i
ಕಾಂಗ್ರೆಸ್ ಮುಖಂಡ ಸೋಮಶೇಖರ್ ಮೌನ, ನಿರ್ಣಯಕವಾಗಿರುವ ಕುರುಬ ಮತಗಳು ಯಾರ ಪರ?…
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ-ದಾವಣಗೆರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದ ಕುರುಬ ಸಮಾಜದ ಸೋಮಶೇಖರ್ ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ತೆರೆಮರೆಗೆ ಸರಿದು ಮೌನಕ್ಕೆ ಶರಣಾಗಿರುವುದು ಹಲವು ಪ್ರಶ್ನೆಗಳನ್ನು ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಹುಟ್ಟು ಹಾಕಿದೆ.
ಹಿರಿಯೂರು ಟಿಕೆಟ್ ಘೋಷಣೆ ತನಕ ಅತ್ಯಂತ ಕ್ರಿಯಾಶೀಲವಾಗಿದ್ದ ಸೋಮಶೇಖರ್ ಇಂದು ಎಲ್ಲೂ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಯಾರ ಪರವಾಗಿಯು ಅವರು ಕೆಲಸ ಮಾಡುತ್ತಿಲ್ಲ, ಆದರೆ ಸೋಮಶೇಖರ್ ಕ್ಷೇತ್ರದಲ್ಲಿ ಓಡಾಡುತ್ತಿಲ್ಲವಾದ್ದರಿಂದ ಒಬ್ಬರನ್ನು ಸೋಲಿಸಿ ಮತ್ತೊಬ್ಬರ ಗೆಲುವಿನಲ್ಲಿ ಕೆಲಸ ಮಾಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಹಿರಿಯೂರು ವಿಧಾನಸಭಾ ಕ್ಷೇತ್ರದ ಫಲಿತಾಂಶದ ಮೇಲೆ ಅತ್ಯಂತ ನಿರ್ಣಯಕವಾಗಿರುವ ಕುರುಬ ಸಮಾಜದ ಮತಗಳು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾ ಅಥವಾ ಅನ್ಯರ ಪಾಲಾಗುತ್ತಾ ಎನ್ನುವ ಪ್ರಶ್ನೆ ಕೂಡಾ ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಈ ರೀತಿಯ ಪ್ರಶ್ನೆ ಏಳಲು ಮುಖ್ಯ ಕಾರಣ ಕುರುಬ ಸಮಾಜದ ಮುಖಂಡ ಸೋಮಶೇಖರ್ ಅವರು ಎಂಎಲ್ ಸಿ ಚುನಾವಣೆಯಲ್ಲಿ ಸೋಲು ಕಾಣಲು ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ಎನ್ನುವ ಆರೋಪಿ ಇದೆ.
ಸುಧಾಕರ್ ಮೇಲೆ ಸೋಲಿನ ಆರೋಪವನ್ನು ಸೋಮಶೇಖರ್ ಮಾಡುತ್ತಿದ್ದು ಅದಕ್ಕೆ ಕುರುಬ ಸಮಾಜದ ಮುಖಂಡರೊಬ್ಬರು ಎಂಎಲ್ ಸಿ ಚುನಾವಣೆ ಸಂದರ್ಭದಲ್ಲಿ ಸೋಮಶೇಖರ್ ಗೆ ದೂರವಾಣಿ ಕರೆ ಮಾಡಿ ನಮ್ಮ ಸುಧಾಕರ್ ಅವರು ನಿಮ್ಮ ಪರ ಕೆಲಸ ಮಾಡುತ್ತಿಲ್ಲ, ಅವರನ್ನು ಬಂದ ಕಾಣಬೇಕು ಎಂದು ಸಂದೇಶವನ್ನು ಮುಟ್ಟಿಸಿದ್ದರು ಎನ್ನಲಾಗಿದೆ. ಸೋಲಿನ ನಂತರ ನೀವು ನನಗೆ ಚುನಾವಣೆ ಮಾಡಿಲ್ಲ ಎನ್ನುವ ವಿಷಯವನ್ನು ಸುಧಾಕರ್ ಮುಂದೆ ಸೋಮಶೇಖರ್ ನೇರವಾಗಿ ಪ್ರಶ್ನಿಸಿದ್ದರು. ಅಷ್ಟೇ ಅಲ್ಲ ಹಿರಿಯೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಬಹುತೇಕ ಎಲ್ಲ ಸಮುದಾಯಗಳ ಮುಖಂಡರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ದಿನ ಬೆಳಗಾಗುವುದರೊಳಗೆ ಹಿರಿಯೂರು ಕ್ಷೇತ್ರದ ಜನರ ಪ್ರೀತಿ, ವಿಶ್ವಾಸಗಳಿಸುವಲ್ಲಿ ಸೋಮಶೇಖರ್ ಯಶಸ್ವಿಯಾಗಿದ್ದರು. ಅಲ್ಲದೆ ಸೋಮಶೇಖರ್ ಪ್ರಭಾವ ದಿನೇ ದಿನೇ ಕ್ಷೇತ್ರದಲ್ಲಿ ವ್ಯಾಪಿಸುತ್ತಾ ಹೋಯಿತು. ಕೊನೆಗೆ ಧರ್ಮಪುರದ ಕಾಂಗ್ರೆಸ್ ಕಾರ್ಯಕ್ರಮ ಒಂದರಲ್ಲಿ ಸುಧಾಕರ್ ಬೆಂಬಲಿಗರು ಸೋಮಶೇಖರ್ ಮತ್ತು ಅವರ ಬೆಂಬಲಿಗರ ಮೇಲೆ ಹಲ್ಲೆ ಮಾಡಿದರು. ಇದು ಅಟ್ರಾಸಿಟಿ ಪ್ರಕರಣ ದಾಖಲಿಸುವಂತಾಯಿತು. ಕೊನೆಗೆ ರಾಜ್ಯ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಸುಧಾಕರ್ ಮತ್ತು ಸೋಮಶೇಖರ್ ರಾಜೀ ಮಾಡಿಕೊಂಡರು.
ಆದರೂ ಸೋಮಶೇಖರ್ ಸಂಘಟನೆ ಮಾಡುವುದನ್ನ ನಿಲ್ಲಿಸಲಿಲ್ಲ. ಕಾಂಗ್ರೆಸ್ ಟಿಕೆಟ್ ಸೋಮಶೇಖರ್ ಅವರಿಗೆ ಕಾಯಂ ಆಗಲಿದೆ, ಸುಧಾಕರ್ ಅವರಿಗೆ ಟಿಕೆಟ್ ತಪ್ಪಲಿದೆ ಎನ್ನುವ ವಾತಾವರಣ ನಿರ್ಮಾಣವಾಯಿತು.
ಅಷ್ಟೇ ಅಲ್ಲ ಸುಧಾಕರ್ ಡಿಕೆಶಿ ಬಣದಲ್ಲಿ ಗುರುತಿಸಿಕೊಂಡರೆ ಸೋಮಶೇಖರ್ ಸಿದ್ದರಾಮಯ್ಯನವರಲ್ಲಿ ಗುರುತಿಸಿಕೊಂಡರು. ಹಿರಿಯೂರು ಕ್ಷೇತ್ರದಲ್ಲಿ ಡಿಕೆಶಿ ಮೇಲ್ಗೈ ಸಾಧಿಸಿ ಶಿಷ್ಯ ಸುಧಾಕರ್ ಗೆ ಟಿಕೆಟ್ ನೀಡಿದರು.
ಸಿದ್ದರಾಮಯ್ಯ ಗೈರು-
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 16 ಸಾವಿರದಷ್ಟು ಮತದಾರರಿರುವ ಕುರುಬ ಸಮಾಜ ಫಲಿತಾಂಶದ ಮೇಲೆ ಖಂಡಿತ ನಿರ್ಣಯಕ ಪಾತ್ರ ವಹಿಸಲಿದೆ. ಮತದಾನದ ದಿನ ಸಮೀಪವಾಗುತ್ತಿದ್ದು ದಿನದಿಂದ ದಿನಕ್ಕೆ ಚುನಾವಣೆ ಕಾವು ರಂಗೇರುತ್ತಿದ್ದು ಪಕ್ಕದ ತುಮಕೂರು ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಸಿದ್ದರಾಮಯ್ಯ ಬಂದು ಹೋಗುತ್ತಿದ್ದಾರೆ. ಆದರೆ ಹಿರಿಯೂರು ಕ್ಷೇತ್ರಕ್ಕೆ ಏಕೆ ಪ್ರಚಾರ ಮಾಡಲು ಬರುತ್ತಿಲ್ಲ, ಇದರ ಹಿಂದಿನ ಗುಟ್ಟೇನು ಎನ್ನುವ ಪ್ರಶ್ನೆ ಕುರುಬ ಸಮಾಜದಲ್ಲಿ ಹುಟ್ಟು ಹಾಕಿದೆ.
ಕುರುಬ ಸಮಾಜದ ಬಹುತೇಕರು ಕಾಂಗ್ರೆಸ್ ಬೆಂಬಲಿಗರು ಎನ್ನುವುದು ನೂರಷ್ಟು ಸತ್ಯ. ಆದರೆ ಕುರುಬ ಸಮಾಜದ ಸೋಮಶೇಖರ್ ಸೋಲು ವಿಧಾನಸಭಾ ಚುನಾವಣೆಯಲ್ಲಿ ಪ್ರತಿಧ್ವನಿಸಲಿದೆಯಾ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ.
ಸಿದ್ದರಾಮಯ್ಯನವರು ಏಕೆ ಹಿರಿಯೂರು ಕ್ಷೇತ್ರಕ್ಕೆ ಪ್ರಚಾರಕ್ಕೆ ಬರುತ್ತಿಲ್ಲ ಎನ್ನುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಸೋಮಶೇಖರ್ ಇಡೀ ಕುರುಬ ಸಮಾಜ ಇರುವಂತ ಗ್ರಾಮಗಳಿಗೆ ಭೇಟಿ ನೀಡಿ ಸೋಲಿನ ನೋವು ತೋಡಿಕೊಂಡಿದ್ದಾರೆ ಎನ್ನುವ ಅಂಶ ಕೂಡ ಚರ್ಚೆ ಆಗುತ್ತಿದೆ. ಕುರುಬ ಸಮಾಜ ಕಾಂಗ್ರೆಸ್ ಪರ ನಿಲ್ಲುತ್ತೋ ಅಥವಾ ಸೋಮಶೇಖರ್ ಅವರ ಸೋಲಿಗೆ ಸೋಡು ತೀರಿಸಿಕೊಳ್ಳುತ್ತೋ ಕಾದು ನೋಡಬೇಕಿದೆ.
ಸೋಮಶೇಖರ್ ವಿಷಯದ ಜೊತೆಗೆ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರೀ ಸದ್ದು ಮಾಡುತ್ತಿರುವ ಮಂಜುನಾಥ್ ಅವರು ಸುಧಾಕರ್ ಅವರ ಅತ್ಯಂತ ನಿಕಟರಾಗಿದ್ದು ಸುಧಾಕರ್ ಅವರೇ ಹೊಸದುರ್ಗದಲ್ಲಿ ಸ್ಪರ್ಧಿಸುವಂತೆ ಉತ್ತೇಜನ ನೀಡಿದ್ದಾರೆ ಎನ್ನುವ ಆರೋಪಿಗಳು ಕೇಳಿ ಬರುತ್ತಿವೆ. ಮಂಜುನಾಥ್ ಅವರ ಸ್ಪರ್ಧೆಯಿಂದಾಗಿ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪನವರಿಗೆ ಎಲ್ಲೋ ಒಂದು ಹಿನ್ನಡೆಯಾಗುವ ಸಾಧ್ಯತೆ ಕೂಡ ಇದೆ ಎನ್ನುವ ಮಾತುಗಳು ಹೊಸದುರ್ಗ ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಈ ಎರಡು ವಿಚಾರಗಳ ಮೇಲೆ ಕುರುಬ ಸಮಾಜದ ಮತಗಳು ಹಿರಿಯೂರು ಕ್ಷೇತ್ರದಲ್ಲಿ ಯಾರಿಗೆ ಹೋಗಲಿವೆ ಎನ್ನುವುದು ಫಲಿತಾಂಶದ ನಂತರ ಗೋಚರವಾಗಲಿದೆ. ಅಲ್ಲಿಯ ತನಕ ಕುರುಬ ಸಮಾಜ ತಾನು ಯಾರ ಪರ ಎನ್ನುವ ಗುಟ್ಟನ್ನು ಇಂದಿಗೂ ಬಿಟ್ಟುಕೊಟ್ಟಿಲ್ಲ, ಹಾಗಾಗಿ ಹಿರಿಯೂರು ಕ್ಷೇತ್ರದಲ್ಲಿ ಯಾರು ಮುನ್ನಡೆ ಕಾಯ್ದುಕೊಂಡಿದ್ದಾರೆಂದು ಹೇಳಲು ಸಾಧ್ಯವಾಗುತ್ತಿಲ್ಲ.