i
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಮೂಲ ದಾಖಲೆಗಳ ಪರಿಶೀಲನೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯಲ್ಲಿ 1:1 ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ 2022ರ ಸಂಬಂಧ ಮೂಲ ದಾಖಲೆಗಳ ನೈಜತೆ ಪರಿಶೀಲನಾ ಕಾರ್ಯ ಇದೇ ಮೇ 16 ರಿಂದ 18 ರವರೆಗೆ ಚಿತ್ರದುರ್ಗ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ 6 ರಿಂದ 8 ನೇ ತರಗತಿ ನೇಮಕಾತಿ –2022ರ ಸಂಬಂಧ 2023ರ ಮಾರ್ಚ್ 8 ರಂದು ಪ್ರಕಟಿಸಲಾದ ಅಂತಿಮ ಆಯ್ಕೆಪಟ್ಟಿಯಲ್ಲಿ ಪ್ರಕಟಿಸಲಾಗಿರುವ 1:1 ಆಯ್ಕೆಗೊಂಡ ಅಭ್ಯರ್ಥಿಗಳ ಮೂಲ ದಾಖಲೆಗಳ ನೈಜತೆ ಪರಿಶೀಲನೆ ಕಾರ್ಯ ನಡೆಯಲಿದೆ. ಈ ಹಿನ್ನಲೆಯಲ್ಲಿ ಅಂಕಪಟ್ಟಿಗಳ ನೈಜತೆ ಪರಿಶೀಲನೆಗೆ ಪರೀಕ್ಷಾ ಮಂಡಳಿಗಳಿಗೆ (ಎಸ್.ಎಸ್.ಎಲ್.ಸಿ & ಡಿಇಡಿ, ಪಿ.ಯು.ಸಿ, ಪದವಿ, ಬಿಇಡಿ ಅಂಕಪಟ್ಟಿಗಳ) ನೈಜತೆ ಬಗ್ಗೆ ಆಯಾ ವಿಶ್ವವಿದ್ಯಾನಿಲಯಗಳು, ಮಂಡಳಿಗಳು ನಿಗದಿತ ಶುಲ್ಕ ನಿಗದಿ ಮಾಡಿರುತ್ತಾರೆ. ಅದಕ್ಕೆ ಅಭ್ಯರ್ಥಿಗಳೇ ಶುಲ್ಕ ಭರಿಸ ಬೇಕಾಗಿರುತ್ತದೆ.
ಆದ್ದರಿಂದ 1:1 ಅಂತಿಮ ಆಯ್ಕೆಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿಗಳು ವ್ಯಾಸಂಗ ಮಾಡಿದ ವಿಶ್ವ ವಿದ್ಯಾಲಯಗಳನ್ನು ಸಂಪರ್ಕಿಸಿ ಅಂಕಪಟ್ಟಿಗಳ ನೈಜತೆ ಪರಿಶೀಲನೆಗೆ ನಿಗದಿಪಡಿಸಿದ ಶುಲ್ಕ ಭರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿಗೆ ಮೂಲ ದಾಖಲೆಗಳನ್ನು ಸಲ್ಲಿಸುವ ಸಂದಂರ್ಭದಲ್ಲಿ ಶುಲ್ಕ ಪಾವತಿಸಿದ ಚಲನ್ ಪ್ರತಿಯನ್ನು ಸಲ್ಲಿಸಲು ತಿಳಿಸಲಾಗಿದೆ.
1:1 ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಮೇ.16 ರಿಂದ ಮೇ.18 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಆಯುಕ್ತರ ಕಛೇರಿಯಿಂದ ನೀಡಿರುವ ಸೂಚನೆಗಳನ್ವಯ, ವೇಳಾಪಟ್ಟಿಯನುಸಾರ, ಪಟ್ಟಿಯಲ್ಲಿರುವ ಅಭ್ಯರ್ಥಿಗಳುವಮೂಲ ದಾಖಲೆಗಳೊಂದಿಗೆ (ಗೆಜೆಟೆಡ್ ಅಧಿಕಾರಿಗಳ ಧೃಢೀಕರಣದೊಂದಿಗೆ ) ಹಾಜರುಪಡಿಸಬೇಕೆಂದು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.
ವೇಳಾಪಟ್ಟಿ ವಿವರ ಇಂತಿದೆ. ಮೇ.16ರಂದು ಬೆಳಿಗ್ಗೆ 10 ರಿಂದ 5.30ರವರೆಗೆ ಆಂಗ್ಲ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮಸಂಖ್ಯೆ 01 ರಿಂದ 49 ರವರೆಗೆ, ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಸಂಖ್ಯೆ 01 ರಿಂದ 26 ಹಾಗೂ ಜೀವ ವಿಜ್ಞಾನಕ್ಕೆ ಸಂಬಂಧಿಸಿದಂತೆ ಕ್ರಮ ಸಂಖ್ಯೆ 01 ರಿಂದ 46 ರವರೆಗೆ ಮೂಲ ದಾಖಲೆಗಳ ನೈಜತೆ ಪರಿಶೀಲನೆ ನಡೆಯಲಿದೆ.
ಮೇ.17ರಂದು ಬೆಳಿಗ್ಗೆ 10 ರಿಂದ 5.30 ರವರೆಗೆ ವಿಜ್ಞಾನ ಮತ್ತು ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಸಂಖ್ಯೆ 01 ರಿಂದ 90 ರವರೆಗೆ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ. ಮೇ.18ರಂದು ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ವಿಜ್ಞಾನ ಮತ್ತು ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಸಂಖ್ಯೆ 91 ರಿಂದ 172 ರವರೆಗೆ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯ ದೂರವಾಣಿ ಸಂಖ್ಯೆ 08194-222259, ನೇಮಕಾತಿ ನೋಡಲ್ ಅಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ದೂರವಾಣಿ ಸಂಖ್ಯೆ 7760604054ಗೆ ಸಂಪರ್ಕಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ ರೆಡ್ಡಿ ತಿಳಿಸಿದ್ದಾರೆ.