i
ಅಂಬೇಡ್ಕರ್ ನನ್ನೆಲ್ಲ ವ್ಯಕ್ತಿತ್ವಕ್ಕೆ ನಾನು ಋಣಿಯಾಗಿರುವುದು ಗೌತಮ ಬುದ್ಧರಿಗೆ ಮಾತ್ರ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮನುಷ್ಯನ ಮನಸ್ಸು ಮತ್ತು ಜಗತ್ತಿನ ಮನಸ್ಸು ಸುಧಾರಿಸದ ಹೊರತು ಪ್ರಪಂಚದ ಸುಧಾರಣೆ ಸಾಧ್ಯವಿಲ್ಲ. ಮನುಷ್ಯನ ಮನಸ್ಸನ್ನು ಸುಧಾರಿಸಲು ಪರಿಪೂರ್ಣ ಮಾರ್ಗ ತೋರಿರುವದೆಂದರೆ ಅದು ಬುದ್ಧನ ಬೋಧನೆಗಳು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ ಎಂದು ಗೌತಮ ಬುದ್ಧ ಪ್ರತಿಷ್ಠಾನ ಅಧ್ಯಕ್ಷ ಪ್ರಾಂಶುಪಾಲ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ಕೋಟೆ ನಾಡು ಬೌದ್ಧ ವಿಹಾರ ಧ್ಯಾನ ಕೇಂದ್ರದಲ್ಲಿ ಬೋಧಿ ಸತ್ವ ಡಾ.ಬಿ.ಆರ್.ಅಂಬೇಡ್ಕರ್ ಸ್ಥಾಪಿತ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕ ಹಾಗೂ ಗೌತಮ ಬುದ್ಧ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಬುದ್ದ ಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಅವರು ನನ್ನೆಲ್ಲ ವ್ಯಕ್ತಿತ್ವಕ್ಕೆ ನಾನು ಋಣಿಯಾಗಿರುವುದು ಗೌತಮ ಬುದ್ಧರಿಗೆ ಮಾತ್ರ. ಆದುದರಿಂದಲೇ ಬುದ್ದ ನನ್ನ ಗುರು,ಬುದ್ಧ ಧರ್ಮದ ಪ್ರಚಾರವೆಂದರೆ ಮನುಕುಲದ ಸೇವೆ ಮಾಡಿದಂತೆ ಎಂದು ಹೇಳಿದ್ದಾರೆ.
ಬುದ್ಧ ಪ್ರಜಾಪ್ರಭುತ್ವ ವಾದಿಯಾಗಿ ಹುಟ್ಟಿ, ಪ್ರಜಾಪ್ರಭುತ್ವವಾದಿಯಾಗಿಯೇ ನಿಧನ ಹೊಂದಿದರು. ವಿಶ್ವದ ಮೊದಲ ಮಾನವ ವಿಜ್ಞಾನಿಯಾಗಿರುವ ಬುದ್ಧರ ಬೋಧನೆಗಳ ಆಚರಣೆಗಳಿಂದ ಮಾತ್ರ ವಿಶ್ವ ಶಾಂತಿ ನೆಲೆಸಲು ಸಾಧ್ಯ. ನೈತಿಕತೆಯೇ ಬುದ್ಧ ಧರ್ಮದ ತಳಹದಿಯಾಗಿದ್ದು, ಮಾನವರ ಉನ್ನತ ಜೀವನಕ್ಕಾಗಿ ಶೀಲಾ, ಸಮಾಧಿ, ಪ್ರಜ್ಞೆ ನಿಯಮಗಳನ್ನು ಆಚರಿಸಬೇಕೆಂದು ಬೋಧಿಸಿದರು ಎಂದರು.
ಪ್ರೀತಿ, ಮೈತ್ರಿ, ಸ್ವಾತಂತ್ರ, ಸಮಾನತೆ, ಸಾಮರಸ್ಯಗಳು ಸಮಾಜದಲ್ಲಿ ಉಳಿಯಲು ಬುದ್ಧರು ಪಂಚಶೀಲ ಅಷ್ಟಾಂಗ ಮಾರ್ಗಗಳ ಆಚರಣೆಯ ಮಾರ್ಗ ತೋರಿದ ಈ ಭಗವಾನ್ ಬುದ್ಧರ ಧರ್ಮದ ಪ್ರಚಾರಕ್ಕಾಗಿ ಮಾನವ ಪ್ರೇಮಿಗಳೆಲ್ಲರೂ ನಿಮ್ಮ ಆದಾಯದ ಕಡೆ ಪಕ್ಷ 20ನೇ ಒಂದು ಭಾಗವನ್ನಾದರೂ ಕೊಡುಗೆಯಾಗಿ ನೀಡಬೇಕೆಂದು ಬಾಬಾ ಸಾಹೇಬ್ ಅಂಬೇಡ್ಕರ್ ಕರೆ ನೀಡಿದ್ದರು ಎಂದರು.
ಜೀವಪರ, ಬುದ್ಧಪರ ಮನಸ್ಸುಗಳು ಸಾಮಾನ್ಯ ಕಾರ್ಯಕ್ರಮಗಳಿಗೆ ಆದರೂ ಒಂದಾಗದೇ ಇರುವುದರಿಂದ ವಿಭಜನಕಾರಿ ಶಕ್ತಿಗಳು ಸಮಾಜದಲ್ಲಿ ವಿಜೃಂಭಿಸುತ್ತಿವೆ ಎಂದರು.
ವಿವಿಧ ಹೂಗಳಿಂದ ಅಲಂಕೃತಗೊಂಡ ಬೆಳ್ಳಿರಥದಲ್ಲಿ ಬುದ್ಧನ ಪ್ರತಿಮೆ ಮೆರವಣಿಗೆ ಕೋಟೆ ನಾಡು ಬುದ್ಧ ವಿಹಾರ ಕೇಂದ್ರದಿಂದ ಹೊರಟು ಯಂಗಮ್ಮನ ಕಟ್ಟೆ, ಸಹ್ಯಾದ್ರಿ ಬಡಾವಣೆ, ಸರಸ್ವತಿಪುರಂ ಬಡಾವಣೆ, ಚಳ್ಳಕೆರೆ ರಸ್ತೆ, ಆಸ್ಪತ್ರೆ ಮುಂಭಾಗ ಮದಕರಿ ವೃತ್ತ ಅಂಬೇಡ್ಕರ್ ವೃತ್ತ ಮೂಲಕ ಮೆರವಣಿಗೆ ಸಾಗಿ ಒನಕೆ ಓಬವ್ವ ವೃತ್ತದಲ್ಲಿ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಭಾರತೀಯ ಬೌದ್ಧ ಮಹಾಸಭಾ ಕಾರ್ಯದರ್ಶಿ ಡಾ. ರಾಜೇಂದ್ರ ದಮ್ಮಾಚಾರಿ, ರಾಜ್ಯ ಖಜಾಂಚಿ ಕೇಸರಿ, ಭಾರತೀಯ ಬೌದ್ಧ ಮಹಾಸಭಾ ಕಾರ್ಯದರ್ಶಿ ಲಾಯರ್ ಬೆನಕನಹಳ್ಳಿ ಚಂದ್ರಪ್ಪ, ಬಾಲನಹಳ್ಳಿ ರಾಮಚಂದ್ರಪ್ಪ, ಎಲ್ಐಸಿ ಮ್ಯಾನೇಜರ್ ಕೇಶವಮೂರ್ತಿ ಪ್ರಾಂಶುಪಾಲ ದುರ್ಗೇಶ್, ಜೆ. ಸಿದ್ದಲಿಂಗಮ್ಮ, ಭೀಮನಕೆರೆ ಪಿ ತಿಪ್ಪೇಸ್ವಾಮಿ, ಬುರುಜನರೊಪ್ಪದ ಹನುಮಂತಪ್ಪ, ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಪಿ.ಪ್ರೇಮನಾಥ್, ರಾಮಚಂದ್ರಪ್ಪ, ರಾಮಣ್ಣ, ಈ.ನಾಗೇಂದ್ರಪ್ಪ, ತುರುವನೂರು ಜಗನ್ನಾಥ್, ಹುಚ್ಚವಹಳ್ಳಿ ವೆಂಕಟೇಶ್, ಚಳ್ಳಕೆರೆ ಬಿಎಸ್ಐ ಘಟಕದ ಮಡಿವಾಳ ರವಿ ಕುಮಾರ್, ನೀತಿಗೆರೆ ಮಂಜಪ್ಪ ಇತರರಿದ್ದರು.