸುಧಾಕರ್ ನೋಡಿ ಕಲಿಯಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವಿ. ವಿಶ್ವನಾಥ್, ಜಿಲ್ಲಾ ಬಿಜೆಪಿ ಮುಖಂಡ ಎಂ. ಎಸ್.ರಾಘವೇಂದ್ರ, ಹಿರಿಯ ಮುಖಂಡರಾದ ಮೂಡಲಗಿರಿಯಪ್ಪ, ನಗರಸಭೆ ಸದಸ್ಯ ಕೇಶವಮೂರ್ತಿ, ಎ. ರಾಘವೇಂದ್ರ, ಎಂ. ವಿ ಹರ್ಷ, ಮಲ್ಲೇಶ್ ಕುಮಾರ್, ಚಂದ್ರಹಾಸ್, ಹೆಚ್, ವೆಂಕಟೇಶ್, ಮಂಜುನಾಥ್, ನಗರಸಭೆ ಸದಸ್ಯ ಶರವಣ, ಪಂಚಾಕ್ಷರಿ, ಸದಾಶಿವ, ಶಿವರಾಂ, ಪ್ರಶಾಂತ್ ಬಾಬು, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.