i
ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಬಳ್ಳಾರಿ ಏರ್ ಪೋರ್ಟ್ ಪ್ರಾರಂಭ – ಸಿಎಂ ಬೊಮ್ಮಾಯಿ…
ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಳ್ಳಾರಿ ಏರ್ ಪೋರ್ಟ್ ಅನ್ನು ನಾವು ಅಧಿಕಾರಕ್ಕೆ ಬಂದು ಕೇವಲ ಒಂದು ವರ್ಷದಲ್ಲಿ ಪ್ರಾರಂಭ ಮಾಡುತ್ತೇವೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಬಳ್ಳಾರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಶೇಖರ ರೆಡ್ಡಿ ಪರವಾಗಿ ರೋಡ್ ಶೋ ನಡೆಸಿ ಮಾತನಾಡಿದರು.
ಸೋಮಶೇಖರ್ ರೆಡ್ಡಿ ಅವರು ಕಳೆದ 23 ವರ್ಷದಿಂದ ಬಳ್ಳಾರಿ ಅಭಿವೃದ್ಧಿಗೆ ಸೇವೆ ಮಾಡಿಕೊಂಡು ಬಂದಿದ್ದಾರೆ. ಸೋಮಶೇಖರ್ ರೆಡ್ಡಿ ಶಾಸಕರಾದ ಮೇಲೆ ಕಳೆದ 15 ವರ್ಷದಲ್ಲಿ ಬಳ್ಳಾರಿ ನಗರ ಸಾಕಷ್ಟು ಅಭಿವೃದ್ಧಿ ಆಗಿದೆ. ಉತ್ತರ ಭಾರತದಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಆಗುತ್ತಿದೆ. ದಕ್ಷಿಣ ಭಾಗದ ನಮ್ಮ ಕರ್ನಾಟಕದಲ್ಲಿ ಆಂಜನೇಯನ ಬೆಟ್ಟ ಅಭಿವೃದ್ಧಿ ಆಗಬೇಕು ಎಂದು ಸೋಮಶೇಖರ್ ರೆಡ್ಡಿ ಕೇಳಿಕೊಂಡರು. ಆಂಜನೇಯ ಬೆಟ್ಟ 120 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಆಗ್ತಿದೆ. ಇದರ ಶ್ರೇಯಸ್ಸು ಆಂಜನೇಯ ಭಕ್ತ ಸೋಮಶೇಖರ್ ರೆಡ್ಡಿಗೆ ಹೋಗುತ್ತೆ. ಹನುಮಂತನ ಆಶೀರ್ವಾದ ಇರುವ ಸೋಮಶೇಖರ್ ರೆಡ್ಡಿಯನ್ನ ಯಾರೂ ಸೋಲಿಸಲು ಸಾಧ್ಯವಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು
ಡಬಲ್ ಎಂಜಿನ್ ಸರ್ಕಾರದ ಸಾಧನೆಗಳು–ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಆಡಳಿತ ಮಾಡ್ತಿದೆ. 6 ಸಾವಿರ ಕಿಲೋಮೀಟರ್ ನ್ಯಾಷನಲ್ ಹೈವೇ ಆಗ್ತಿದೆ. 7500 ಕೋಟಿ ರೂ ವೆಚ್ಚದಲ್ಲಿ ರೈಲ್ವೆ ಅಭಿವೃದ್ಧಿ ಆಗ್ತಿದೆ. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆ ನಮ್ಮ ಸರ್ಕಾರದ ಮೂಲಕ 54 ಲಕ್ಷ ರೈತರನ್ನು ತಲುಪಿದೆ. ಆಯುಷ್ಮಾನ್ ಭಾರತ ಮೂಲಕ 1.20 ಕೋಟಿ ಜನರಿಗೆ ತಲುಪಿದೆ. ರಾಜ್ಯ ಸರ್ಕಾರದಿಂದ ವಿದ್ಯಾ ನಿಧಿ ಕೊಡುತ್ತಿದ್ದೇವೆ. ದುಡಿಯುವ ವರ್ಗಕ್ಕೆ ಕಾರ್ಯಕ್ರಮ ರೂಪಿಸಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5 ಸಾವಿರ ಕೋಟಿ ಕೊಟ್ಟಿದ್ದೀನಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಂಚನೆ–ಕಾಂಗ್ರೆಸ್ ಅವರು ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಕಾಂಗ್ರೆಸ್ ನವರು ಈಗ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ಅವರ ಮೇಲೆ ಜನರಿಗೆ ನಂಬಿಕೆ ಇಲ್ಲ. ಅದಕ್ಕಾಗಿ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಇದೆಲ್ಲವೂ ಬೋಗಸ್ ಕಾರ್ಡ್. ಚುನಾವಣೆ ಮುಗಿಯುವವರೆಗೂ ಮಾತ್ರ ಗ್ಯಾರಂಟಿ. ಆಮೇಲೆ ಗಳಗಂಟಿ. ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಿ ಜನಪರ ಬಿಜೆಪಿ ಸರ್ಕಾರ ತರಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹಿಂದೆ ಕೊಟ್ಟಿದ್ದ ವಾಗ್ದಾನ ಮೊದಲು ಈಡೇರಿಸಿ–ರಾಹುಲ್ ಗಾಂಧಿ ಇಲ್ಲಿಗೆ ಜೀನ್ಸ್ ಪಾರ್ಕ್ ಮಾಡುವುದಾಗಿ ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ತಾಯಿ ಇಲ್ಲಿ ನಿಂತು ಎಂಪಿ ಆಗಿದ್ದರು. ಆಗ ಕೊಟ್ಟಿದ್ದ 3000 ಕೋಟಿಯ ಬಳ್ಳಾರಿ ಪ್ಯಾಕೇಜ್ ಘೋಷಣೆ ಏನಾಯಿತು? ಹತ್ತು ವರ್ಷದ ಹಿಂದೆ ಕೊಟ್ಟಿದ್ದ ವಾಗ್ದಾನವನ್ನು ಮೊದಲು ಈಡೇರಿಸಿ. ಈಗಾಗಲೇ ಜೀನ್ಸ್ ಪಾರ್ಕ್ಗೆ 50 ಎಕರೆ ಮೀಸಲಿಟ್ಟಿದ್ದು ಬಜೆಟ್ ನಲ್ಲಿ ಅನುದಾನ ಇಟ್ಟಿದ್ದೇವೆ. ನಿಮ್ಮ ಆಶ್ವಾಸನೆ ಅವಶ್ಯಕತೆ ಇಲ್ಲ. ಸೋಮಶೇಖರ ರೆಡ್ಡಿ ನಗರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. 16 ಸಾವಿರ ಜನ ಬಡವರಿಗೆ ಹಕ್ಕು ಪತ್ರ ವಿತರಣೆ ಮಾಡಿದ್ದಾರೆ. ಅವರೆಲ್ಲರ ಆಶೀರ್ವಾದ ಸೋಮಶೇಖರ್ ಮೇಲಿದೆ. ಬಹಳಷ್ಟು ಶ್ರೀಮಂತರು ಚುನಾವಣೆಗೆ ನಿಂತಿದ್ದಾರೆ. ಆದರೆ ನಿಮಗೆ ಸಮಗ್ರ ಅಭಿವೃದ್ಧಿ ಮಾಡುವ ಪ್ರಾಮಾಣಿಕ ಜನಸೇವಕ ಬೇಕಿದ್ದರೆ ನೀವು ಸೋಮಶೇಖ್ ಗೆ ಮತ ಹಾಕಿ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹಣಬಲ – ಜನಬಲದ ನಡುವೆ ಚುನಾವಣೆ–ಈ ಬಾರಿಯ ಚುನಾವಣೆ ಜನಬಲ ಹಣಬಲದ ನಡುವೆ ಆಗಲಿದೆ. ಜನಬಲ ಮತ್ತು ಹಣಬಲದ ನಡುವೆ ಯಾವಾಗ ಚುನಾವಣೆ ನಡೆದರೂ ಅಲ್ಲಿ ಜನಬಲವೇ ಗೆದ್ದಿದೆ. ಬಳ್ಳಾರಿಯಲ್ಲಿ ಸೋಮಶೇಖರ್ ಗೆದ್ದರೆ ಕರ್ನಾಟಕದಲ್ಲಿ ಕಮಲ ಅರಳುವುದು ನಿಶ್ಚಿತ. ದೀನದಲಿತರ ಮೀಸಲಾತಿ ಸಂಪೂರ್ಣವಾಗಿ ಕಾರ್ಯಗೊತಗಳಿಸಲು ಅವಕಾಶ ಸಿಗುತ್ತದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿಹೆಚ್ಚಳ ಮಾಡಲು ಮುಂದಾದರೆ ಕಾಂಗ್ರೆಸ್ ನವರು ಜೇನುಗೂಡಿಗೆ ಕೈ ಹಾಕಬೇಡಿ ಅಂತ ಹೇಳಿದರು. ನಾನು ಜೇನು ಕಡಿಸಿಕೊಂಡು ಆ ಸಮುದಾಯಕ್ಕೆ ಜೇನುತುಪ್ಪ ತಿನ್ನಿಸಿದ್ದೇನೆ. ನಿಮ್ಮ ಆಶೀರ್ವಾದದಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಬಳ್ಳಾರಿ ವಿಮಾನ ನಿಲ್ದಾಣವನ್ನು ಪ್ರಾರಂಭ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.