i
ಧೂಳಿನಿಂದೆ ಎದ್ದ ಜೆಡಿಎಸ್, ತ್ರಿಕೋನ ಸ್ಪರ್ಧೆಯಲ್ಲಿ ಗೆಲ್ಲುವರ್ಯಾರು?…
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ, ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಐತಿಹಾಸಿಕ ಪ್ರವಾಸಿ ತಾಣವಾಗಿದೆ. ವಿವಿ ಸಾಗರ, ಗಾಯಿತ್ರಿ ಜಲಾಶಯ, ತೇರುಮಲ್ಲೇಶ್ವರ ಸ್ವಾಮಿ, ವದ್ದೀಕೆರೆ ಸಿದ್ದಪ್ಪ ಮತ್ತಿತರ ದೇವಾಲಯಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.
2023ರ ಚುನಾವಣೆಗೆ ಹಿರಿಯೂರು ಕ್ಷೇತ್ರ ಸಜ್ಜಾಗಿದೆ. ತನ್ನದೇ ಆದ ಇತಿಹಾಸ ಹೊಂದಿರುವ ಹಿರಿಯೂರು ಕ್ಷೇತ್ರದಲ್ಲಿ ರಾಜಕೀಯವಾಗಿ ಭಾರೀ ಸುದ್ದಿಯಲ್ಲಿದೆ. ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಈ ಮೂರು ಪ್ರಮುಖ ರಾಜಕೀಯ ಪಕ್ಷಗಳ ಹುರಿಯಾಳುಗಳು ಅಖಾಡಕ್ಕೆ ಇಳಿದಿದ್ದಾರೆ. ಇದಲ್ಲದೆ ಎಎಪಿ ಮತ್ತು ಜನಾರ್ಧನರೆಡ್ಡಿ ಪಕ್ಷಗಳಿಂದಲೂ ಅಭ್ಯರ್ಥಿಗಳು ಕಣದಲ್ಲಿದ್ದರೂ ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಈಗಾಗಲೇ ಕಾಂಗ್ರೆಸ್-ಬಿಜೆಪಿ ಪಕ್ಷಗಳನ್ನು ಗೆಲ್ಲಿಸಿ ಆ ಎರಡು ಪಕ್ಷಗಳ ಆಡಳಿತ ನೋಡಿದ್ದೇವೆ, ಒಮ್ಮೆ ಜೆಡಿಎಸ್ ಪಕ್ಷಕ್ಕೂ ಮತ ನೀಡಿ ಗೆಲ್ಲಿಸಿ ನೋಡೋಣ ಎನ್ನುವ ಮತದಾರರ ಭಾವನೆ ಇದ್ದಂತೆ ಕಾಣುತ್ತಿದೆ. ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು ನಮಗೆ ಜೆಡಿಎಸ್ ಪ್ರತಿಸ್ಪರ್ಧಿ ಎನ್ನುವುದು ಒಂದು ಕಡೆಯಾದರೆ ಬಿಜೆಪಿ ಅವರು ಕೂಡ ನಮಗೆ ಜೆಡಿಎಸ್ ಪಕ್ಷವೇ ಪ್ರತಿಸ್ಪರ್ಧಿ ಎಂದು ಹೇಳುತ್ತಿರುವುದು ಕಂಡು ಬರುತ್ತಿದೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ದಿಢೀರ್ ಧೂಳಿನಿಂದ ಎದ್ದಂತೆ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದು ಎಲ್ಲ ಊರು ಕೇರಿಗಳಲ್ಲಿ ಚರ್ಚೆ ಆಗುವಂತಾಗಿದೆ. ಬಿಜೆಪಿ ಯಾವುದೇ ಕಾರಣಕ್ಕೂ ಗೆಲ್ಲಬಾರದೆಂದು ಕಾಂಗ್ರೆಸ್ ನವರು, ಅದೇ ರೀತಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಗೆಲ್ಲಬಾರದೆಂದು ಬಿಜೆಪಿಯವರು ಪಣತೊಟ್ಟು ಹೋರಾಟ ಮಾಡುತ್ತಿದ್ದು ನಿರೀಕ್ಷಿತ ಫಲಿತಾಂಶಕ್ಕಿಂತ ಅನಿರೀಕ್ಷಿತ ಫಲಿತಾಂಶ ಬರುವ ಸಾಧ್ಯತೇ ಹೆಚ್ಚಿದೆ.
ಅಭ್ಯರ್ಥಿಗಳ ಪ್ಲಸ್, ಮೈನಸ್ ಪಾಯಿಂಟ್-
ಹಾಲಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್: ಊರುಗೊಲ್ಲ ಸಮುದಾಯಕ್ಕೆ ಸೇರಿದ ಮಹಿಳಾ ಚುನಾಯಿತ ಪ್ರತಿನಿಧಿ. 2018ರ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಪರವಾಗಿಲ್ಲ ಎಂಬಂತೆ ಕೆಲಸ ಮಾಡಿರುವುದು ವಿಶೇಷ. ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಇಲ್ಲದೇ ಇರುವುದು, ಧರ್ಮಪುರ ಕೆರೆಗೆ ಏತ ನೀರಾವರಿ ಯೋಜನೆ ಮೂಲಕ ಭರ್ತಿ ಮಾಡಲು ಕಾಮಗಾರಿ ಆರಂಭಿಸಿರುವುದು ಇವರಿಗೆ ಚುನಾವಣೆಯಲ್ಲಿ ಮತ ಸೆಳೆಯಲು ಪ್ಲಸ್ ಪಾಯಿಂಟ್ ಆಗಿದೆ. ಇವರು ಊರುಗೊಲ್ಲ ಸಮಾಜದವರಾಗಿದ್ದರೂ ಕಾಡುಗೊಲ್ಲ ಸಮಾಜ ಇವರನ್ನೇ ನಮ್ಮವರೆಂದು ಸಂಪೂರ್ಣ ಬೆಂಬಲಕ್ಕೆ ನಿಂತಿರುವುದು, ಒಂದಿಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ಇವರಿಗೆ ಪ್ಲಸ್ ಪಾಯಿಂಟ್ ಆಗಿದೆ.
ಇನ್ನು ಮೈನಸ್ ಅಂಶವೆಂದರೆ, ಆಡಳಿತ ವಿರೋಧಿ ಅಲೆ, ಶೇ.40 ಕಮಿಷನ್ ಸರ್ಕಾರ ಎನ್ನುವ ಆರೋಪ, ಪತಿ ಡಿ.ಟಿ.ಶ್ರೀನಿವಾಸ್ ಅವರು ಪತ್ನಿ ಅಧಿಕಾರದಲ್ಲಿ ಮಾಡಿದ ಹಸ್ತಕ್ಷೇಪ, ಕಾಡುಗೊಲ್ಲ ಸಮಾಜಕ್ಕೆ ಎಸ್ಟಿ ಮೀಸಲಾತಿ ತಪ್ಪಿಸಿದರು ಮತ್ತು ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ತಡೆಯೊಡ್ಡಿದರು ಎನ್ನುವ ಆರೋಪ, ಕಾಡುಗೊಲ್ಲರಿಗೆ ಹೆಚ್ಚಿನ ಆದ್ಯತೆ ನೀಡಿ ಹಟ್ಟಿಗಳಿಗೆ ಮೂಲ ಸೌಲಭ್ಯ ಕಲ್ಪಿಸಿರುವುದು, ಇತರೆ ಜಾತಿ, ಜನಾಂಗಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು, ಇವರ ಗೆಲುವಿಗಾಗಿ ದುಡಿದವರನ್ನು ನಿರ್ಲಕ್ಷ್ಯಸಿರುವುದು, ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳಲ್ಲ, ಪತಿ ಶ್ರೀನಿವಾಸ್ ಮಾತಿನಂತೆ ತೀರ್ಮಾನ ಆಗಲಿದೆ ಎಂಬುದು, ಅಟ್ರಾಸಿಟಿ ಪ್ರಕರಣ ದಾಖಲು, ತಮಿಳು ಸಮುದಾಯದ ಉದ್ಯಮಿ ಮೇಲೆ ಹಲ್ಲೆ ಮಾಡಿದ ಸಂದರ್ಭದಲ್ಲಿ ಸಂತ್ರಸ್ತರ ಪರ ನಿಲ್ಲಲಿಲ್ಲ ಎನ್ನುವ ಆರೋಪ, ಹೊರಗಿನವರು ಎನ್ನುವುದು ಇವರ ಮೈನಸ್ ಪಾಯಿಂಟ್ ಆಗಿದೆ.
ಡಿ.ಸುಧಾಕರ್: ಹಿರಿಯ ರಾಜಕಾರಣಿ, ಮಾಜಿ ಸಚಿವರು, ಕಾಂಗ್ರೆಸ್ ಪಕ್ಷದ ಹಿನ್ನೆಲೆ ಇವರಿಗೆ ವರದಾನವಾಗಲಿದೆ. 2018ರಲ್ಲಿ ಸೋಲು ಕಂಡರೂ ಅಂದಿನಿಂದಲೂ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂಧಿಸಿ ಕೆಲಸ ಮಾಡಿದ್ದು, ಕೊರೊನಾ ಸಂದರ್ಭದಲ್ಲಿ ನೆರವು ನೀಡಿದ್ದು, ಕಾಡುಗೊಲ್ಲ ಮತ್ತು ಕುಂಚಿಟಿಗ ಸಮಾಜದ ಸಾಕಷ್ಟು ಮುಖಂಡರುಗಳು ಕಾಂಗ್ರೆಸ್ ಪಕ್ಷ ಬೆಂಬಲಿಸಿರುವುದು, ಜೈನ ಸಮಾಜದ ಅಲ್ಪಸಂಖ್ಯಾತರಾಗಿರುವುದು, ದೊಡ್ಡ ಸಂಖ್ಯೆಯಲ್ಲಿ ಇವರ ಸಮಾಜ ಇಲ್ಲದಿರುವುದು ಇವರ ಪ್ಲಸ್ ಪಾಯಿಂಟ್ ಆಗಿದೆ.
ಸುಧಾಕರ್ ಅವರ ನಕಾರಾತ್ಮಕ ಅಂಶಗಳೆಂದರೆ, ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಗೆ ಎಂಎಲ್ಸಿ ಚುನಾವಣೆಯಲ್ಲಾದ ಸೋಲು ಮತ್ತು ಸೋಮಶೇಖರ್ ಮೇಲೆ ಹಲ್ಲೆ ಮಾಡಿಸಿದ ಆರೋಪ, ಹೊಸದುರ್ಗ ಕ್ಷೇತ್ರದಲ್ಲಿ ಸುಧಾಕರ್ ಶಿಷ್ಯ ಮಂಜುನಾಥ್ ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ಗೋವಿಂದಪ್ಪನವರ ಸೋಲು ಬಯಸುತ್ತಿರುವ ಆರೋಪ, ಹಿರಿಯೂರು ರೈತರನ್ನು ಕಡೆಗಣಿಸಿ ಚಳ್ಳಕೆರೆಗೆ ವಿವಿ ಸಾಗರದ ನೀರು ತೆಗೆದುಕೊಂಡು ಹೋಗಿದ್ದರಿಂದಲೇ ತೋಟಗಳು ಒಣಗಿ ಹೋಗಿ ರೈತರ ಬೀದಿಗೆ ಬೀಳಲು ಸುಧಾಕರ್ ಅವರ ತೀರ್ಮಾನಗಳು ಕಾರಣ ಎನ್ನುವ ಆರೋಪ, ಹೊರಗಿನವರು ಎಂಬ ದೂರು, ಎಲ್ಲರಿಗೂ ಸ್ಪಂದಿಸಲ್ಲ, ಹಿರಿ-ಕಿರಿಯರಿಗೆ ಗೌರವ ನೀಡಲ್ಲ ಎಂಬ ಆರೋಪ, ಅಲ್ಲದೇ ಎಲ್ಲಕ್ಕಿಂತ ಮುಖ್ಯವಾಗಿ ಕಾಡುಗೊಲ್ಲರ ನಡೆ ಸುಧಾಕರ್ ಕಡೆ ಅಭಿಯಾನ, ಕುಂಚಿಟಿಗ ಒಕ್ಕಲಿಗರ ನಡೆ ಡಿಕೆಶಿ ಕಡೆ ಅಭಿಯಾನ ಮಾಡಿಸಿ ಕಾಡುಗೊಲ್ಲ ಮತ್ತು ಕುಂಚಿಟಿಗರು ಇವರು ಒಗ್ಗೂಡುವಂತೆ ಮಾಡಿದ್ದು, ಕ್ಷೇತ್ರದಲ್ಲಿ ಇವರ ಹತ್ತು ವರ್ಷ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಆಗಿಲ್ಲ, ತೀವ್ರ ಬರ ಕಾಡಿದ್ದು, ಕಾಂಗ್ರೆಸ್ ಮುಖಂಡರ ಒಳ ಹೊಡೆತ ಇವುಗಳು ಇವರ ಮೈನಸ್ ಪಾಯಿಂಟ್ ಆಗಿದೆ.
ಮುಂಗಸವಳ್ಳಿ ಎಂ.ರವೀಂದ್ರಪ್ಪ: ಜೆಡಿಎಸ್ ಮೂರು ಬಾರಿ ಕ್ಷೇತ್ರದಲ್ಲಿ ಸೋತ ಅನುಕಂಪ, ಜೆಡಿಎಸ್ ಪಕ್ಷಕ್ಕೆ ಒಮ್ಮೆ ಅವಕಾಶ ನೀಡಿ ಎಂದು ಮುಖಂಡರು ಬೇಡುತ್ತಿರುವುದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಷಡ್ಯಂತ್ರದಿಂದಲೇ ಐಟಿ ದಾಳಿ ಆಗಿದೆ ಎನ್ನುವ ಆರೋಪ, ವೇದಾವತಿ ನದಿಗೆ ಅಡ್ಡಲಾಗಿ 14 ಬ್ಯಾರೇಜ್ ನಿರ್ಮಾಣದಲ್ಲಿನ ಪ್ರಮುಖ ಪಾತ್ರ, ಇವರ ಸರಳತನ, ಮುಗ್ದತೆ, ಜೆಡಿಎಸ್ ಧೂಳಿನಿಂದ ಎದ್ದಿರುವುದು, ಮುಖಂಡರುಗಳ ಒಗ್ಗಟ್ಟು, ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳು, ಪ್ರತಿ ಎಕರೆಗೆ 10 ಸಾವಿರ ರೂ. ಸಹಾಯಧನ, ಮಹಿಳಾ ಸಂಘಗಳ ಸಾಲ ಮನ್ನಾ, ರೈತರ ಸಾಲ ಮನ್ನಾ, 60 ವರ್ಷದ ವಯೋವೃದ್ಧರಿಗೆ ಪ್ರತಿ ತಿಂಗಳು 5 ಸಾವಿರ ಪಿಂಚಣಿ ಸೇರಿದಂತೆ ಮತ್ತಿತರ ಭರವಸೆಗಳು ಇವರಿಗೆ ಪ್ಲಸ್ ಪಾಯಿಂಟ್ ಆಗಿದೆ.
ಮೈನಸ್ ಅಂಶವೆಂದರೆ, ವಿಳಂಬವಾಗಿ ಟಿಕೆಟ್ ಘೋಷಣೆ ಮಾಡಿದ್ದು, ಕುಂಚಿಟಿಗ ಅಲಿಯಾಸ್ ಒಕ್ಕಲಿಗ ಜಾತಿಯ ಕೆಲ ಮುಖಂಡರು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಗುರುತಿಸಿಕೊಂಡಿರುವುದು, ಗಂಭೀರವಾದ ವಿಷಯಗಳ ಕುರಿತು ನಿರ್ಲಕ್ಷ್ಯ ಮಾಡುತ್ತಿರುವುದು, ಇವರು ಒಬ್ಬ ಅಧಿಕಾರಿಯಾಗಿರುವುದು, ಕ್ಷೇತ್ರದ ಕೆಲ ಭಾಗದ ಬೂತ್ ಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಕಾರ್ಯಕರ್ತರು ಇಲ್ಲದಿರುವುದು, ನಗರದಲ್ಲಿ ಜೆಡಿಎಸ್ ಹಿಡಿತ ಕಳೆದುಕೊಂಡಿರುವುದು ಮತ್ತಿತರ ವಿಷಯಗಳು ಮುಖ್ಯವಾಗಿದೆ.
ಜಾತಿ ಲೆಕ್ಕಾಚಾರ ಏನು?
ಹಿರಿಯೂರು ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿ ದಲಿತರು(ಎಸ್ಸಿ), ಕಾಡುಗೊಲ್ಲ, ಕುಂಚಿಟಿಗರು ಸಮ ಪ್ರಮಾಣದಲ್ಲಿದ್ದು ತಲಾ 40-45 ಸಾವಿರದಷ್ಟು ಮತಗಳಿವೆ. ಎರಡನೇ ಸ್ಥಾನದಲ್ಲಿ ಮುಸ್ಲಿಂರು, 3ನೇ ಸ್ಥಾನದಲ್ಲಿ ವಾಲ್ಮೀಕಿ, ಭೋವಿ, ಕುರುಬರು, ಉಪ್ಪಾರ, ಲಂಬಾಣಿ, ಲಿಂಗಾಯತ ಸೇರಿದಂತೆ ಮತ್ತಿತರ ಕಡಿಮೆ ಮತದಾರರುವ ಜಾತಿಗಳವರಿದ್ದಾರೆ.