i
ಹಿರಿಯೂರು ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಹರಿದು ಬಂದ ಜನ ಸಾಗರ…
ವರದಿ-ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ಗುರುವಾರ ಹಿರಿಯೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ.ರವೀಂದ್ರಪ್ಪ ಸಾವಿರಾರು ಕಾರ್ಯಕರ್ತರು, ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.
ಧರ್ಮಪುರ ಹೋಬಳಿ ವಿವಿಧ ಮತಗಟ್ಟೆಗಳಿಗೆ, ಹಲವು ಊರುಗಳಿಗೆ ಅಭ್ಯರ್ಥಿ ಮತ್ತು ಪಕ್ಷದ ಮುಖಂಡರು ಕಳೆದ ಎರಡು ದಿನಗಳಿಂದೆ ಭೇಟಿ ನೀಡಿ ಕಾರ್ಯಕರ್ತರನ್ನು ಜೆಡಿಎಸ್ ನತ್ತ ಬರುವಂತೆ ಮನವಿ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ ಶನೇಶ್ವರ ಸ್ವಾಮಿ ದೇವರು ಸೇರಿದಂತೆ ಮತ್ತಿತರ ದೇವಾಲಯಗಳು, ದರ್ಗಾಕ್ಕೆ ಭೇಟಿ ನೀಡಿ ಮತಕೋರಿವುದರ ಜೊತೆಗೆ ನಾಮಪತ್ರ ಸಲ್ಲಿಕೆಗೆ ಆಗಮಿಸುವಂತೆ ಮನವಿ ಮಾಡಿದ್ದರ ಫಲವಾಗಿ ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ಶಕ್ತಿ ಪ್ರದರ್ಶನ ಮಾಡುವುದರ ಜೊತೆಗೆ ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಜೀವಂತವಾಗಿದೆ ಎನ್ನುವ ಸಂದೇಶವನ್ನು ಕಾರ್ಯಕರ್ತರು ಸಾರಿದರು.
ಮೆರವಣಿಗೆ- ಹಿರಿಯೂರು ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಹಿರಿಯೂರು ನಗರದ ರಂಜಿತ್ ಹೋಟೆಲ್ ಮುಂಭಾಗಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಜೆಡಿಎಸ್ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು, ಹಿರಿಯರು ಅಭ್ಯರ್ಥಿ ರವೀಂದ್ರಪ್ಪನವರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರಗಳನ್ನು ಸಲ್ಲಿಸಿದರು.
ನಾಮಪತ್ರಗಳ ಸಲ್ಲಿಕೆಗೂ ಮುನ್ನ ಅಭ್ಯರ್ಥಿ ತಮ್ಮ ಇಷ್ಟ ದೇವರ ಮುಂದೆ ಪಕ್ಷದ ಬಿ ಫಾರಂಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಗೆಲುವಿನ ದಡ ಸೇರಿಸುವಂತೆ ದೇವರಿಗೆ ಪ್ರಾರ್ಥನೆ ಸಲ್ಲಿಸಿ ನಾಮಪತ್ರ ಸಲ್ಲಿಸಿದರು.
ಅಭ್ಯರ್ಥಿ ರವೀಂದ್ರಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ, ಮಾಜಿ ಜಿಪಂ ಅಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ, ಶಿವಪ್ರಸಾದ್ ಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಹನಮಂತರಾಯ, ದ್ಯಾಮಣ್ಣ ಸೇರಿದಂತೆ ಮತ್ತಿತರ ನಾಯಕರು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದಾಗ ದಾರಿಯೂದ್ದಕ್ಕೂ ಅಭಿಮಾನಿಗಳು, ಬೆಂಬಲಿಗರು, ಸ್ಥಳೀಯರು ಅದ್ದೂರಿ ಸ್ವಾಗತ ಕೋರಿ ಶುಭ ಹಾರೈಸಿದರು.
ಮಹಿಳೆಯರು ಆರತಿ ಎತ್ತುವ ಮೂಲಕ ಅಭ್ಯರ್ಥಿಗಳು ಗೆಲ್ಲಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಮೆರವಣಿಗೆ ವೇಳೆ ಕಹಳೆ, ಡೊಳ್ಳಿನ ನಾದ ಪ್ರಚಾರಕ್ಕೆ ಜವರು ಶಿಳ್ಳೆ ಕೇಕೆ ಹಾಕಿ ಕುಪ್ಪಳಿ ಕುಣಿದು ಸಾಥ್ ನೀಡುತ್ತಿದ್ದರು. ಹಿರಿಯೂರು ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಜನರು ಸಾಲಾಗಿ ನಿಂತು ಅಭ್ಯರ್ಥಿಗಳಿಗೆ ಕೈ ಬೀಸಿ ಶುಭ ಕೋರಿದರು. ತಾಲೂಕಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಜೆಡಿಎಸ್ ಕಾರ್ಯಕರ್ತರು ಮುಖಂಡರು ಸೇರಿದಂತೆ ಇನ್ನಿತರೆ ಅಭಿಮಾನಿಗಳು ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಮತ್ತು ಜೆಡಿಎಸ್ ಪರ ಜೈಕಾರ ಹಾಕಿ ಬಾವುಟ ಪ್ರದರ್ಶಿಸಿದರು. ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ ಅಭ್ಯರ್ಥಿ ಜೊತೆ ಮೆರವಣಿಗೆಗೆ ಸಾಥ್ ನೀಡಿದರು.
ಪಕ್ಷದ ಬಾವುಟ, ಟೋಪಿ, ಶಾಲುಗಳನ್ನು ಹಾಕಿಕೊಂಡ ಕಾರ್ಯಕರ್ತರು ಹಿರಿಯೂರು ನಗರದ ತುಂಬೆಲ್ಲಾ ಹೆಜ್ಜೆ ಹಾಕಿದರು. ಇದೇ ಸಂದರ್ಭದಲ್ಲಿ ಅಭ್ಯರ್ಥಿಗೆ ಬೃಹತ್ ಹೂವಿನ ಹಾರ ಹಾಕುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ, ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಪರ ಅಲೆ ಎದ್ದಿದೆ. ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ 10 ವರ್ಷ, ಬಿಜೆಪಿ ಪಕ್ಷಕ್ಕೆ 5 ವರ್ಷ ಅಧಿಕಾರ ನೀಡಿರುವ ಜನತೆ ಜೆಡಿಎಸ್ ಪಕ್ಷಕ್ಕೂ ಈ ಬಾರಿ ಮತ ನೀಡಿ ರೈತರು, ಬಡವರ ಪರವಾಗಿರುವ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಇಚ್ಚಿಸಿದ್ದಾರೆಂದು ಹೇಳಿದರು.
ಜೆಡಿಎಸ್ ಪ್ರಾದೇಶಿಕ ಪಕ್ಷ, ಈ ಪಕ್ಷ ಗೆದ್ದರೆ ಜನ ಸಾಮಾನ್ಯರು ಗೆದ್ದಂತೆ. ಕುಮಾರಣ್ಣನವರು ಸದಾ ರೈತರು, ಬಡವರ ಪರವಾದ ಆಡಳಿತ ಮಾಡಿದ್ದಾರೆ. ರೈತರ ಮತ್ತು ಮಹಿಳಾ ಸಂಘಗಳ ಸಂಪೂರ್ಣ ಸಾಲ ಮನ್ನಾ, ಪ್ರತಿ ವರ್ಷ 5 ಉಚಿತ ಗ್ಯಾಸ್ ಸಿಲಿಂಡರ್ ನೀಡಿಕೆ, ವಯೋವೃದ್ಧರಿಗೆ ಪ್ರತಿ ತಿಂಗಳು 5 ಸಾವಿರ ಪಿಂಚಣಿ, ವಿಧವೆಯರು ವಿಕಲಚೇತನರಿಗೆ ಎರಡೂವರೆ ಸಾವಿರ ಸೇರಿದಂತೆ ಹಲವು ಯೋಜನೆಗಳನ್ನು ಬಡವರಿಗಾಗಿ ಕುಮಾರಸ್ವಾಮಿಯರು ಘೋಷಣೆ ಮಾಡಿದ್ದು ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನನಗೆ ಹೆಚ್ಚಿನ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ಕುಮಾರಸ್ವಾಮಿ ನುಡಿದಂತೆ ನಡೆಯುವ ವ್ಯಕ್ತಿ. ಆಶ್ವಾಸನೆ ಕೊಟ್ಟು ಸುಮ್ಮನಾಗುವ ಜಾಯಮಾನದ ರಾಜಕಾರಣಿಯಲ್ಲ. ಅವರು ಅಧಿಕಾರಕ್ಕೆ ಬಂದರೆ ಬಡವರು ಒಂದು ಮೌಲ್ಯಯುತ ಬದುಕಲು ಸಾಧ್ಯವಾಗುತ್ತದೆ. ನಾನೂ ಸಹ ಇಲ್ಲಿ ಸೇವೆ ಸಲ್ಲಿಸಿರುವ 14 ವರ್ಷದಲ್ಲಿ 7 ವರ್ಷ ಹಿರಿಯೂರಿನಲ್ಲಿಯೇ ಕೆಲಸ ಮಾಡಿದ್ದೇನೆ. ಆಗಿನ ಮಂತ್ರಿ ರೇವಣ್ಣನವರ ಸಹಕಾರದಿಂದ ಕೂಡ್ಲಹಳ್ಳಿ ಬ್ರಿಡ್ಜ್ ನಿರ್ಮಾಣ ಮಾಡಲು ಸಹಕಾರ ಸಿಕ್ಕಿತು. ಕೊಳಚೆ ನಿರ್ಮೂಲನ ಮಂಡಳಿಯಿಂದ ನಂಜಯ್ಯನಕೊಟ್ಟಿಗೆಗೆ ಮನೆ ಮಂಜೂರು ಮಾಡಿಸಿದ್ದೆವು. ನಾನು ಯಾವ ಹುದ್ದೆಯಲ್ಲಿದ್ದರು ತಾಲೂಕಿನ ಕೆಲಸ ಬಂದಾಗ ಶ್ರದ್ದೆಯಿಂದ ಮಾಡಿದ್ದೇನೆ. ಇಲ್ಲಿನ ಅಂತರ್ಜಲ ಅಭಿವೃದ್ಧಿಗೆ ನನ್ನ ಅಳಿಲು ಸೇವೆಯೂ ಇದೆ. ಹಾಗಾಗಿ ಸ್ಥಳೀಯನಾದ ನನ್ನನ್ನು ಈ ಬಾರಿ ತಾಲೂಕಿನ ಜನ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಸಣ್ಣ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಆಗಿದ್ದಾಗ ಕೂನಿಕೆರೆಯಿಂದ ಬೊಂಬೇರಹಳ್ಳಿಯವರೆಗೂ ವೇದಾವತಿ ನದಿಗೆ ಅಡ್ಡಲಾಗಿದೆ 14 ಚೆಕ್ ಡ್ಯಾಂ ಮತ್ತು ಬ್ಯಾರೇಜ್ ನಿರ್ಮಿಸಿ ನೀರು ಸಂಗ್ರಹ ಮಾಡಲಾಯಿತು. ಈಗ ಹೊಸಹಳ್ಳಿ ಬ್ಯಾರೇಜ್ ನಿಂದ ಧರ್ಮಪುರ ಕೆರೆಗೆ ನೀರು ಬರಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ್ ಮಾತನಾಡಿ, ಕ್ಷೇತ್ರದ ಜೆಡಿಎಸ್ ನಾಯಕರೆಲ್ಲ ಒಂದಾಗಿದ್ದೇವೆ. ಯಾವುದೇ ಮನಸ್ತಾಪಗಳಿಲ್ಲ. ಒಂದು ವೇಳೆ ಸಣ್ಣಪುಟ್ಟ ವ್ಯತ್ಯಸಗಳಿದ್ದರೆ ಸರಿ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದ್ದುರಾಜ್ಯದ ಅಭಿವೃದ್ಧಿ ಸಂಪೂರ್ಣವಾಗಿ ಕುಸಿದಿದೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ ನಿಂದ ಮಾತ್ರ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಸಾಧ್ಯ, ಜೆಡಿಎಸ್ ಪಕ್ಷ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ರಾಜಕಾರಣ ಕಲುಷಿತಗೊಂಡಿದ್ದು ಈ ಚುನಾವಣೆ ಪಕ್ಷಕ್ಕೆ ಮಹತ್ವವಾದುದು. ಉಳಿದ ಪಕ್ಷಗಳ ಆರ್ಭಟದ ನಡುವೆ ಗ್ರಾಮೀಣ ಜನರ ಒಡನಾಡಿಯಾಗಿರುವ ನಮ್ಮ ಪಕ್ಷಕ್ಕೆ ಅನುಗ್ರಹ ನೀಡಿದರೆ ಪಂಚರತ್ನ ಯೋಜನೆಯ ಮೂಲಕ ಜನರ ಬದುಕನ್ನು ಹಸನು ಮಾಡಲಾಗುವುದು ಎಂದು ತಿಳಿಸಿದರು.
ಮಾಜಿ ಸಚಿವ ಸುಧಾಕರ್ ಗೆ ಎರಡು ಬಾರಿ, ಪೂರ್ಣಿಮಾ ಶ್ರೀನಿವಾಸ್ ಗೆ ಒಮ್ಮೆ ಅವಕಾಶ ಕೊಟ್ಟಿದ್ದೀರಿ. ಜೆಡಿಎಸ್ ಪಕ್ಷಕ್ಕೂ ಒಂದು ಅವಕಾಶ ಕೊಡಿ. ಎಲ್ಲಿಂದಲೋ ಬಂದವರನ್ನು ಗೆಲ್ಲಿಸುವ ಬದಲು ಸ್ಥಳೀಯರಿಗೆ ಅವಕಾಶ ಕೊಡಿ. ಇದು ಮಾಡು ಇಲ್ಲವೇ ಮಡಿ ಚುನಾವಣೆಯಾದ್ದರಿಂದ ತಾಲೂಕಿನಲ್ಲಿ ಅಂತರ್ಜಲ ಅಭಿವೃದ್ಧಿಗೆ ಕಾರಣರಾದ ರವೀಂದ್ರಪ್ಪನವರನ್ನು ಗೆಲ್ಲಿಸಿ ಕುಮಾರಣ್ಣ ಮುಖ್ಯಮಂತ್ರಿಯಾಗಲು ಸಹಕರಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ, ಶಿವಪ್ರಸಾದ್ ಗೌಡ, ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ. ಹೆಚ್ ಆರ್ ತಿಮ್ಮಯ್ಯ, ವಕೀಲ ಶಿವಶಂಕರ್, ಉದ್ಯಮಿ ಬಸವರಾಜ್, ಜಿಪಂ ಮಾಜಿ ಉಪಾಧ್ಯಕ್ಷ ದ್ಯಾಮೇಗೌಡ, ಕುರುಬ ಸಮಾಜದ ಮುಖಂಡ ಗಿರಿಜಪ್ಪ, ಡಾ.ಸತ್ಯನಾರಾಯಣ, ಕಿರಣ್, ರಂಗನಾಥ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.