i
ಶಾಸಕ ತಿಪ್ಪಾರೆಡ್ಡಿ ನಾಮಪತ್ರ ಸಲ್ಲಿಕೆಗೆ ಸಾಗರೋಪಾದಿಯಲ್ಲಿ ಆಗಮಿಸಿದ ಜನ…
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಗುರುವಾರ ಬೃಹತ್ ರೋಡ್ ಶೋ ನಡೆಸಿ ಹತ್ತಾರು ಸಾವಿರ ಕಾರ್ಯಕರ್ತರು, ಅಭಿಮಾನಿಗಳ ಜೊತೆಗೂಡಿ ತಮ್ಮ ನಾಮಪತ್ರ ಸಲ್ಲಿಸಿದರು.
ಚಿತ್ರದುರ್ಗದ ಹೊರ ವಲಯದ ಜೆಎಂಐಟಿ ವೃತ್ತದಿಂದ ಜಿಲ್ಲಾಧಿಕಾರಿಗಳ ವೃತ್ತದವರೆಗೆ ಸೇರಿದಂತೆ ನಗರದ ಬೀದಿ ಬೀದಿಗಳಲ್ಲಿ ಗುರುವಾರ ಬೆಳಗ್ಗೆಯಿಂದಲೇ ಜನ ಸಾಗರ ಸೇರತೊಡಗಿತ್ತು. ಇಡೀ ಕೋಟೆ ನಾಡು ಕೇಸರಿ ಬಾವುಟುಗಳು, ಇಡೀ ನಗರ ಅಕ್ಷರಶಃ ಕೇಸರಿಮಯವಾಗಿತ್ತು. ಶಾಸಕ ತಿಪ್ಪಾರೆಡ್ಡಿ ಅವರ ಕಟೌಟ್ ಗಳು ಮೆರವಣಿಗೆಯಲ್ಲಿ ರಾಜಾಜಿಸಿದವು. ಕಿಲೋಮೀಟರ್ ಉದ್ದಕ್ಕೆ ಜನ ಸೇರಿದ್ದರು. ಬೆಳಿಗ್ಗೆಯೇ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಶಾಸಕ ತಿಪ್ಪಾರೆಡ್ಡಿ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ದಶ ದಿಕ್ಕುಗಳಿಂದ ಬಿಜೆಪಿ ಧ್ವಜಗಳನ್ನು ಹಿಡಿದು ಪಕ್ಷ ಮತ್ತು ಶಾಸಕ ತಿಪ್ಪಾರೆಡ್ಡಿ ಪರ ಕಾರ್ಯಕರ್ತರು, ಅಭಿಮಾನಿಗಳು ಶಿಳ್ಳೆ ಕೇಕೆಗಳನ್ನು ಹಾಕುತ್ತಾ ಘೋಷಣೆಗಳನ್ನು ಕೂಗುತ್ತಾ ಹತ್ತಾರು ಸಾವಿರ ಕಾರ್ಯಕರ್ತರು ಮತ್ತು ಬೆಂಬಲಿಗರು ತಿಪ್ಪಾರೆಡ್ಡಿ ಅವರ ನಾಮಪತ್ರ ಸಲ್ಲಿಕೆ ವೇಳೆ ಜಮಾಯಿಸಿದ್ದರು. ಎತ್ತ ನೋಡಿದರೂ ಜನವೋ ಜನ. ಜನಜಂಗುಳಿಯಿಂದ ಕೂಡಿದ್ದ ಕೋಟೆ ನಗರದ ಹಲವು ರೋಡ್ ಗಳಲ್ಲಿ ಜನ ಸಂದಣಿಯಿಂದಾಗಿ ರಸ್ತೆ ಜಾಮ್ ಆಗಿತ್ತು. ದಾವಣಗೆರೆ ರಸ್ತೆಯಲ್ಲಿರುವ ಶಾಸಕ ತಿಪ್ಪಾರೆಡ್ಡಿ ಅವರ ಮನೆಯಿಂದ ಹೊರಟ ಮೆರವಣಿಗೆ ಭಾರೀ ಜನಾಕರ್ಷಕವಾಗಿತ್ತು. ಡೊಳ್ಳು, ತಮಟೆ, ಕಹಳೆ, ಪಟಾಕಿ ಸದ್ದು ಜೋರಾಗಿತ್ತು.
ಎದುರಾಳಿಗಳು ತಲ್ಲಣ- ಶಾಸಕ ತಿಪ್ಪಾರೆಡ್ಡಿ ಅವರಿಗೆ ವಯಸ್ಸಿನ ಕಾರಣಕ್ಕೆ ಟಿಕೆಟ್ ಸಿಗುವುದೇ ಇಲ್ಲ, ಅವರು ಬೇರೆ ಕ್ಷೇತ್ರಗಳಿಗೆ ತೆರಳುತ್ತಾರೆ. ಅನ್ಯ ಪಕ್ಷಗಳಿಂದ ಅಥವಾ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆ ಎಂಬಿತ್ಯಾದಿ ಊಹಾಪೋಹಗಳು ಟಿಕೆಟ್ ಘೋಷಣೆಗೂ ಮುನ್ನ ಹರಿದಾಡುತ್ತಿದ್ದವು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ತಿಪ್ಪಾರೆಡ್ಡಿ ಅವರು ನಿತ್ಯ ಚುನಾವಣೆ ಹೇಗೆ ಎದುರಿಸಬೇಕೆಂದು ಅಂದಾಜು ಮಾಡುತ್ತಾ ಕ್ಷೇತ್ರದ ಜನರೊಂದಿಗೆ ಕಾಲ ಕಳೆಯುತ್ತಿದ್ದರು. ಆದರೆ ಪಕ್ಷ ಇವರಿಗೆ ಟಿಕೆಟ್ ಘೋಷಣೆ ಮಾಡಿತು. ಅಷ್ಟೇ ಅಲ್ಲ ಜಿಲ್ಲೆಯ ಹಲವು ಕ್ಷೇತ್ರಗಳಿಗೆ ಹೊಣೆಯನ್ನು ಕೊಟ್ಟಿತ್ತು. ಇಂದು ನಾಮಪತ್ರ ಸಲ್ಲಿಕೆಗೆ ಆಗಮಿಸಿರುವ ಜನ ಸಾಗರ ನೋಡಿ ಎದುರಾಳಿಗಳಲ್ಲಿ ತಲ್ಲಣ ಮೂಡಿರಲು ಸಾಧ್ಯ ಎನ್ನುವ ಮಾತುಗಳು ಕೇಳಿ ಬಂದವು. ಅಷ್ಟೇ ಅಲ್ಲ ಈ ಜನ ಸಾಗರ ನೋಡಿ ಆಕಾಶದಲ್ಲಿರೋ ನಕ್ಷತ್ರ, ಸಮುದ್ರದಲ್ಲಿರೋ ಮೀನು ನನ್ನ ಜೊತೆ ಇರೋ ಜನ ಯಾವೊತ್ತು ಬದಲಾಗಲ್ಲ, ನನ್ನ ಕಾಯೋಕೆ ಒಂದು ಸೈನ್ಯನೇ ಇದೆ ಎನ್ನುವ ವಿಡಿಯೋ ಸಖತ್ ವೈರಲ್ ಆಗಿದೆ.
ಸಾಗರದಂತೆ ಬಂದಿದ್ದ ಜನರನ್ನು ನೋಡಿ ಭಾವುಕರಾದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಇಷ್ಟೊಂದು ಜನ ಸೇರಿರುವುದು ನೋಡಿದರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೆ ಜನಪ್ರತಿನಿಧಿಗಳ ಜೊತೆ ಮತದಾರರು ಸದಾ ಇರುತ್ತಾರೆ ಎನ್ನುವುದನ್ನು ತೋರಿಸಿದ್ದಾರೆ. ಇಲ್ಲಿ ಸೇರಿರುವ ಕಾರ್ಯಕರ್ತರ ಉತ್ಸಾಹವನ್ನು ಗಮನಿಸಿದರೆ ಬಿಜೆಪಿಗೆ ಇಲ್ಲಿಂದಲೇ ಮೊದಲ ಗೆಲುವಿನ ಫಲಿತಾಂಶ ಸಿಗಲಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದರು.
ಚಿತ್ರದುರ್ಗ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಕ್ಷೇತ್ರದ ಹೊರಗಿನಿಂದ ಬಂದವರಾಗಿದ್ದಾರೆ. ಅವರು ಸ್ಟಾರ್ ಪ್ರಚಾರಕರನ್ನು ಕರೆಸಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ನನಗೆ ನನ್ನ ಕ್ಷೇತ್ರದ ಜನ ಸಾಮಾನ್ಯರು ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರೇ ಸ್ಟಾರ್ ಪ್ರಚಾರಕರಾಗಿದ್ದಾರೆ. ಅವರು ನಡೆಸುವ ಪ್ರಚಾರದಿಂದಲೇ ನನ್ನ ಗೆಲುವು ನಿಶ್ಚಿತ ಎಂದು ತಿಪ್ಪಾರೆಡ್ಡಿ ಹೇಳಿದರು.
ನಾನು ಕಳೆದ ಐದು ಬಾರಿ ಶಾಸಕನಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮಾಡಿರುವ ಕೆಲಸವನ್ನು ನೋಡಿ ಎಲ್ಲಾ ವರ್ಗದ ಮತದಾರರು ನನ್ನ ಬೆಂಬಲಕ್ಕೆ ನಿಲ್ಲಲಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕ್ಷೇತ್ರದ ಪ್ರತಿ ಗ್ರಾಮ, ಪ್ರತಿ ವಾರ್ಡ್ ನಿಂದಲೂ ನಾಮಪತ್ರ ಸಲ್ಲಿಕೆ ವೇಳೆ ಸ್ವಯಂ ಪ್ರೇರಣೆಯಿಂದ ಸಾಗರದಂತೆ ಜನ ಬಂದಿದ್ದಾರೆ ಎಂದು ತಿಳಿಸಿದರು.
ಕೊರೊನಾ ಸಂದರ್ಭದಲ್ಲಿ ಜನರು ಸಾವು ನೋವುಗಳಿಂದ ಪರಿತಪಿಸುತ್ತಿದ್ದರು. ಇಂದು ನನ್ನ ವಿರುದ್ಧ ಸ್ಪರ್ಧಿಸಿರುವ ವ್ಯಕ್ತಿ ಯಾವ ಊರಲ್ಲಿದ್ದ ಎಂದು ವೀರೇಂದ್ರ ಪಪ್ಪಿ ಹೆಸರೇಳದೆ ತಿಪ್ಪಾರೆಡ್ಡಿ ವಾಗ್ದಾಳಿ ಮಾಡಿದರು.