i
ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು, ಬೆಟ್ಟಿಂಗ್ ಶುರು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕುರುಡು ಕಾಂಚಾಣದೊಂದಿಗೆ ಅಬ್ಬರದಿಂದ ಆರಂಭವಾದ ವಿಧಾನಸಭಾ ಚುನಾವಣೆಯ ಭರಾಟೆ, ಮತದಾರರ ಮನವೊಲಿಸಲು ನಡೆಸಿದ ಕಸರತ್ತು, ಕ್ಷೇತ್ರಗಳಲ್ಲಿ ಎಗ್ಗಿಲ್ಲದೆ ಸದ್ದು ಮಾಡಿದ ಕುರುಡು ಕಾಂಚಾಣದೊಂದಿಗೆ ಚುನಾವಣೆ ಮುಗಿದಿದ್ದು ಫಲಿತಾಂಶಕ್ಕಾಗಿ ಮೇ-13ರವರೆಗೆ ಕಾಯಬೇಕು. ಇದರ ಮಧ್ಯ ಅಭ್ಯರ್ಥಿಗಳು ಬೂತ್ ಮಟ್ಟದಲ್ಲಿ ನಮಗೆ ಎಷ್ಟು ಮತಗಳು ಬರಬಹುದು, ನಮ್ಮ ಗೆಲುವಿನ ಅಂಶಗಳೇನು, ಒಂದು ವೇಳೆ ಸೋತರೆ ಎಲ್ಲಿ ಎಡವಲಾಯಿತು ಎನ್ನುವ ಲೆಕ್ಕಾಚಾರದಲ್ಲಿದ್ದರೆ ಉತ್ಸಾಹದಿಂದ ಕೆಲಸ ಮಾಡಿದ ಮುಖಂಡರು, ಕಾರ್ಯಕರ್ತರುಗಳು ನಾವೇ ಗೆದ್ದಿದ್ದೇವೆ ಎಂದು ಬೆಟ್ಟಿಂಗ್ ಕಟ್ಟುತ್ತಿರೋ ಕಟ್ಟಿ ಎನ್ನುವ ಪಂಥಾಹ್ವಾನ ನೀಡುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ.
ಜಾತಿಗಳ ವಿಷಬೀಜ ಬಿತ್ತುವುದರಿಂದ ಹಿಡಿದು ಪ್ರತಿಸ್ಪರ್ಧಿಗಳನ್ನು ಹಿಮ್ಮೆಟ್ಟಿಸುವ ತಂತ್ರಗಾರಿಕೆಯನ್ನು ಹೆಣೆಯುವುದರಲ್ಲೂ ನಿಸ್ಸೀಮರಾದ ಕೆಲ ಪಕ್ಷಗಳ ರಾಜಕೀಯ ಮುಖಂಡರು ಮತ್ತು ಬೆಂಬಲಿಗರು ರಾಜಕೀಯ ತಂತ್ರ ಹೆಣೆಯುವುದನ್ನು ಕರಗತ ಮಾಡಿಕೊಂಡಿರುತ್ತಾರೆ.
ಚುನಾವಣೆಯ ಕಣದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯ ವ್ಯಕ್ತಿತ್ವ, ಕಾರ್ಯ ಸಾಧನೆ ಹಾಗೂ ಗುಣವಂತಿಕೆ ನೋಡಿ ಮತ ಚಲಾವಣೆ ಮಾಡಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಮತದಾರರನ್ನೂ ಭ್ರಷ್ಟರನ್ನಾಗಿಸುವ ಇಂದಿನ ರಾಜಕೀಯ ವ್ಯವಸ್ಥೆ ಚುನಾವಣೆಯಲ್ಲೂ ಮೇಳೈಸಿದ್ದು ನಿಜಕ್ಕೂ ವಿಪರ್ಯಾಸವೇ ಸರಿ. ಹಣ, ಹೆಂಡವನ್ನು ಸುರಿದು, ಮನೆ ಮನೆಗೂ ನೋಟಿನ ಕಂತೆಗಳನ್ನೇ ಹಂಚಿಕೆ ಮಾಡಿದ್ದಲ್ಲದೆ, ಚಿನ್ನ-ಬೆಳ್ಳಿಯ ಉಡುಗೊರೆಗಳನ್ನು ನೀಡಿರುವುದು ದಾಖಲಾಗಿದೆ. ದಿನ ನಿತ್ಯವೂ ಬಿರಿಯಾನಿ, ಬಾಡೂಟ, ಹಣ, ಹೆಂಡದ ಹೊಳೆಯೇ ಹರಿಸಲಾಯಿತಲ್ಲದೇ ಮತದಾರರನ್ನೂ ಅಮಿಷಕ್ಕೊಳಪಡಿಸಲಾಯಿತು. ಗೆಲ್ಲಬೇಕೆಂಬ ಹಠದಿಂದ ಆರ್ಥಿಕವಾಗಿ ದುರ್ಬಲವಿದ್ದ ಅಭ್ಯರ್ಥಿಗಳು ಕೂಡಾ ಸಾಲ ಮಾಡಿ ಹಣ ತಂದು ಮರ್ಯಾದೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದು ಈ ಚುನಾವಣೆಯ ಮತ್ತೊಂದು ಮುಖವಾಗಿತ್ತು.
ಒಟ್ಟಾರೆ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಹಾಗೂ ಜೆ.ಡಿ.ಎಸ್, ಬಿ.ಜೆ.ಪಿ ಪಕ್ಷಗಳ ಅಭ್ಯರ್ಥಿಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಕೂಡಾ ತೀವ್ರ ಪ್ರಯತ್ನ ಮಾಡಿದ್ದಾರೆ.