i
ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…
ಚಂದ್ರವಳ್ಳಿ ನ್ಯೂಸ್, ಹಾವೇರಿ(ತಡಸ):
ನಾನು ರಾಜ್ಯದ ಎಲ್ಲ ಕಡೆ ಪ್ರಯಾಣ ಮಾಡಿದ್ದೇನೆ. ಎಲ್ಲೆಡೆ ಬಿಜೆಪಿ ಸುನಾಮಿ ಇದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ದ. ನಾವು ಮಾಡಿರುವ ಕೆಲಸಗಳ ಬಗ್ಗೆ ನೀವು ಪ್ರತಿಯೊಂದು ಮನೆಗೆ ಹೋಗಿ ಮನವರಿಕೆ ಮಾಡಬೇಕು. ಕಳೆದ ಬಾರಿಗಿಂತ ಎರಡು ಪಟ್ಟು ಮತಗಳನ್ನು ನೀವು ಹಾಕಬೇಕು. ನಿಮ್ಮ ಆಶೀರ್ವಾದದಲ್ಲಿ ದೊಡ್ಡ ಶಕ್ತಿ ಇದೆ. ನಿಮ್ಮ ಆಶೀರ್ವಾದ ಇರಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ತಡಸ್ ಗ್ರಾಮದಲ್ಲಿ ರೋಡ್ ಶೋ ನಡೆಸಿ ಅವರು ಮಾತನಾಡಿದರು.
ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಈ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕೊಟ್ಟಿದ್ದೇನೆ. ಎಲ್ಲ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಎಲ್ಲ ಶಾಲೆಗಳಿಗೆ ಅನುದಾನ ನೀಡಿದ್ದೇನೆ. ಬಸದಿಗಳಿಗೆ, ಮುಸ್ಲಿಂ ಮಸಿದಿಗಳಿಗೆ, ಶಾಧಿ ಮಹಲ್ ಗಳಿಗೆ, ದೇವಸ್ಥಾನಗಳಿಗೆ ಗಾಯತ್ರಿಮಠಕ್ಕೆ ಅನುದಾನ ನೀಡಿದ್ದೇನೆ. ಮನೆ ಮನೆಗೆ ಗಂಗೆ ಯೋಜನೆಯನ್ನು 5.5 ಕೋಟಿ ರೂ. ವೆಚ್ಚದಲ್ಲಿ ನೀರು ಒದಗಿಸಲಾಗಿದೆ ಎಂದರು.
ನಾಲ್ಕೈದು ತಾಲೂಕುಗಳ ನಡುವೆ ಇರುವ ಈ ಗ್ರಾಮದ ಅಭಿವೃದ್ಧಿ ಅತ್ಯಂತ ಮುಖ್ಯವಾಗಿದೆ. ಇದೇ ವರ್ಷ ತಡಸ್ ನಲ್ಲಿ ಡಿಗ್ರಿ ಕಾಲೇಜು ಸ್ಥಾಪನೆ ಮಾಡುತ್ತೇನೆ. ಇಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿ ಉದ್ಯೋಗ ಒದಗಿಸುವುದೇ ನನ್ನ ಗುರಿಯಾಗಿದೆ. ಅಭಿವೃದ್ಧಿ ನಿರಂತರವಾಗಿ ನಡೆಯಬೇಕು. ನಾನು ಶಾಸಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಪೂರ್ಣಪ್ರಮಾಣದ ಕೆಲಸವನ್ನು ರಾಜ್ಯದ ಜನತೆಗೆ ಮಾಡಿದ್ದೇನೆ. ಈ ಗ್ರಾಮ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಚುನಾವಣೆ ಬರುತ್ತೆ ಹೋಗುತ್ತದೆ. ಆದರೆ, ಸೌಹಾರ್ದತೆ ಮುಖ್ಯ. ಇಲ್ಲಿ ಹಲವಾರು ಸಮುದಾಯಗಳು ಅಭಿವೃದ್ಧಿಗೆ ಮನವಿ ಮಾಡಿದ್ದೀರಿ, ಅದನ್ನು ನಾನು ಈಡೇರಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ತಡಸ್ ಗ್ರಾಮದಲ್ಲಿ ಹಲವಾರು ಅಲ್ಪ ಸಂಖ್ಯಾತ ಮುಖಂಡರು ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.