i
ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಪಿಲಾಜನಹಳ್ಳಿ ಜಯಣ್ಣ ನೇಮಕ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಪಿಲಾಜನಹಳ್ಳಿ ಎಂ ಜಯಣ್ಣ ಇವರನ್ನು ನೇಮಕ ಮಾಡಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆದೇಶ ಹೊರಡಿಸಿದ್ದಾರೆ.
ತುರ್ತಾಗಿ ಗುರುತರವಾದ ಜಿಲ್ಲಾಧ್ಯಕ್ಷರ ಹುದ್ದೆಯ ಜವಾಬ್ದಾರಿ ವಹಿಸಿಕೊಂಡು ಪಕ್ಷದ ತತ್ವ ಹಾಗೂ ಸಿದ್ದಾಂತಗಳಿಗೆ ಬದ್ದರಾಗಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಜನತಾದಳ(ಜಾತ್ಯತೀತ) ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಿ ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಇಬ್ರಾಹಿಂ ಅವರು ಏಪ್ರಿಲ್-18 ರೊಂದೇ ಆದೇಶ ಮಾಡಿದ್ದಾರೆ.
ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ಪಿಲಾಜನಹಳ್ಳಿ ಎಂ.ಜಯಣ್ಣನವರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಪುನರುತ್ಥಾನಗೊಳಿಸುವ ಗುರುತರವಾಗ ಹೊಣೆಗಾರಿಕೆ ಸಿಕ್ಕಂತಾಗಿದೆ. ಅಲ್ಲದೆ ಆರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗಾಗಿ ಅದರಲ್ಲೂ ಸ್ವ ಕ್ಷೇತ್ರ ಹಿರಿಯೂರು ವಿಧಾನಸಭಾ ಕ್ಷೇತ್ರದ ಗೆಲುವಿಗಾಗಿ ಹಗಲಿರುಳು ದುಡಿದು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಕೋಟೆ ನಾಡಿನಿಂದ ಕನಿಷ್ಠ ಎರಡು-ಮೂರು ಶಾಸಕರನ್ನು ಗೆಲ್ಲಿಸಿಕೊಡುವ ಹೊಣೆಗಾರಿಕೆ ಜಯಣ್ಣನವರ ಮೇಲಿದೆ. ಇವರ ಶಕ್ತಿಯನ್ನು ನೋಡಿಯೇ ಜೆಡಿಎಸ್ ಪಕ್ಷ ತುರ್ತಾಗಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು ಕಾರ್ಯಕರ್ತರು, ಮುಖಂಡರುಗಳಲ್ಲಿ ಉತ್ಸಾಹ ಕಂಡು ಬರುತ್ತಿದೆ.
ಶೀಘ್ರದಲ್ಲೇ ಜಯಣ್ಣನವರು ಜಿಲ್ಲಾಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದು ಸಮಯ ನಿಗದಿಯಾಗಬೇಕಿದೆ. ಸಾಧ್ಯವಾದರೆ ಪಂಚರತ್ನ ರಥ ಯಾತ್ರೆ ಚಿತ್ರದುರ್ಗ ಜಿಲ್ಲೆಗೆ ಆಗಮಿಸುವ ವೇಳೆ ಅಂದೇ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ಪೀಕಾರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.