i
ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ ಪ್ರೌಢ ಶಾಲೆಯ ಶಿಕ್ಷಕ ಬಂಧನ…
ಚಂದ್ರವಳ್ಳಿ ನ್ಯೂಸ್, ಗುಲ್ಬರ್ಗ (ಅಫಜಲಪುರ):
ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದೆ. ಗುಲ್ಬರ್ಗ ಜಿಲ್ಲೆಯ ಅಫಜಲಪುರ ತಾಲೂಕಿನ ಹಾವನೂರಿನ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಚಿದಾನಂದ ಮೇತ್ರೆ ಬಂಧನಕ್ಕೊಳಗಾದ ಆರೋಪಿಯಾಗಿದ್ದಾರೆ. ಚಿದಾನಂದ ಅವರು, ಗುಲ್ಬರ್ಗ-ದಕ್ಷಿಣದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದು, ಮತದಾರರಿಗೆ ಟೋಕನ್ ವಿತರಿಸುತ್ತಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಬಿಜೆಪಿ ಪರ ಮತದಾನ ಮಾಡಿದ ಬಳಿಕ ಟೋಕನ್ ವಾಪಸ್ ನೀಡಿ ಹಣ ಪಡೆದುಕೊಳ್ಳುವಂತೆ ಚಿದಾನಂದ ಅವರು ಮತದಾರರಿಗೆ ತಿಳಿಸುತ್ತಿದ್ದು, ಇದನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರು ಆತನನ್ನು ಹಿಡಿದು ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಭೀಮರಾಯ ಅವರು, ಟೋಕನ್ ಸಮೇತ ಚಿದಾನಂದ ಅವರನ್ನು ಬ್ರಹ್ಮಪುರ ಠಾಣೆ ಪೊಲೀಸರ ಬಳಿ ಕರೆದೊಯ್ದಿದ್ದು, ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಚಿದಾನಂದ್ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಿದ್ದಾರೆ. ನಂತರ ಚಿದಾನಂದ ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.