i
‘ಬೇಡುವವರಿಲ್ಲದೆ ಬಡವನಾದೆನಯ್ಯ‘ ಹಾಗೂ ‘PAY BACK TO SOCIETY’…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ಬೇಡುವವರಿಲ್ಲದೆ ಬಡವನಾದೆನಯ್ಯ‘ ಹಾಗೂ ‘PAY BACK TO SOCIETY’…
‘ಸಮಾಜ ಸೇವೆ‘ ಹೆಸರಿನಲ್ಲಿ ಆಳೆತ್ತರದ ದೊಡ್ಡ ದೊಡ್ಡ ಫ್ಲೆಕ್ಸ್ ಫೋಟೋ ಹಾಕಿಕೊಂಡು ರಾರಾಜಿಸುವ ನಾಯಕರ ಭಿತ್ತಿಚಿತ್ರಗಳನ್ನು ನೀವು ನೋಡಿದ್ದೀರಿ. ‘ಕೊಡುಗೈ ದಾನಿ‘ ‘ಕಲಿಯುಗದ ಕರ್ಣ‘ ‘ದಾನ ಶೂರ‘ ‘ಸಮಾಜ ಸೇವಾ ದುರಂದರ‘ ‘ಸಮಾಜ ಸೇವಾ ರತ್ನ‘ ‘ಬಡವರ ಬಂಧು‘ ‘ದಾನ ಚಿಂತಾಮಣಿ‘ ಇನ್ನೂ ಮುಂತಾದ ವಿಶೇಷಣಗಳಿಂದ ಕೀರ್ತಿಸಲಾಗುವ ಆ ನಾಯಕರ ಭಾವಚಿತ್ರಗಳು ಮತ್ತು ಅವರ ದೇಹಭಾಷೆ ಒಮ್ಮೆಯಾದರೂ ನಮ್ಮ ಕಣ್ಣುಗಳನ್ನು ಸೆಳೆಯದಿರಲು ಸಾಧ್ಯವಿಲ್ಲ. ಸರ್ವಾಲಂಕಾರ ಭೂಷಿತರಾಗಿ ಕೈಬೆರಳು ಕೊರಳು ಮುಂಗೈ ಮೈತುಂಬಾ ಲಕ್ಷಗಟ್ಟಲೆ ಬೆಲೆಬಾಳುವ ಒಡವೆಗಳನ್ನು ಮತ್ತು ವಸ್ತ್ರಗಳನ್ನು ಧರಿಸಿಕೊಂಡು ಭರ್ಜರಿಯಾದ ಕಾರುಗಳಲ್ಲಿ ಸಹಚರರ ಪಡೆಯೊಂದಿಗೆ ಬಂದಿಳಿಯುವ ಅವರ ಠೀವಿ ಗತ್ತು ಗಮ್ಮತ್ತು ಗಾಂಭೀರ್ಯಗಳಿಗೆ ಬೆರಗಾದ ವಂದಿಮಾಗದ ಅಭಿಮಾನಿಗಳು ಪಟಾಕಿ ಸರ ಸಿಡಿಸಿ ಜಯಘೋಷ ಹಾಕುತ್ತಾರೆ. ಇನ್ನೂ ಕೆಲವರು ಸರ್ಕಾರಕ್ಕೆ ಸಾರ್ವಜನಿಕರ ಕೋಟಿಗಟ್ಟಲೆ ತೆರಿಗೆ ದುಡ್ಡನ್ನು ಕಟ್ಟದೆ ವಂಚಿಸಿ ಮತ್ತು ತಮ್ಮದೇ ಕೈಕೆಳಗೆ ದುಡಿಯುವ ನೌಕರರಿಗೆ ಕೊಡಬೇಕಾದ ವೇತನವನ್ನು ವಂಚಿಸಿ ಅಥವಾ ಭ್ರಷ್ಟಾಚಾರದಿಂದ ಅಕ್ರಮ ಸಂಪತ್ತನ್ನು ಗುಡ್ಡೆ ಹಾಕಿಕೊಂಡು ಬಹಿರಂಗದಲ್ಲಿ ಅಪೂಟ ಸರಳತೆಯ ಪೋಜು ಕೊಡುತ್ತಾರೆ. ಎಸಗಿದ ಪಾಪವನ್ನು ತೊಳೆದುಕೊಳ್ಳುವ ಪ್ರಾಯಶ್ಚಿತ್ತಕ್ಕಾಗಿ ತಾವು ಹೋಗಿಬರುವ ಕಡೆಗೆಲ್ಲಾ ಕಾರಿನಲ್ಲಿ ಸೀರೆಗಳನ್ನು, ನೋಟಿನ ಕಂತೆಗಳನ್ನು ಕಾಣಿಕೆಗಳನ್ನು ಕೊಂಡೊಯ್ದು ಮಠಮಂದಿರಗಳಿಗೂ ಪೂಜಾರಿಗಳಿಗೂ, ವಿಲಿಯಂ ಬ್ಲೇಕನ ಕವಿತೆಗಳಲ್ಲಿ ಬರುವಂತಹ ಬಡಬಗ್ಗರಿಗೂ ಹಂಚಿ ಕೃತಾರ್ಥ ಭಾವದಿಂದ ಕೈಮುಗಿದು ಬರುತ್ತಾರೆ. ಇನ್ನೂ ಕೆಲವರು ಸಮಾಜ ಸೇವೆ ಎಂಬುದನ್ನೇ ತಮ್ಮ ಜೀವನೋಪಾಯದ ದಾರಿಯಾಗಿಸಿಕೊಂಡಿರುತ್ತಾರೆ. ಇಂಥವರಿಗೆ ಕನಿಷ್ಠ ಸಾರ್ವಜನಿಕ ಲಜ್ಜೆ ಎಂಬುದೇ ಇರುವುದಿಲ್ಲ.
ಸೇವೆ ಎಂಬ ಪದವನ್ನು ನಾವು ಹೊಣೆಗಾರಿಕೆ ಅಥವಾ ಕರ್ತವ್ಯ ಎಂದು ಭಾವಿಸಿದಾಗ ಹೆಚ್ಚು ಅರ್ಥ ಬರುತ್ತದೆ. ನಮ್ಮನ್ನು ರೂಪಿಸಿರುವುದು ಈ ಸಮಾಜವೇ ಆಗಿರುವುದರಿಂದ ನಾವು ಪಡೆದುಕೊಂಡ ಸಮಾಜಕ್ಕೆ ನಾವು ವಾಪಸ್ಸು ಋಣ ಸಂದಾಯ ಮಾಡಬೇಕಿರುತ್ತದೆ. ಇದನ್ನು ಅಂಬೇಡ್ಕರ್ ಅವರು Pay back to society ಎಂದಿದ್ದಾರೆ.
ಸಮಾಜ ಸೇವಕರೆಂದು ಕರೆದುಕೊಳ್ಳುವ ಕೆಲವು ಜನರಿಂದಾಗಿ ಭಾರತದ ಇಂದಿನ ಅರ್ಥ ವ್ಯವಸ್ಥೆ ತುಂಬಾ ಏರುಪೇರಾಗಿದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಆರ್ಥಿಕ ವಿಚಲತೆಗೆ ಕಾರಣವಾಗಿದೆ. ಇವತ್ತು ನಾವು ವಿಶ್ವ ಆರ್ಥಿಕತೆಯಲ್ಲಿ ಭಾರತದ ಸ್ಥಾನಮಾನ ಕುರಿತು ವಿಪರೀತವಾಗಿ ಚರ್ಚಿಸುತ್ತಿದ್ದೇವೆ. ಅಂತರಾಷ್ಟ್ರೀಯ ಹಣಕಾಸು ವ್ಯವಸ್ಥೆ (International financial system) ಮತ್ತು ಹಣಕಾಸಿನ ಏಜೆನ್ಸಿಗಳನ್ನು ಕುರಿತು ದೊಡ್ಡ ದೊಡ್ಡ ಪ್ರಬಂಧಗಳನ್ನು ಬರೆದು ಮಂಡಿಸುತ್ತಿದ್ದೇವೆ. stocks and shares, debentures and derivatives ಎಂದು ಷೇರು ಮಾರುಕಟ್ಟೆಯ ಅರ್ಥಶಾಸ್ತ್ರಜ್ಞರು ಮತ್ತು ಸಂಶೋಧಕರು ತಮ್ಮ ಅಧ್ಯಯನದ ಫಲಿತಗಳನ್ನು ಕಾಲಕಾಲಕ್ಕೆ ನಮ್ಮ ಮುಂದಿಡುತ್ತಿದ್ದಾರೆ. ಈ ಅಧ್ಯಯನಗಳೆಲ್ಲವೂ ವಿಶ್ವಮಟ್ಟದಲ್ಲಿ ಭಾರತವು ಒಂದು ಅಭಿವೃದ್ಧಿಶೀಲ ರಾಷ್ಟ್ರವೆಂದೂ, ಭಾರತ ದೇಶದ ಆಂತರಿಕ ಆರ್ಥಿಕತೆಯು ತೀರಾ ಅಸಮಾನತೆಯಿಂದ ಕೂಡಿದೆಯೆಂದೂ, ದೇಶದ ಪ್ರಜೆಗಳಲ್ಲಿ ಆರ್ಥಿಕ ಪಾರದರ್ಶಕತೆ ಕಂಡುಬರುತ್ತಿಲ್ಲವೆಂದೂ, ಕೆಲವೇ ಶ್ರೀಮಂತರ ಕೈಗಳಲ್ಲಿ ಇಡೀ ದೇಶದ ಸಿಂಹಪಾಲು ಕೇಂದ್ರೀಕರಣವಾಗಿದೆಯೆಂದೂ ಹಾಗೂ ಬಡಜನರಿಂದಲೇ ತುಂಬಿರುವ ಶ್ರೀಮಂತ ರಾಷ್ಟ್ರವೆಂದೂ ವಿಶ್ವದೆದುರು ಸಾರುತ್ತಿವೆ. ಹೀಗೆಂದಾಗ ಭಾರತದ ದೋಷಪೂರಿತ ವಿತ್ತೀಯ ನೀತಿಗಳೇ (fiscal policies) ಇಂತೆಲ್ಲಾ ವೈರುಧ್ಯಗಳಿಗೆ ಕಾರಣವೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅನ್ನಿಸ್ತಿದೆ. ಬಸವಣ್ಣನ ನಂತರದಲ್ಲಿ ಭಾರತದ ಆರ್ಥಿಕ ಸಮಸ್ಯೆಗಳನ್ನು ಕುರಿತು ಆಮೂಲಾಗ್ರ ಚಿಂತನೆ ನಡೆಸಿದವರೆಂದರೆ ಅಂಬೇಡ್ಕರ್ ಒಬ್ಬರೇ. The problem of the rupee ; Its origin and its solution (History of Indian currency and Banking) ಎಂಬ ವಿಷಯದ ಮೇಲೆ ಬಹುದೊಡ್ಡ ಸಂಶೋಧನೆಯನ್ನು ಅವರು ಕೈಗೊಳ್ಳುತ್ತಾರೆ. ಭಾರತದ ಆರ್ಥಿಕತೆಯ ಏರಿಳಿತ ಮತ್ತು ಸಂಪತ್ತಿನ ಅಸಮಾನ ಹಂಚಿಕೆಯನ್ನು ಅವರು ಮನಗಾಣುತ್ತಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು London School of Economics ನಲ್ಲಿ ಪಿಎಚ್.ಡಿ ಸಂಶೋಧನೆ ಕೈಗೊಂಡು ಡಾಕ್ಟರೇಟ್ ಮಹಾಪ್ರಬಂಧವನ್ನು ಮಂಡಿಸಿ ಭಾರತದ ಆರ್ಥಿಕ ನಡಿಗೆಯನ್ನು ಹೊಸ ದಿಕ್ಕಿನ ಕಡೆಗೆ ಬದಲಿಸಿದರು. ಇದೇ ಮಹಾಪ್ರಬಂಧವನ್ನು ಆಧರಿಸಿಯೇ 1935 ರ ಏಪ್ರಿಲ್ 1 ನೇ ತಾರೀಖಿನಂದು Reserve Bank of India (RBI) ಸ್ಥಾಪನೆಯಾಯಿತು. ಏಪ್ರಿಲ್ 1 ನ್ನು ಭಾರತದ ಮಟ್ಟಿಗೆ ‘ಮೂರ್ಖರ ದಿನ‘ ಎನ್ನುವವರು ಶತಮೂರ್ಖರೇ ಸರಿ. ಏಪ್ರಿಲ್ 1 ವಿಶ್ವದ ಶ್ರೇಷ್ಠ ಅರ್ಥಶಾಸ್ತ್ರಜ್ಞನಾದ ಅಂಬೇಡ್ಕರ್ ಹೆಸರಿನಲ್ಲಿ ಆಚರಿಸಬೇಕಾದ ‘ರೂಪಾಯಿ ದಿನ‘ ಅಥವಾ ‘ಬ್ಯಾಂಕ್ ದಿನ‘. ಇವತ್ತು ಯಾರದೇ ಜೇಬಿನಲ್ಲಿ ಒಂದು ರೂಪಾಯಿ ನಾಣ್ಯ ಓಡಾಡುತ್ತಿದ್ದರೂ, ಕೋಟಿ ರೂಪಾಯಿ ಚಲಾವಣೆಯಾಗುತ್ತಿದ್ದರೂ ಅದಕ್ಕೆ ಅಂಬೇಡ್ಕರರೇ ಕಾರಣ.
ಭಾರತದಲ್ಲಿ ಅಸಮಾನ ಆರ್ಥಿಕ ರಚನೆ ಮತ್ತು ಸಂಪತ್ತಿನ ಕೇಂದ್ರೀಕರಣವನ್ನು ಗುರುತಿಸಿದ ಅಂಬೇಡ್ಕರ್ ಆರ್ಥಿಕ ಉತ್ಪಾದನೆಯ ಪ್ರಧಾನಾಂಶವಾದ ಭೂಮಿಯನ್ನು ರಾಷ್ಟ್ರೀಕರಣ ಮಾಡಲು ಉದ್ದೇಶಿಸಿದ್ದರು. ಮಹಿಳೆಯರಿಗೆ ಸಮಾನ ಆಸ್ತಿಯ ಹಕ್ಕನ್ನು ತರಲು ಸಾಧ್ಯವಾದ ಅಂಬೇಡ್ಕರ್ ಅವರು ಕನಸಿದ್ದ ಭೂಮಿಯ ರಾಷ್ಟ್ರೀಕರಣದ ಆಸೆ ಕೈಗೂಡಲಿಲ್ಲ. ಹಾಗಾಗಿಯೇ ಅವರು Pay back to society ಎಂದು ನಾವು ಸಮಾಜಕ್ಕೆ ಋಣ ಸಂದಾಯ ಮಾಡಬೇಕಾದ ನೈತಿಕ ಜವಾಬ್ದಾರಿಯನ್ನು ನಮ್ಮ ಮೇಲೆ ಹೊರಿಸಿದರು. ಇಂತಹ ಋಣ ಸಂದಾಯವನ್ನು ಕೆಲವರು ಸಮಾಜ ಸೇವೆ ಎಂದು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಸಮಾಜ ಸೇವಕರೆಂಬ ಲೇಬಲ್ ಅಂಟಿಸಿಕೊಳ್ಳುತ್ತಿದ್ದಾರೆ. ಇದು ದಾನವೂ ಅಲ್ಲ. ಸೇವೆಯೂ ಅಲ್ಲ. ನಮ್ಮ ಪಾಲಿನ ಸಾಮಾಜಿಕ ಹೊಣೆಗಾರಿಕೆ ಅಥವಾ ಕರ್ತವ್ಯ. ಇದನ್ನೇ ಬಸವಣ್ಣ ದಾಸೋಹ ಎಂದಿದ್ದಾರೆ. ‘ಬೇಡುವವರಿಲ್ಲದೆ ನಾ ಬಡವನಾದೆನಯ್ಯಾ‘ ಎಂಬ ವಚನವಾಕ್ಯವು ನೀಡುವವರನ್ನೇ ಬೇಡುವವರಿಲ್ಲದ ಕಾರಣವಾಗಿ ಬಡವರಾದರೆಂದು ತಿಳಿಸುತ್ತದೆ. ಎಲ್ಲವೂ ಈ ಸೃಷ್ಟಿಯು ನಮಗೆ ಕೊಟ್ಟಿರುವ ದಾನವಾಗಿರುವುದರಿಂದ ನಾವು ಕೊಡುವಂತಹ ದಾನ ಯಾವುದೂ ಇಲ್ಲ. ಇಂತಹ ಸಂದೇಶವಿರುವ ಕೆಲವು ವಚನಕಾರರ ವಚನಗಳನ್ನು ನಾವು ನೋಡೋಣ.
“ಹಾಡಿದೊಡೆ ಎನ್ನೊಡೆಯನ ಹಾಡುವೆ
ಬೇಡಿದೊಡೆ ಎನ್ನೊಡೆಯನ ಬೇಡುವೆ
ಒಡೆಯಂಗೊಡಲಾ ತೋರಿ ಎನ್ನ ಬಡತನವ ಭಿನ್ನೈಸುವೆ
ಒಡೆಯ ಮಹಾದಾನಿ ಕೂಡಲಸಂಗಮದೇವರಿಗೆ ಸೆರಗೊಡ್ಡಿ ಬೇಡುವೆ”
—- ಬಸವಣ್ಣ
“ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು
ಗಿಡುಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು
ಅವು ನೀಡಿದವು ತಮ್ಮ ಲಿಂಗಕ್ಕೆಂದು
ಆನು ಬೇಡಿ ಭವಿಯಾದೆನು
ಅವು ನೀಡಿ ಭಕ್ತರಾದವು
ಇನ್ನು ಬೇಡಿದೆನಾದಡೆ ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮಾಣೆ”
—- ಅಕ್ಕಮಹಾದೇವಿ
“ಇಳೆ ನಿಮ್ಮ ದಾನ
ಬೆಳೆ ನಿಮ್ಮ ದಾನ
ಸುಳಿದು ಸೂಸುವ ಗಾಳಿ ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ, ರಾಮನಾಥ”
—- ಜೇಡರ ದಾಸಿಮಯ್ಯ
“ಮಾಡಿದೆನೆಂಬುದು ಮನದಲಿ ಹೊಳೆದರೆ
ಏಡಿಸಿ ಕಾಡಿತ್ತು ಶಿವನ ಡಂಗುರ
ಮಾಡಿದೆನೆನ್ನದಿರಾ ಲಿಂಗಕೆ,
ನೀಡಿದೆನೆನ್ನದಿರ ಜಂಗಮಕ್ಕೆ
ಮಾಡಿದ್ದು ನೀಡಿದ್ದು ಮನದಲಿ ಇಲ್ಲದಿದ್ದರೆ
ಬೇಡಿದ್ದ ನೀವ ನಮ್ಮ ಕೂಡಲಸಂಗಮದೇವ”
—- ಬಸವಣ್ಣ
“ಲಂಚವಂಚನಕ್ಕೆ ಕೈಯಾನದ ಭಾಷೆ
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾ ಕೈ ಮುಟ್ಟಿ ಎತ್ತಿದೆನಾದಡರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ಅದೇನು ಕಾರಣವೆಂದರೆ, ನೀವಿಕ್ಕಿದ ಭಿಕ್ಷೆದಲ್ಲಿಪ್ಪೆನಾಗಿ
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ
ನೀನಾಗಲೇ ಎನ್ನ ನರಕದಲಿ ಅದ್ದಿ
ನೀನೆದ್ದು ಹೋಗು ಶಂಭುಜಕ್ಕೇಶ್ವರಾ”
— ಶರಣೆ ಸತ್ಯಕ್ಕ
‘ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ
ಇಂದಿಂದಿಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ
ಕೂಡಲಸಂಗಮದೇವ”
—- ಬಸವಣ್ಣ
“ಎತ್ತು ನಿಮ್ಮ ದಾನ ಬಿತ್ತು ನಿಮ್ಮ ದಾನ
ಸುತ್ತಿ ಹರಿವ ಸಾಗರವೆಲ್ಲ ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ಹೇಳಾ ರಾಮನಾಥ”
—- ಜೇಡರ ದಾಸಿಮಯ್ಯ
“ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ
ಸತ್ಪಾತ್ರಕ್ಕೆ ಸಲ್ಲದಯ್ಯ
ನಾಯ ಹಾಲು ನಾಯಿಗಲ್ಲದೆ
ಪಂಚಾಮೃತಕ್ಕೆ ಸಲ್ಲದಯ್ಯ
ನಮ್ಮ ಕೂಡಲಸಂಗನ ಶರಣರಿಗಲ್ಲದೆ ಮಾಡುವ ಅರ್ಥ ವ್ಯರ್ಥ ಕಂಡಯ್ಯಾ”
—- ಬಸವಣ್ಣ
ಸಂಪತ್ತಿನ ಗಳಿಕೆ ಮತ್ತು ಅದರ ಬಳಕೆಯನ್ನು ಕುರಿತು ಬಸವಣ್ಣ ಹೇಳಿರುವ ದಾಸೋಹದ ಪರಿಕಲ್ಪನೆಯಂತೆ ಸತ್ಯ ಶುದ್ದ ಕಾಯಕದಿಂದ ಗಳಿಸಿದ ಹಣವನ್ನು ಸಮಾಜದ ಸತ್ಪಾತ್ರಕ್ಕೆ ಬಳಸಬೇಕು. ಕಾಯಕದಿoದ ಗಳಿಸಿದ ಸಂಪತ್ತನ್ನು ಸತ್ಪಾತ್ರಕ್ಕೆ ವಿನಿಯೋಗಿಸಬೇಕು. ಅಲ್ಲದ ಹೊರತು ಯಾವುದೇ ಹಣ ಪಾಪಿಯ ಪಾಪದ ಸಂಚಯನವಾಗುತ್ತದೆ. ಅಂತಹ ಪಾಪಿಗಳು ಮಾತ್ರ ಪ್ರಾಯಶ್ಚಿತ್ತ ಮಾಡಿಕೊಳ್ಳಲು ದೇವರ ಮತ್ತು ಸಮಾಜ ಸೇವೆಯ ಹೆಸರಿನಲ್ಲಿ ವ್ಯಯಿಸಿ ಮತ್ತಷ್ಟು ಪಾಪವನ್ನು ಹೊಂದುತ್ತಾರೆ. ನಾಯಿಯ ಹಾಲು ಪಂಚಾಮೃತಕ್ಕೆ ಹೇಗೆ ಸಲ್ಲುವುದಿಲ್ಲವೋ ಹಾಗೆಯೇ ಪಾಪಿಯ ಹಣ ಪವಿತ್ರವಾದ ವಿನಿಯೋಗ ಎನ್ನಿಸಿಕೊಳ್ಳುವುದಿಲ್ಲ. ಸತ್ಯಶುದ್ಧ ಕಾಯಕದಿಂದ ಸಂಪಾದಿಸಿದ ಸಂಪತ್ತು ಮಾತ್ರ ಸತ್ಪಾತ್ರಕ್ಕೆ ಸಲ್ಲುವ ಮೂಲಕ ಪಾಪ ಸೂತಕದಿಂದ ನಮ್ಮನ್ನು ದೂರವಿರಿಸುತ್ತದೆ. ಬಸವಣನವರ “ಬೇಡುವವರಿಲ್ಲದೆ ನಾ ಬಡವನಾದೆನಯ್ಯ” ಹಾಗೂ ಅಂಬೇಡ್ಕರ್ ಅವರ “PAY BACK TO SOCIETY” ಎಂಬ ಆಶಯಗಳ ಕರ್ತವ್ಯ ಪಾಲಕರು ನಾವಾಗೋಣ.
ಲೇಖನ:ಡಾ.ವಡ್ಡಗೆರೆ ನಾಗರಾಜಯ್ಯ