i
ಕುಟುಂಬ ರಾಜಕಾರಣದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮುಂಚೂಣಿ: ನರೇಂದ್ರ ಮೋದಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರದಿಂದ ಕೂಡಿವೆ. ಅಲ್ಲದೆ ಕುಟುಂಬ ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದು ಮತದಾರರು ಎಚ್ಚರಿಕೆಯಿಂದ ಮತ ಚಲಾಯಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ನಗರದ ಸರ್ಕಾರಿ ವಿಜ್ಞಾನ ಕಾಲೇಜ್ ಕ್ರೀಡಾಂಗಣದಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹತ್ತು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ದುರಾಡಳಿತಕ್ಕೆ ಭದ್ರಾ ಮೇಲ್ದಂಡೆ ಯೋಜನೆಯ ನಿರ್ಲಕ್ಷ್ಯವೇ ಸಾಕ್ಷ್ಯ. ಅಭಿವೃದ್ಧಿಗಿಂತ ಸಮಾಜ ಒಡೆಯುವ ಕಾರ್ಯವೇ ಕಾಂಗ್ರೆಸ್ಗೆ ಮುಖ್ಯವಾಗಿದೆ. ಎರಡೂ ಪಕ್ಷಗಳಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ. ನಿಮ್ಮ ಮಕ್ಕಳ ಭವಿಷ್ಯವನ್ನು ಗಮನಿಸಿ ಮತದಾನ ಮಾಡಿ ಎಂದು ಮೋದಿ ಮನವಿ ಮಾಡಿದರು. ದೆಹಲಿಯಲ್ಲಿ ಉಗ್ರಗಾಮಿಗಳ ಎನ್ಕೌಂಟರ್ ಆದಾಗ ಕಾಂಗ್ರೆಸ್ ನಾಯಕರು ಕಣ್ಣೀರು ಹಾಕಿದ್ದಾರೆ. ಸರ್ಜಿಕಲ್ ಸ್ಟೈಕ್ ಸಂದರ್ಭದಲ್ಲಿ ದೇಶವನ್ನು ಅವಮಾನ ಮಾಡಿದ್ದಾರೆ. ಕರ್ನಾಟಕದಲ್ಲಿ ಆತಂಕವಾದಿಗಳ ಬೆಂಬಲಕ್ಕೆ ನಿಂತಿದ್ದಾರೆ. ಕಾಂಗ್ರೆಸ್ ಇತಿಹಾಸ ಗಮನಿಸಿದರೆ ಆತಂಕವಾದಿ ತುಷ್ಟಿಕರಣ ಮಾಡುವುದೇ ಆಗಿದೆ. ರಾಜ್ಯ ಅಭಿವೃದ್ಧಿಯಲ್ಲಿ ಮೊದಲ ಸ್ಥಾನಕ್ಕೆ ಏರಬೇಕಾದರೆ ಉಗ್ರವಾದ ಮಟ್ಟಹಾಕಬೇಕಿದೆ ಎಂದು ಕರೆ ನೀಡಿದರು.
ಕಾಂಗ್ರೆಸ್ ಎಂದಿಗೂ ಬಿಜೆಪಿ ಅಭಿವೃದ್ಧಿಯ ವೇಗವನ್ನು ಸಹಿಸುವುದಿಲ್ಲ. 2014ಕ್ಕೂ ಮೊದಲು ದೇಶದಲ್ಲಿ ಎಷ್ಟು ವೈದ್ಯಕೀಯ ಕಾಲೇಜು ಸ್ಥಾಪಿಸಲಾಗಿತ್ತೊ ಬಿಜೆಪಿ ಅದರ ಎರಡು ಪಟ್ಟು ವೈದ್ಯಕೀಯ ಕಾಲೇಜುಗಳನ್ನು 9 ವರ್ಷದಲ್ಲಿ ಸ್ಥಾಪಿಸಿದೆ. ಇದರಿಂದ ಬಡಜನರಿಗೆ ಅನುಕೂಲವಾಗುತ್ತಿದೆ. ಸರ್ಕಾರದ ವತಿಯಿಂದ ನರ್ಸಿಂಗ್ ಕಾಲೇಜು ಪ್ರಾರಂಭಿಸಲಾಗುತ್ತಿದೆ. ಕರ್ನಾಟಕದ ಯುವಜನರಿಗೆ ಉದ್ಯೋಗ ದೊರೆಯಬೇಕೆನ್ನುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಬಡವರ ಮಕ್ಕಳನ್ನು ಗಮನದಲ್ಲಿ ಇಟ್ಟುಕೊಂಡು ವೈದ್ಯಕೀಯ, ಎಂಜಿನಿರಿಂಗ್ ಪರೀಕ್ಷೆಗಳನ್ನು ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಕಾಂಗ್ರೆಸ್ ಗ್ಯಾರಟಿ ಮುಗಿದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಗ್ಯಾರಂಟಿ ಇಲ್ಲ. ಅವರ ವ್ಯಾರಂಟಿ ಎಲ್ಲೆಡೆ ಮುಗಿದು ಹೋಗಿದೆ. ಹೀಗಾಗಿ, ಅವರು ಸುಳ್ಳು ಗ್ಯಾರಂಟಿಗಳನ್ನು ನೀಡುತ್ತಿದ್ದಾರೆ. 2012ರಲ್ಲಿ ಗುಜರಾತ್ ಚುನಾವಣೆಯಲ್ಲಿ ವಸತಿ ನಿರ್ಮಾಣದ ಗ್ಯಾರಂಟಿ ನೀಡಿದರು ಆದರೆ, ಆ ಸಂದರ್ಭದಲ್ಲಿ ಗ್ಯಾರಂಟಿ ಕಾರ್ಡ್ ಭರ್ತಿ ಮಾಡಲು 500 ಲಂಚ ಪಡೆದಿರುವ ಆರೋಪಗಳು ಅವರ ಮೇಲಿವೆ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಯೋಜನೆಗಳನ್ನು ರಿವರ್ಸ್ ಗೇರ್ನಲ್ಲಿ ತೆಗೆದುಕೊಂಡು ಹೋಗುತ್ತಾರೆ. ಜನರಿಗೆ ನೀಡಿದ ಕೊಡುಗೆಗಳಿಗೆ ಕಡಿವಾಣ ಹಾಕಲಾಗುತ್ತದೆ ಎಂದು ಮೋದಿ ದೂರಿದರು.
ಕಾಂಗ್ರೆಸ್ ಸಮಾಜ ಒಡೆಯುವ ಕಾರ್ಯದಲ್ಲಿ ತಲ್ಲೀನವಾಗಿದೆ. ದ್ವೇಷ ಹುಟ್ಟಿಸುವ ಭಾಷಣ ಮಾಡಿ ಆತಂಕ ಸೃಷ್ಟಿಸುತ್ತಿದೆ. ಕಾಂಗ್ರೆಸ್ ನಾಯಕರು ಪ್ರಧಾನಿಯನ್ನು 90ಕ್ಕಿಂತ ಹೆಚ್ಚು ಬಾರಿ ನಿಂದನೆ ಮಾಡಿದ್ದಾರೆ. ಕಾಂಗ್ರೆಸ್ ನಿಜ ಬಣ್ಣ ಜನರಿಗೆ ಅರ್ಥವಾಗಿದೆ. ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ ಎಂದು ತಿಳಿಸಿದರು.
ಕರ್ನಾಟಕವನ್ನು ದೇಶದ ನಂಬರ್ 1 ರಾಜ್ಯ ಮಾಡುವ ಸಂಕಲ್ಪ ಮಾಡಬೇಕಿದೆ. ಮುಂದಿನ 25 ವರ್ಷಗಳ ಕಾಲದಲ್ಲಿ ಕರ್ನಾಟಕ ಎತ್ತ ಸಾಗಬೇಕಿದೆ ಎಂಬ ಅಭಿವೃದ್ಧಿಯ ಎಂಜಿನ್ಗೆ ಚುನಾವಣೆಯಲ್ಲಿ ಚಾಲನೆ ನೀಡಬೇಕಿದೆ ಎಂದು ಹೇಳಿದರು.
ಚಿತ್ರದುರ್ಗವನ್ನು ಏಳು ಸುತ್ತಿನ ಕೋಟೆ ಎಂದು ಗುರುತಿಸುತ್ತೇವೆ. ಬಿಜೆಪಿ ಸರ್ಕಾರ ಏಳು ಸುತ್ತಿನ ಭದ್ರತೆಯನ್ನು ಸಮಾಜಕ್ಕೆ ನೀಡುತ್ತಿದೆ. ಸರ್ವರಿಗೂ ಮನೆ ನೀಡುವ ಪಿಎಂ ವಸತಿ ಯೋಜನೆ, ಅಡುಗೆ ಅನಿಲ, ನೀರು ಸಂಪರ್ಕ ಕಲ್ಪಿಸಲಾಗಿದೆ. ಬಡತನ ನಿರ್ಮೂಲನೆಗೆ ಪಡಿತರವನ್ನು ಪ್ರತಿ ಮನೆಗೆ ನೀಡಲಾಗಿದೆ. ಆಯುಷ್ಮಾನ ಭಾರತದ ಮೂಲಕ ಎಲ್ಲರ ಆಯೋಗ್ಯ ರಕ್ಷಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಎ ನಾರಾಯಣಸ್ವಾಮಿ, ಬಿಜೆಪಿ ಅಭ್ಯರ್ಥಿಗಳಾದ ತಿಪ್ಪಾರೆಡ್ಡಿ, ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ನೇರಲಗುಂಟೆ ತಿಪ್ಪೇಸ್ವಾಮಿ, ಲಿಂಗಮೂರ್ತಿ ಇತರರು ಇದ್ದರು.