i
ಚುನಾವಣೆಗಾಗಿ ಬಂದವರಿಗೆ ಮತ ನೀಡದೇ ನಿಮ್ಮ ಮನೆ ಮಗನಂತೆ ದುಡಿಯುತ್ತಿರುವ ನನಗೆ ಮತ ಹಾಕಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚುನಾವಣೆಗಾಗಿ ಕ್ಷೇತ್ರಕ್ಕೆ ಬಂದವರಿಗೆ ಮತ ನೀಡದೇ ಸದಾ ನಿಮ್ಮ ಜೊತೆ ಮನೆ ಮಗನಂತೆ ದುಡಿಯುತ್ತಿರುವ ನನಗೆ ಮತ ಹಾಕುವ ಮೂಲಕ ನನ್ನ ಗೆಲುವಿಗೆ ಶ್ರಮಿಸಿದರೇ ಸದಾ ನಿಮ್ಮ ಸೇವಕನಾಗಿ ದುಡಿಯುತ್ತೇನೆ ಎಂದು ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದರು.
ತಾಲೂಕಿನ ತುರುವನೂರು ಹೋಬಳಿಯ ಹುಣಸೇಕಟ್ಟೆ, ಬಾಗೇನಾಳ್, ಕೂನಬೇವು, ಬೊಮ್ಮಕ್ಕನಹಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷ ಅಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ಚಳ್ಳಕೆರೆ ಕ್ಷೇತ್ರದ ಜನರು ಅಭಿವೃದ್ಧಿಗೆ ಮತ ನೀಡುತ್ತಾರೆ. ನಾನು ಶಕ್ತಿ ಮೀರಿ ಕ್ಷೇತ್ರವನ್ನು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ನಾನು ಮಾಡಿರುವ ಶಾಶ್ವತ ಅಭಿವೃದ್ಧಿ ಕಾರ್ಯಗಳು ಜನರ ಮನದಲ್ಲಿದೆ. ನಮ್ಮ ವಿರೋಧಿಗಳು ನಮ್ಮ ಜನಪ್ರಿಯತೆ ಸಹಿಸಿಕೊಳ್ಳದೇ ಮಾತನಾಡುತ್ತಿದ್ದು ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ. ನನ್ನದು ಕೇವಲ ಅಭಿವೃದ್ಧಿ ಜಪ, ದುಡಿಯುವ ಕೈಗಳಿಗೆ ಕೆಲಸ ನೀಡುವ ಕೆಲಸ ಆಗಬೇಕು. ಅದರ ಕಡೆ ನನ್ನ ಗಮನ ಹರಿಸುತ್ತಿದ್ದೇನೆ. ಜನರು ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದ್ದು ಗೆಲುವು ಸಾಧಿಸಿ ಮತ್ತೆ ಅಭಿವೃದ್ಧಿ ಪಥದ ಕಡೆ ಚಳ್ಳಕೆರೆ ತಾಲೂಕನ್ನು ತೆಗೆದುಕೊಂಡ ಹೋಗವ ಕಡೆ ಮಾತ್ರ ನನ್ನ ಆಲೋಚನೆ ಎಂದರು.
ರಾಜ್ಯದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಖಾಸಗೀಕರಣದಿಂದ ಯುವಪೀಳಿಗೆ, ರೈತರು, ಕಾರ್ಮಿಕರ ಬದುಕು ಸಂಕಷ್ಟದಲ್ಲಿದ್ದು ಗಮನ ಹರಿಸುತ್ತಿಲ್ಲ ಎಂದು ಹರಿಹಾಯ್ದರು.
ಕ್ಷೇತ್ರದ ಎಲ್ಲಾ ಕಡೆ ನಾನು ಸಂಚರಿಸುತ್ತಿದ್ದು ಯಾವ ಹಳ್ಳಿಗೆ ಹೋದರು ನಿರೀಕ್ಷೆ ಮೀರಿ ಬೆಂಬಲ ನೀಡುತ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯ ಸಾವಿರಾರು ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಅಭಿವೃದ್ಧಿ ಮೆಚ್ಚಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ನುಡಿದಂತೆ ನಡೆಯುವ ಪಕ್ಷ ಅಂದರೆ ಅದು ಕಾಂಗ್ರೆಸ್ ಮಾತ್ರ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸರ್ವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ಇದೀಗ ಕಾಂಗ್ರೆಸ್ ಪಕ್ಷದ 10 ಕೆಜಿ ಪಡಿತರ, 200 ಯುನಿಟ್ ವಿದ್ಯುತ್, 3000 ನಿರುದ್ಯೋಗಿ ಭತ್ಯೆ, ಮನೆ ಒಡತಿಗೆ 2000, ಎಲ್ಲ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯದ ಭರವಸೆ ನೀಡಿ ಬಡವರ ಏಳ್ಗೆಗೆ ಟೊಂಕ ಕಟ್ಟಿ ನಿಲ್ಲುವ ಕೆಲಸ ಕಾಂಗ್ರೆಸ್ ಮಾಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ರಾಮಪ್ಪ, ಮಾಜಿ ಜಿ.ಪಂ.ಸದಸ್ಯ ರವಿಕುಮಾರ್,ಪ್ರಕಾಶ್ ಮೂರ್ತಿ, ಬಾಬುರೆಡ್ಡಿ,ಗ್ರಾ.ಪಂ.ಉಪಾಧ್ಯಕ್ಷೆ ನಿಂಗಮ್ಮ, ಸದಸ್ಯರಾದ ಅರ್ಚನ, ಪಾಲಯ್ಯ,ಯಶೋಧಮ್ಮ, ಮುಖಂಡರಾದ ವೆಂಕಟೇಶ್,ಮೂರ್ತಿ,ಏಕಣ್ಣ, ಮಹಂತೇಶ್, ಅಹೋಬಲ ಅರುಣ್ ಕುಮಾರ್ , ಮಾರುತಿ, ಕಾಂತರಾಜ್, ಓಬಣ್ಣ, ಕಿರಣ್ ಇದ್ದರು.