i
ಹತ್ತು ವರ್ಷ ಎಲ್ಲಾ ವರ್ಗದ ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ:ಶಾಸಕ ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ವಿಧಾನಸಭಾ ಚುನಾವಣೆಗೆ ಇನ್ನೂ ಕೇವಲ ಎಂಟು ದಿನಗಳು ಮಾತ್ರ ಬಾಕಿ ಇದ್ದು, ನಾಲ್ಕು ದಿನಗಳ ಒಳಗೆ ಪ್ರಚಾರ ಕಾರ್ಯ ಮುಕ್ತಾಯಗೊಳಿಸಬೇಕಿದೆ. ಈಗಾಗಲೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಮತಯಾಚನೆ ಮಾಡಿದ್ದೇನೆ. ಅವರ ಶುಭಹಾರೈಕೆ ಮತಗಳಾಗಿ ಪರಿವರ್ತನೆ ಹೊಂದಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ವಿಶ್ವಾಸ ಹೆಚ್ಚಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು ರಾಮಜೋಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಚ್ಚುಗುಂಟೆ, ಜನ್ನೇನಹಳ್ಳಿ, ರಾಮಜೋಗಿಹಳ್ಳಿ, ಬಾಲೇನಹಳ್ಳಿ, ಕುರುಡಿಹಳ್ಳಿ ಮುಂತಾದ ಗ್ರಾಮಗಳ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ಗ್ರಾಮೀಣ ಭಾಗದಲ್ಲೂ ಸಹ ಸಾಕಷ್ಟು ಸಮಸ್ಯೆಗಳಿಗೆ ಸ್ಪಂದಿಸಿರುವುದಲ್ಲದೆ, ಸರ್ಕಾರದ ಸೌಲಭ್ಯಗಳನ್ನು ಆರ್ಹರಿಗೆ ನೀಡಿದ ಸಂತೃಪ್ತಿ ನನಗಿದೆ. ಇನ್ನೂ ಕೆಲವು ವರ್ಷಗಳ ಕಾಲ ಜನ ಸೇವೆ ಮಾಡುವ ಅಭಿಲಾಕ್ಷೆಯಿಂದ ಎಲ್ಲರ ಅಪೇಕ್ಷೆಯಂತೆ ಚುನಾವಣೆಗೆ ಸ್ಪರ್ಧಿಸಿದ್ದು, ತಪ್ಪದೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ನನ್ನನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ.ಪ್ರಕಾಶ್ಮೂರ್ತಿ ಮಾತನಾಡಿ, ಶಾಸಕ ಟಿ.ರಘುಮೂರ್ತಿಯವರ ಕಾರ್ಯವೈಖರಿಯ ಬಗ್ಗೆ ಈ ಭಾಗದ ಎಲ್ಲಾ ಮತದಾರರಿಗೆ ಹೆಚ್ಚು ತಿಳಿದಿದೆ. ಅವರ ಅವಧಿಯಲ್ಲಿ ಕನಿಷ್ಠ ಪಕ್ಷ ಪ್ರತಿಗ್ರಾಮಕ್ಕೂ ಮೂರ್ನಾಲ್ಕು ಬಾರಿ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಗ್ರಾಮೀಣ ಭಾಗದ ಜನತೆ ಸರ್ಕಾರ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಶಾಸಕ ಟಿ.ರಘುಮೂರ್ತಿಯವರ ಪಾತ್ರ ಅಪಾರ ಆದ್ದರಿಂದ ಈ ಬಾರಿ ಮತ್ತೊಮ್ಮೆ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಮತದಾರರು ಹೊರಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ಘಟಕದ ಅಧ್ಯಕ್ಷೆ ಗೀತಾನಂದಿನಿಗೌಡ, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಪ್ಪ, ಪರಶುರಾಮಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ಶಶಿಧರ, ಗೀತಾಬಾಯಿ, ಕೃಷ್ಣ, ಎನ್.ಮಂಜುನಾಥ, ಸೈಪುಲ್ಲಾ ಮುಂತಾದವರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.