i
ಕಾಂಗ್ರೆಸ್ ಪಕ್ಷವನ್ನು ಜನರೇ ತಿರಸ್ಕರಿಸುತ್ತಿದ್ದಾರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…
ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಕಾಂಗ್ರೆಸ್ ಪಕ್ಷವನ್ನು ಜನರೇ ತಿರಸ್ಕಾರ ಮಾಡುತ್ತಿದ್ದಾರೆ. 10 ಕೆಜಿ ಅಕ್ಕಿ ಕೊಡುತ್ತೇವೆ ಅಂತಾರೆ. ಉಚಿತ 200 ಯೂನಿಟ್ ವಿದ್ಯುತ್ ಕೊಡುತ್ತೇವೆ ಅಂತಾರೆ. ಸಾಮಾನ್ಯ ಜನರಿಗೆ 70 ಯೂನಿಟ್ ವಿದ್ಯುತ್ ಖರ್ಚಾಗುತ್ತದೆ. ಉಳಿದ ಯೂನಿಟ್ ಅವರ ಅಕೌಂಟ್ ಗೆ ಹೋಗುತ್ತದೆ. ವಾರಂಟಿ ಕಾರ್ಡ್ ಎಂದು ಹೇಳಿ ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯ ಉಣಕಲ್ ಗ್ರಾಮದಲ್ಲಿ ಅಭ್ಯರ್ಥಿ ಮಹೇಶ ತೆಂಗಿನಕಾಯಿ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು.
ಉಣಕಲ್ ಗ್ರಾಮ ನನಗೆ ಚಿರಪರಿಚಿತ. ನನಗೆ, ನಮ್ಮ ತಂದೆಯವರಿಗೆ ಪ್ರೀತಿ-ವಿಶ್ವಾಸವನ್ನು ಕೊಟ್ಟಿರುವಂತಹ ಗ್ರಾಮ. ಇಲ್ಲಿ ಯಾವಾಗಲೂ ಕೂಡ ಕಾಂಗ್ರೆಸ್ ವಿರುದ್ಧ ತಮ್ಮ ಬೆಂಬಲ ಕೊಟ್ಟಿದ್ದಾರೆ. ಇಲ್ಲಿನ ಜನರು ಶ್ರಮವಹಿಸಿ ಕೆಲಸ ಮಾಡುವ ರೈತಾಪಿ ಜನರು. ಉಣಕಲ್ ಗ್ರಾಮ ತನ್ನ ಸೊಗಡನ್ನು ಬಿಟ್ಟು ಕೊಡದೇ ಇರುವುದು ನನಗೆ ಸಂತಸ ತಂದಿದೆ ಎಂದರು.
ಇಲ್ಲಿ ಮೂರು ವಾರ್ಡ್ ಗಳಿವೆ. ಈ ವಾರ್ಡ್ ಬಿಜೆಪಿಗೆ ಲೀಡ್ ಕೊಟ್ಟಿರುವ ವಾರ್ಡ್. ಇಲ್ಲಿ ಯಾವಾಗಲೂ ಬಿಜೆಪಿಯಿಂದಲೇ ನಗರಸಭೆ ಸದಸ್ಯರಾಗಿದ್ದಾರೆ. ಈಗ ರಾಜಕೀಯ ಬದಲಾವಣೆ ಆಗಿದೆ. ನಮ್ಮ ಪಕ್ಷ ಯುವಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಮಹೇಶ ತೆಂಗಿನಕಾಯಿಗೆ ಟಿಕೆಟ್ ನೀಡಿದೆ. ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ಆಗಿದ್ದರೆ ಬಿಜೆಪಿ ಅಧಿಕಾರದಲ್ಲಿ. 24/7 ನೀರು, ನಗರಾಭಿವೃದ್ಧಿ, ರಸ್ತೆಗಳು ಹಾಗೂ ವಿಶೇಷವಾಗಿ ಮಹಾನಗರದಲ್ಲಿ ದುಡ್ಡು ಇಲ್ಲದೇ ಇದ್ದರೂ ಅಭಿವೃದ್ಧಿ ಮಾಡಿದ್ದೇವೆ ಎಂದರು.
ಕಾಂಗ್ರೆಸ್ 2013ರಿಂದ 2018ರಲ್ಲಿ ಅಧಿಕಾರಕ್ಕೆ ಬಂದಿತ್ತು. ಅವರು ಹುಬ್ಬಳ್ಳಿ-ಧಾರವಾಡ ನಗರಕ್ಕೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಿಲ್ಲ. ಯಾವಾಗಲೂ ಕಾಂಗ್ರೆಸ್ ನಾಯಕರು ಹುಬ್ಬಳ್ಳಿ-ಧಾರವಾಡವನ್ನು ತಿರಸ್ಕರಿಸುತ್ತ ಬಂದಿದ್ದಾರೆ. ಪಾಲಿಕೆಯಲ್ಲಿ ಕೆಲಸ ಮಾಡುವವರಿಗೆ ಸಂಬಳ ಸಿಗುವುದು ಕಷ್ಟವಾಗಿತ್ತು. ಅದನ್ನು ನಮ್ಮ ಯಡಿಯೂರಪ್ಪ ಅವರು ನಗರೋತ್ಥಾನ ಮಾಡಿ, ಎರಡು ಬಾರಿ 100 ಕೋಟಿ ರೂ ನೀಡಿದ್ದರು. ನಾನು ಮುಖ್ಯಮಂತ್ರಿ ಆದ ಮೇಲೆ ಮಹಾನಗರ ಪಾಲಿಕೆಗೆ 200 ರಿಂದ 300 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇನೆ. ಇದೇ ಅನುದಾನ ಮುಂದುವರಿಯಬೇಕಾದ್ರೆ ಬಿಜೆಪಿಗೆ ಮತವನ್ನು ಹಾಕಬೇಕು ಎಂದರು.
ನಮ್ಮ ನಿಮ್ಮ ನಡುವೆ ಭಾವನಾತ್ಮಕ ಸಂಬಂಧವಿದೆ. ಕಳೆದ ಆರು ಬಾರಿ ಬಿಜೆಪಿಗೆ ಮತ ನೀಡಿದ್ದಿರಿ. ಪಕ್ಷ, ರಾಷ್ಟ್ರೀಯ ನಾಯಕತ್ವ ನೋಡಿ ನೀವು ಮತ ನೀಡಿದ್ದೀರಿ. ಈ ಬಾರಿಯು ಬಿಜೆಪಿಗೆ ಮತ ಹಾಕಬೇಕು ಎಂದರು. ಬಿಜೆಪಿ ಮತ ಹಾಕಿದ್ರೆ, ಅಭ್ಯರ್ಥಿಯನ್ನು ಗೆಲ್ಲಿಸಿದ್ರೆ ಸೆಂಟ್ರಲ್ ಕ್ಷೇತ್ರಕ್ಕೆ ಎಷ್ಟು ಹಣ ಬೇಕು ಅಷ್ಟು ಹಣ ಕೋಡುತ್ತೇವೆ ಎಂದರು.
ಕಾಂಗ್ರೆಸ್ ನವರು ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮಾರಾಟವಾಗದ ವಸ್ತುಗಳಿಗೆ ಗ್ಯಾರಂಟಿ ಕೊಡುತ್ತಾರೆ. ಗುಣಮಟ್ಟ ಕಳೆದುಕೊಂಡ ವಸ್ತುವಿಗೆ ಎರಡು ವರ್ಷ ಬಾಳಿಕೆ ಬರುತ್ತೆ ಅಂತ ಹೇಳುತ್ತಾರೆ. ಅದನ್ನು ಯಾರು ತೆಗೆದುಕೊಂಡು ಹೋಗುವವರು ಇರುವುದಿಲ್ಲ. ಒಳ್ಳೆಯ ವಸ್ತುವಿಗೆ ಯಾವುದೇ ಗ್ಯಾರಂಟಿ ಬೇಕಾಗಿಲ್ಲ. ಅದರ ಗುಣಮಟ್ಟವೇ ಅದಕ್ಕೆ ಗ್ಯಾರಂಟಿ ಎಂದರು.
ಕುಡಿಯುವ ನೀರು ಕೊಡುತ್ತೇವೆ, ಎಸ್ಸಿ, ಎಸ್ಟಿ ಮೀಸಲಾತಿ, ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಮಾಡುತ್ತೇವೆ ಅಂತಾರೆ. ಕನಿಷ್ಠ ಈಗಿರುವ ಸರ್ಕಾರ ಏನು ಕೆಲಸ ಮಾಡಿದೆ ಅನ್ನುವುದನ್ನು ನೋಡುವ ವ್ಯವದಾನ, ಬುದ್ದಿವಂತಿಕೆ ಇವರಲ್ಲಿ ಇಲ್ಲ ಎಂದರು.
ಭಜರಂಗದಳವನ್ನ ಬ್ಯಾನ್ ಮಾಡುತ್ತೇವೆ ಅಂತ ಕಾಂಗ್ರೆಸ್ನವರು ಪ್ರಣಾಳಿಕೆಯಲ್ಲಿ ಹಾಕಿದ್ದಾರೆ. ಪಿಎಪ್ಐ ದೇಶದ್ರೋಹಿ ಸಂಘಟನೆ. ಭಜರಂಗದಳ ದೇಶಭಕ್ತಿ ಸಂಘಟನೆ. ಎರಡನ್ನು ಒಂದೇ ತಕ್ಕಡಿಯಲ್ಲಿ ತೂಗಲು ಹೊರಟಿದ್ದಾರೆ. ಇವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜಗದೀಶ್ ಶೆಟ್ಟರ್ ದಾರಿ ತಪ್ಪಿದ್ದಾರೆ–ಜಗದೀಶ ಶೆಟ್ಟರ್ಗೆ ನಮ್ಮ ಪಕ್ಷ ಉನ್ನತ ಸ್ಥಾನ ನೀಡಿತ್ತು. ಇನ್ನೂ ಉನ್ನತ ಸ್ಥಾನ ನೀಡುವುದಾಗಿ ಹೇಳಿತ್ತು. ನನಗೆ ಬಹಳ ನೋವಾಗಿದ್ದು ಹೋಗಿ ಹೋಗಿ ಕಾಂಗ್ರೆಸ್ ಪಕ್ಷವನ್ನ ಸೇರಿದ್ದಾರೆ. ಅವರಿಗೆ ಮೇ 10 ರವರೆಗೆ ಸನ್ಮಾನ. ಆಮೇಲೆ ಏನು ಎಂಬುದನ್ನು ನಾನು ಮಾತನಾಡುವುದಿಲ್ಲ. ಜಗದೀಶ್ ಶೆಟ್ಟರ್ ಅವರು ದಾರಿ ತಪ್ಪಿದ್ದಾರೆ ಎಂದು ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಹೆಸರು ಪ್ರಸ್ತಾಪಿಸದೇ ಮಾತನಾಡಿದರು. ಭಾರತೀಯ ಜನತಾ ಪಕ್ಷ ದೇಶವನ್ನು ಕಾಯುವ, ದೇಶವನ್ನು-ರಾಜ್ಯವನ್ನು ಕಟ್ಟುವಂತಹ ಪಕ್ಷ ಬಿಜೆಪಿ. ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ಮಾಡುವ ಪಕ್ಷಕ್ಕೆ ಅತಿಹೆಚ್ಚು ಮತಗಳನ್ನು ಕೊಟ್ಟು ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.