i
ಕಾಂಗ್ರೆಸ್ ಉಚಿತ ಗ್ಯಾರಂಟಿ ಕಾರ್ಡ್ ಗಳಿಗೆ ಶರತ್ತು ಅನ್ವಯ-ಪರಮೇಶ್ವರ್…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮತದಾರರಿಗೆ ನೀಡಿದಂತಹ ಉಚಿತ ಗ್ಯಾರಂಟಿಗಳಿಗೆ ಷರತ್ತುಗಳನ್ನು ವಿಧಿಸಲಾಗುವುದು ಎಂದು ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ ಪರಮೇಶ್ವರ್ ಹೇಳುವ ಮೂಲಕ ಮತದಾರರಲ್ಲಿ ಅಸಮಾಧಾನ ಮೂಡಲು ಕಾರಣವಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸುಮ್ಮನೆ ಎಲ್ಲರಿಗೂ ಉಚಿತವಾಗಿ ಕೊಡಲು ಆಗಲ್ಲ, ಅದಕ್ಕೆ ಷರತ್ತುಗಳು ಇರಲಿವೆ, ಆಯಾ ಇಲಾಖೆ ಸಚಿವರ ಜೊತೆ ಚರ್ಚೆ ಮಾಡಿ ಅದನ್ನು ನಿರ್ಧರಿಸಲಾಗುವುದು, ಇಲ್ಲವಾದಲ್ಲಿ ಅದರ ದುರ್ಬಳಕೆ ಹೆಚ್ಚಾಗುತ್ತದೆ ಎಂದು ತಿಳಿಸುವ ಮೂಲಕ ಮತದಾರರಿಗೆ ಶಾಕ್ ನೀಡಿದ್ದಾರೆ.
ಚುನಾವಣಾ ಪ್ರಚಾರಸಭೆಗಳಲ್ಲಿ ಸಿದ್ದರಾಮಯ್ಯ ಮಾತನಾಡುವ ಸಂದರ್ಭದಲ್ಲಿ ನನಗೂ ಸೇರಿದಂತೆ ರಾಜ್ಯದ ಎಲ್ಲರಿಗೂ 200 ಯೂನಿಟ್ ಉಚಿತ ಕರೆಂಟ್ ನೀಡುತ್ತೇವೆಂದು ಭಾಷಣ ಮಾಡಿದ್ದರು. ಆದರೆ ಈಗ ಪರಮೇಶ್ವರ್ ಶರತ್ತುಗಳು ಅನ್ವಯ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಗಳ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ನೀಡಿದ್ದಾರೆ.
ಮುಂದುವರೆದ ಮಾತನಾಡಿದ ಪರಮೇಶ್ವರ್, ಕಾಂಗ್ರೆಸ್ ಪ್ರಮುಖವಾಗಿ 5 ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆ. ಅದನ್ನು ಮೊದಲ ಕ್ಯಾಬಿನೆಟ್ ನಲ್ಲೇ ಈಡೇರಿಸೋ ಭರವಸೆ ಕೊಟ್ಟಿದ್ದೇವೆ, ಅದಕ್ಕೆ ನಾವು ಬದ್ಧರಾಗಿ ಇರುತ್ತೇವೆ ಎಂದ ಅವರು, ಗ್ಯಾರಂಟಿಗಳನ್ನ ಪ್ರಾಕ್ಟಿಕಲ್ ಆಗಿ ವರ್ಕ್ ಮಾಡಿ ಜಾರಿ ಮಾಡುತ್ತೇವೆ. ಹಾಗೇ ಸುಮ್ಮನೆ ಕೊಟ್ಟರೆ ಎಲ್ಲರೂ ತಗೋತಾರೆ. ಗ್ಯಾರಂಟಿಗಳಿಗೆ ಮಾನದಂಡ ಇರುತ್ತೆ ಎಂದು ಪರಮೇಶ್ವರ್ ಹೇಳಿದರು.
ಶರತ್ತುಗಳೆಂದರೆ ಉದ್ಯೋಗಿಗಳು, ಐಟಿ ಕಟ್ಟುವವರು, ಹತ್ತಾರು ಎಕರೆ ಜಮೀನು ಹೊಂದಿರುವವರು, ಖಾಸಗಿ ಕಂಪನಿಗಳಲ್ಲಿ ಕೈತುಂಬ ವೇತನ ಪಡೆಯುತ್ತಿರುವವರು ಗ್ಯಾರಂಟಿ ಕಾರ್ಡ್ ಯೋಜನೆಯಿಂದ ಹೊರಗುಳಿಯುವ ಸಾಧ್ಯತೆ ಇದ್ದು ಕೇವಲ ಬಿಪಿಎಲ್ ಕುಟುಂಬಗಳಿಗೆ ಗ್ಯಾರಂಟಿ ಕಾರ್ಡ್ ಗಳನ್ನು ಸೌಲಭ್ಯ ನೀಡುವ ಸಾಧ್ಯತೆ ಇದೆ.