i
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಮೇಲೆ ಜನರಿಗೆ ನಂಬಿಕೆ ಇಲ್ಲ: ಸಿಎಂ ಬೊಮ್ಮಾಯಿ…
ಚಂದ್ರವಳ್ಳಿ ನ್ಯೂಸ್, ಬಳ್ಳಾರಿ(ಹೂವಿನಹಡಗಲಿ):
ಕಾಂಗ್ರೆಸ್ ನವರು ಚುನಾವಣೆ ಬಂದಿರುವುದರಿಂದ ಗ್ಯಾರೆಂಟಿ ಕಾರ್ಡ್ ಕೊಡುತ್ತಿದ್ದಾರೆ. ಆದರೆ, ಜನರಿಗೆ ಆವರ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಅವರ ಗ್ಯಾರೆಂಟಿ ಕಾರ್ಡ್ ಹರಿದು ಹಾಕುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಹೇಳಿದರು.
ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣಾ ನಾಯ್ಕ್ ಪರ ರೋಡ್ ಶೋ ನಡೆಸಿದ ಬಳಿಕ ಅವರು ಮಾತನಾಡಿದರು.
ಈ ಕ್ಷೇತ್ರದಲ್ಲಿ ಎಂ.ಪಿ ಪ್ರಕಾಶ್ ಎಂಬ ಮಹಾನ್ ನಾಯಕರು ಇಲ್ಲಿ ಶಾಸಕರಾಗಿ ಹೋಗಿದ್ದಾರೆ. ಅಂತ ಕ್ಷೇತ್ರದಲ್ಲಿ ನಾವು ಈಗ ಚುನಾವಣೆ ಎದುರಿಸುತ್ತಿದ್ದೇವೆ. ಹೂವಿನಹಡಗಲಿಯ ಜನರು ಹೂವಿನಂತಮನಸಿನವರು. ಇಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ನಮ್ಮ ಪ್ರಧಾನಿಯವರು ಇಂದು ಹುಮ್ನಾಬಾದ್ ನಲ್ಲಿ ಸಮಾವೇಶನಡೆಸಿ ಈ ಬಾರಿ ಬಹುಮತದ ಸರ್ಕಾರ ಅಂತ ಹೇಳಿದ್ದಾರೆ.
ಕೃಷ್ಣಾ ನಾಯ್ಕ್ ಅವರನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಾಗಿಕೆಲಸ ಮಾಡುತ್ತಿದ್ದಾರೆ. ಕೃಷ್ಣಾ ನಾಯ್ಕ್ ಅವರು ಇಲ್ಲಿನ ಜನರ ಸಮಸ್ಯೆಗಳನ್ನು ಆಲಿಸಬೇಕು. ಅಲ್ಲದೇ ಟಿಕೆಟ್ ತ್ಯಾಗ ಮಾಡಿರುವ ನಾಯಕರನ್ನು ಗೌರವದಿಂದ ನೋಡಿಕೊಳ್ಳಬೇಕು. ನಮ್ಮ ನಾಯಕರಾದ ಪ್ರಧಾನಮಂತ್ರಿ ಮೋದಿಯರು ಅನೇಕ ಯೋಜನೆಗಳನ್ನು ನೀಡಿದ್ದಾರೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ. ಸಿಂಗಟಾಲೂರು ಯೋಜನೆ ಜಾರಿ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ. ಕೆರೆ ತುಂಬಿಸುವ ಕೆಲಸ ಮಾಡಿದ್ದು ಬಿಜೆಪಿ ಸರ್ಕಾರ. ನೀವು ಕೃಷ್ಣಾ ನಾಯ್ಕ್ ಅವರನ್ನು ಗೆಲ್ಲಿಸಿ ಈ ಕ್ಷೇತ್ರದ ಅಭಿವೃದ್ಧಿಗೆ ಏನು ಬೇಕೋ ಅದನ್ನು ನಾವು ಕೊಡುತ್ತೇವೆ ಎಂದರು.
ಕಾಂಗ್ರೆಸ್ ನವರು ಸಾಮಾಜಿಕ ನ್ಯಾಯ ಕೊಡುತ್ತೇವೆ ಅಂತ ಭಾಷಣ ಮಾಡುತ್ತಾರೆ. ದೀನ ದಲಿತರನ್ನು ಬಾವಿಯಲ್ಲಿ ಇಟ್ಟು ಮೋಸ ಮಾಡುತ್ತ ಬಂದಿದ್ದಾರೆ.
ನಾನು ಮೀಸಲಾತಿ ಹೆಚ್ಚಳ ಮಾಡಲು ಮುಂದಾಗಿದ್ದಕ್ಕೆ ಜೇನು ಗೂಡಿಗೆ ಕೈಹಾಕಬೇಡಿ ಅಂತ ಹೇಳಿದರು. ನಾನು ಮೀಸಲಾತಿಹೆಚ್ಚಳ ಮಾಡಿದ್ದೇನೆ ಕಾಂಗ್ರೆಸ್ ನವರು ಮೀಸಲಾತಿಹೆಚ್ಚಳ ಮಾಡಿರುವುದನ್ನು ರದ್ದು ಮಾಡುವುದಾಗಿ ಹೇಳುತ್ತಾರೆ ಎಂದರು.
ಇಲ್ಲಿನ ಶಾಕಸರು ಮೀಸಲಾತಿ ರದ್ದು ಮಾಡುತ್ತೀರಾ ಅನ್ನುವುದನ್ನ ಸ್ಪಷ್ಟಪಡಿಸಬೇಕು. ನಾವು ಕನಕದಾಸದ ಜನ್ಮ ಸ್ಥಳ ಅಭಿವೃದ್ಧಿ ಮಾಡಿದ್ದೇವೆ. ವಾಲ್ಮೀಕಿ ಜಯಂತಿ ಆಚರಣೆ ಆರಂಭ ಮಾಡಿದ್ದೇವೆ. ನಾವು ದೇಶಭಕ್ತರು. ಕಾಂಗ್ರೆಸ್ ನವರಲ್ಲಿ ನಮ್ಮ ಶೇ ಒಂದರಷ್ಟು ದೇಶಭಕ್ತಿ ಇಲ್ಲ. ಕಾಂಗ್ರೆಸ್ ನವರು ಕೇಸರಿ ಅಲೆಯನ್ನು ಧಮ್ ಇದ್ದರೆ ತಡೆಯಲಿ ಎಂದು ಸವಾಲು ಹಾಕಿದರು.
ಬಡವರ ಪರ, ದೀನದಲಿತರ ಪರ, ಕಾರ್ಮಿಕರ ಪರ ಇರುವಂತ ಸರ್ಕಾರ ರಚನೆ ಮಾಡಲು ಬಿಜೆಪಿಗೆ ಮತ ಹಾಕಿ. ಕೃಷ್ಣಾ ನಾಯಕರನ್ನು ಗೆಲ್ಲಿಸಿ ಎಂದರು.