i
ರಾಜಕೀಯ ಸ್ವರೂಪ ಪಡೆಯುತ್ತಿರುವ ಹಿರಿಯೂರು ನಗರದ ಹುಳಿಯಾರ್ ರಸ್ತೆ ಅಗಲೀಕರಣ!?…
ವರದಿ-ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಟಿಬಿ ವೃತ್ತದಿಂದ ತಾಲೂಕು ಕಚೇರಿ ಮಾರ್ಗವಾಗಿ ವೇದಾವತಿ ನದಿ ಸೇತುವೆ ಮಾರ್ಗ, ಶ್ರೀರಾಮ ದೇವಸ್ಥಾನ ರಸ್ತೆ, ಗಾಂಧಿ ವೃತ್ತ ಬಳಸಿಕೊಂಡು ಹುಳಿಯಾರ್ ರಸ್ತೆ ಅಗಲೀಕರಣ ಅತ್ಯಂತ ಜಟಿಲವಾಗತೊಡಗಿದೆ. ಅಷ್ಟೇ ಅಲ್ಲ ರಾಜಕೀಯ ಸ್ವರೂಪ ಪಡೆದುಕೊಂಡು ನೆಪ ಮಾತ್ರಕ್ಕೆ ರಸ್ತೆ ಅಗಲೀಕರಣ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.
ಹುಳಿಯಾರ್ ರಸ್ತೆ ಅಗಲೀಕರಣ ಕಾಮಗಾರಿ ಕಳೆದ 15 ವರ್ಷಗಳಿಂದಲೂ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ನಗರದ ಸರ್ಕಾರಿ ವೇದಾವತಿ ಪ್ರಥಮ ದರ್ಜೆ ವಿಜ್ಞಾನ ಕಾಲೇಜ್ ನಿಂದ ನಂಜಯ್ಯನಕೊಟ್ಟಿಗೆ ತನಕ ರಸ್ತೆ ಅಗಲೀಕರಣವನ್ನು ಅತ್ಯಂತ ವೈಜ್ಞಾನಿಕವಾಗಿ ಎರಡು ಬದಿಯಲ್ಲಿ ಹೆದ್ದಾರಿ ಮಾರ್ಗಸೂಚಿ ಪ್ರಕಾರ ರಸ್ತೆ ಅಗಲೀಕರಣ ಮಾಡಲಾಗಿದೆ. ಆದರೆ ನಂಜಯ್ಯನಕೊಟ್ಟಿಗೆಯಿಂದ ನಗರದ ಗಾಂಧಿ ವೃತ್ತದವರೆಗೆ ಆರಂಭಿಸಿರುವ ಹುಳಿಯಾರು ರಸ್ತೆ ಅಗಲೀಕರಣ ನೆಪ ಮಾತ್ರಕ್ಕೆ ಆಗುತ್ತಿದೆ. ರಸ್ತೆ ಎರಡು ಬದಿಗಳಲ್ಲಿ ಕೇವಲ 3 ಅಡಿಯಷ್ಟು ಮಾತ್ರ ಅಗಲೀಕರಣ ಮಾಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಆಡಳಿತ ರೂಢ ಶಾಸಕರು ಗುರಿಯಾಗಿದ್ದಾರೆ. ಹುಳಿಯಾರ್ ರಸ್ತೆಯ ಅಂಗಡಿ ಮುಂಗ್ಗಟ್ಟುಗಳ ಮಾಲೀಕರ ಒತ್ತಡಕ್ಕೆ ಮಣಿದಂತೆ ಕಾಣುತ್ತಿರುವ ಜನಪ್ರತಿನಿಧಿಗಳು ರಸ್ತೆ ಅಗಲೀಕರಣವನ್ನು ಕೇವಲ ಐದಾರು ಅಡಿಗೆ ಸೀಮಿತ ಮಾಡಿಕೊಳ್ಳಲಾಗಿದೆ. ಈ ರಸ್ತೆ ಅಗಲೀಕರಣ ಮಾಡುವುದಕ್ಕಿಂತ ಹಾಗೇ ಬಿಟ್ಟಿದ್ದರೆ ಚನ್ನಾಗಿರುತ್ತಿತ್ತೇನೋ ಎನ್ನುವ ಭಾವನೆ ಜನ ಸಾಮಾನ್ಯರಲ್ಲಿ ಮೂಡಿದೆ.
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಮಾನದಂಡಗಳು ಕಾಲಿನ ಕಸವಾಗಿ ಬಿಟ್ಟಿದೆ. ಇತ್ತ ಅಧಿಕಾರಿಗಳು ಅಂದಾಜು ಪಟ್ಟಿ ತಯಾರಿಸಿ ಅನುಮೋದನೆ ಪಡೆಯಬೇಕಾದರೆ ಏನು ಮಾಡುತ್ತಾರೆ ಎನ್ನುವುದು ಸೋಜಿಗ ಮೂಡಿಸಿದೆ.
ನಗರದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ಶ್ರೀರಂಗಪಟ್ಟಣ ಬೀದರ್ ರಸ್ತೆ ಅಗಲೀಕರಣ ಕಾಮಗಾರಿ ಸಾರ್ವಜನಿಕರಿಗೆ ಯಕ್ಷಪ್ರಶ್ನೆಯಾಗಿ ಉಳಿದಿದೆ. ನಗರದ ಜನಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ವಾಹನಗಳ ಸಂಖ್ಯೆ ದಟ್ಟಣೆಯಾಗಿದೆ. ಫುಟ್ ಪಾತ್ ನಲ್ಲಿ ಓಡಾಡುವುದಕ್ಕೆ ಸಾರ್ವಜನಿಕರಿಗೆ ತುಂಬಾ ಕಷ್ಟವಾಗುತ್ತದೆ. 15 ವರ್ಷಗಳಿಂದ ರಸ್ತೆಯ ಅಗಲೀಕರಣ ಮಾಡಲು ಜಿಲ್ಲಾಧಿಕಾರಿಗಳು ನಗರಸಭೆ ರಸ್ತೆ ಅಗಲೀಕರಣಕ್ಕೆ ಗುರುತು ಮಾಡಲಾಗಿತ್ತು. ಗುರುತು ಮಾಡಿರುವುದನ್ನು ಧಿಕ್ಕರಿಸಿ ಕೇವಲ ಎರಡು ಮೀಟರ್ ಮಾತ್ರ ಅಗಲೀಕರಣ ಆಗುತ್ತಿದ್ದು ಸಾರ್ವಜನಿಕರು ಇಂತಹ ಬೇಕಾಬಿಟ್ಟಿ ಕೆಲಸ ಮಾಡಬಾರದು ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಹುಳಿಯಾರು ರಸ್ತೆ ಅಗಲೀಕರಣ ವಿಚಾರದಲ್ಲಿ ಸಾಕಷ್ಟು ಬಾರಿ ಅಧಿಕಾರಿಗಳು ರಸ್ತೆ ಅಗಲೀಕರಣ ಮಾಡಲು ಇಂತಿಷ್ಟೇ ಮೀಟರ್ ಎಂದು ಗುರುತು ಮಾಡಿದ್ದರು. ಆದರೆ ಮಾಡಿದ ಮಾರ್ಕಿಂಗ್(ಗುರುತು) ಈಗ ಮಂಗಮಾಯವಾಗಿದೆ. ಗಾಂಧಿ ವೃತ್ತದಿಂದ ವೇದಾವತಿ ಸೇತುವೆ ತನಕ ಸಾಕಷ್ಟು ಒತ್ತುವರಿ ಮಾಡಲಾಗಿದೆ. ಈ ಒತ್ತುವರಿ ಮಾಡಿರುವ ಕಟ್ಟಡಗಳ ಮಾಲೀಕರ ಒತ್ತಡ ಮತ್ತು ಆಮಿಷಗಳಿಗೆ ಜನಪ್ರತಿನಿಧಿಗಳು ಬಲಿಯಾಗಿದ್ದಾರಾ ಎನ್ನುವ ಅನುಮಾನ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.
ಹಾಲಿ ಹುಳಿಯಾರು ರಸ್ತೆ ಅಗಲೀಕರಣ ಮಾಡಿಲ್ಲ ಕೇವಲ ಫುಟ್ ಪಾತ್ ರಸ್ತೆ ಅಗಲೀಕರಣ ಮಾಡುತ್ತಿದ್ದಾರೆನ್ನುವ ಆರೋಪಿಗಳು ಸಾರ್ವಜನಿಕರಿಂದ ಕೇಳಿ ಬಂದಿವೆ. ಹುಳಿಯಾರು ರಸ್ತೆಯನ್ನು ಬೇಕಾಬಿಟ್ಟಿಯಾಗಿ ಅಗಲೀಕರಣ ಮಾಡುವುದು ಸಮಂಜಸವಲ್ಲ. ಸರ್ಕಾರದ ಹಣ ಪೋಲಾಗುವುದರಿಂದ ಯಾವುದೇ ರೀತಿಯ ಅಭಿವೃದ್ಧಿ ಆಗುವುದಿಲ್ಲ ಎನ್ನುವುದು ಸಾರ್ವಜನಿಕರ ಮಾತಾಗಿದೆ.
ಬೇಕಾಬಿಟ್ಟಿ ರಸ್ತೆ ಅಗಲೀಕರಣ ಮಾಡಿ ಸರ್ಕಾರದ ಹಣ ಪೋಲಾಗುವುದನ್ನು ತಡೆಯಬೇಕು. ಇಲ್ಲದಿದ್ದರೆ ಇಂತಹ ಕಾಮಗಾರಿ ಮಾಡಿ ಸರ್ಕಾರದ ಹಣವನ್ನು ಲಪಟಾಯಿಸುತ್ತಾರೆ.
ನಗರದ ಮಧ್ಯಭಾಗದಲ್ಲಿ ಟ್ರಾಫಿಕ್ ಜಾಮ್ ಆಗುವುದು ಎಲ್ಲಾ ಅಧಿಕಾರಿಗಳಿಗೂ ರಾಜಕಾರಣಿಗಳಿಗೂ ಗೊತ್ತಿರುವ ವಿಷಯ. ಆದರೆ ಕಣ್ಣು ಮುಚ್ಚಿ ಕುಳಿತಿರುವುದು ವಿಷಾದ ಸಂಗತಿ. ಸಾರ್ವಜನಿಕರು ರಸ್ತೆಯ ಅಗಲೀಕರಣ ಯಾವಾಗ ಮಾಡುತ್ತಾರೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ಹುಳಿಯಾರು ರಸ್ತೆ ಅಗಲೀಕರಣ ನೋಡಿ ಕಣ್ಣು ಮುಚ್ಚ ಬೇಕೆನ್ನುವ ಮಹಾದಾಸೆ ಹೊಂದಿದ್ದಾರೆ.
ಹಾಲಿ ಮಾಡಲಾಗುತ್ತಿರುವ ರಸ್ತೆ ಕಾಮಗಾರಿ ಅಂದಾಜು ವೆಚ್ಚ ಎಷ್ಟು, ರಸ್ತೆ ಎರಡು ಬದಿಯಲ್ಲಿ ಎಷ್ಟು ಮೀಟರ್ ಅಗಲೀಕರಣ ಮಾಡಲಾಗುತ್ತದೆ, ಎಲ್ಲಿಂದ ಎಲ್ಲಿಗೆ ಅಗಲೀಕರಣ ಮಾಡಲಾಗುತ್ತಿದೆ, ಸರ್ಕಾರದ ಯಾವ ಅನುದಾನದಲ್ಲಿ ಮಾಡಲಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯುಳ್ಳು ನಾಮಫಲಕ ಹಾಕಿ ರಸ್ತೆ ಅಗಲೀಕರಣ ಮಾಡಬೇಕು ಎನ್ನುವ ಆಗ್ರಹ ಸಾರ್ವಜನಿಕರದಾಗಿದೆ.