i
ಜಾತಿ, ಧರ್ಮ, ಬೇಧ ಮರೆತು ಜೆಡಿಎಸ್ ಪಕ್ಷವನ್ನು ಬೆಂಬಲಿಸಿ-ಯಶೋಧರ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹೊರಗಿನವರೇ ಹಿರಿಯೂರು ಬಿಟ್ಟು ತೊಲಗಿ ಎಂಬ ಸಂಕಲ್ಪದೊಂದಿಗೆ ಈ ಬಾರಿ ಜಾತಿ, ಧರ್ಮ, ಬೇಧ ಮರೆತು ಜೆಡಿಎಸ್ ಪಕ್ಷದ ಮಣ್ಣಿನ ಮಕ್ಕಳನ್ನು ಗೆಲ್ಲಿಸುವ ಸಂಕಲ್ಪ ಮಾಡಿ ಎಂದು ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ. ಯಶೋಧರ್ ಕರೆ ನೀಡಿದರು.
ನಗರದ ಆರನೇ ವಾರ್ಡಿನಲ್ಲಿ ಪಕ್ಷದ ಅಭ್ಯರ್ಥಿ ಎಂ ರವೀಂದ್ರಪ್ಪನವರ ಪರವಾಗಿ ಚುನಾವಣೆ ಪ್ರಚಾರ ಮಾಡುತ್ತಾ ಅವರು ಮಾತನಾಡಿದರು. ಜೆಡಿಎಸ್ ಪಕ್ಷ ಈ ನೆಲದ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡಿರುವ ಪಕ್ಷ. ನಮ್ಮ ಜನರ ಉಳಿವು ಮತ್ತು ಅಭಿವೃದ್ಧಿಗಾಗಿ ನೆಲೆ ನಿಂತ ಪಕ್ಷ. ಬರೀ ಹೊರಗಿನಿಂದ ಬಂದ ಜನರನ್ನು ಆರಿಸುವ ಬದಲು ಸ್ಥಳೀಯ ಮನೆ ಮಗನನ್ನು ಒಮ್ಮೆ ಆರಿಸುವುದರ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿಗೆ ನೀವೂ ಕಾರಣರಾಗಿ. ಚುನಾವಣೆಯ ಹಿಂದಿನ ದಿನ ರಾಷ್ಟ್ರೀಯ ಪಕ್ಷಗಳು ಮಾಡುವ ತಂತ್ರ, ಕುತಂತ್ರಗಳಿಗೆ ನಾವು ಇಷ್ಟು ವರ್ಷ ಬಲಿಯಾಗುತ್ತಾ ಬಂದೆವು. ಆದರೆ ಈ ಬಾರಿ ನಾವು ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ. ಅವರ ತಂತ್ರಗಳಿಗೆ ಪ್ರತಿತಂತ್ರ ರೂಪಿಸಿ ಚುನಾವಣೆ ಮಾಡುತ್ತೇವೆ. ನಾವು ಅವರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂಬುದನ್ನು ಸಾಬೀತು ಮಾಡುತ್ತೇವೆ. ಮತದಾರ ಬಂಧುಗಳು ಮನಸು ಮಾಡಿ ಸತತವಾಗಿ ಹದಿನೈದು ವರ್ಷ ಕೊಟ್ಟ ಶಿಕ್ಷೆಯಿಂದ ನಮ್ಮನ್ನು ಪಾರು ಮಾಡಿ ಎಂದರು.
ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪ ಮಾತನಾಡಿ ಮತದಾರ ಪ್ರಭುಗಳು ಜೆಡಿಎಸ್ ಪಕ್ಷದತ್ತ ಮುಖ ಮಾಡಿದ್ದು ಈ ಬಾರಿ ತಾಲೂಕು ಸೇರಿದಂತೆ ರಾಜ್ಯದಲ್ಲಿ ಪಕ್ಷ ಅದ್ಭುತ ಯಶಸ್ಸು ಗಳಿಸಲಿದೆ. ಕುಮಾರಣ್ಣನವರು ಮುಖ್ಯಮಂತ್ರಿಯಾಗಿ ಅವರ ಕನಸಿನ ಪಂಚರತ್ನ ಯೋಜನೆಗಳು ಜಾರಿಯಾದರೆ ಬಡವರ ಬದುಕು ಹಸನಾಗುತ್ತದ್ದೆ. ಹಾಗಾಗಿ ಈ ಬಾರಿ ಜಾತಿ, ಧರ್ಮ, ಬೇಧ ಮರೆತು ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ವೈಪಿಡಿ ದಾದಾಪೀರ್, ಜೆಡಿಎಸ್ ನಗರಾಧ್ಯಕ್ಷ ಎಂ ಡಿ ಫಾರುಖ್, ಮುಬಾರಕ್ ಫಿಲ್ಟು, ಓoಕಾರಪ್ಪ, ಎಂ ಡಿ ರಮೇಶ್, ಕೇಶವಮೂರ್ತಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.