i
ನಡು ರಾತ್ರಿ ಸಿಎಂ ಹುದ್ದೆ ಫೈಟ್ ಅಂತ್ಯ, ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಆಯ್ಕೆ…
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಸಿಎಂ ಹುದ್ದೆಗಾಗಿ ನಡೆದ ಭೀಕರ ಕದನ ಅಂತ್ಯವಾಗಿದೆ. ಫಲಿತಾಂಶ ಬಂದು ಐದು ದಿನಗಳ ನಂತರ ಸಿಎಂ ಹುದ್ದೆ ಬಿಕ್ಕಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆದಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಪುತ್ರಿ ಪ್ರಿಯಾಂಕ ಗಾಂಧಿ ಅವರ ಮನವೊಲಿಕೆ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಡಿಕೆ ಶಿವಕುಮಾರ್ ಒಪ್ಪಿಗೆ ನೀಡಿದ್ದಾರೆ.
ಬುಧವಾರ ದಿನಪೂರ್ತಿ ಡಿಕೆಶಿ ಜೊತೆ ಹೈಕಮಾಂಡ್ ಮತ್ತು ಇತರೆ ರಾಷ್ಟ್ರ ಮಟ್ಟದ ಮುಖಂಡರು ಸರಣಿ ಸಭೆಗಳ ಮೂಲಕ ಮಾತುಕತೆ ನಡೆಸಿದರೂ ಸಿಎಂ ಹುದ್ದೆ ಬೇಡಿಕೆಯಿಂದ ಡಿಕೆಶಿ ಹಿಂದೆ ಸರಿದಿರಲಿಲ್ಲ. ತಡರಾತ್ರಿ ಶಿಮ್ಲಾದಲ್ಲಿರುವ ಸೋನಿಯಾ ಗಾಂಧಿ ದೂರವಾಣಿ ಮೂಲಕ ಡಿಕೆಶಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು ಕುರ್ಚಿ ಕಾದಾಟಕ್ಕೆ ಬ್ರೇಕ್ ಬಿದ್ದಿದೆ. ಸಿದ್ದರಾಮಯ್ಯ ಮೊದಲ ಅವಧಿಗೆ ಸಿಎಂ ಆಗಲಿದ್ದು ಡಿ.ಕೆ ಶಿವಕುಮಾರ್ ಎರಡನೇ ಅವಧಿಗೆ ಸಿಎಂ ಪಟ್ಟ ಅಲಂಕರಿಸಲಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಡಿಕೆ ಶಿವಕುಮಾರ್ ಡಿಸಿಎಂ ಮತ್ತು ಕೆಪಿಸಿಸಿ ಹುದ್ದೆಗಳ ಜೊತೆಯಲ್ಲಿ ಎರಡು ಪ್ರಬಲ ಖಾತೆಗಳನ್ನು ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ ಎನ್ನಲಾಗಿದೆ.
ಸಿಎಂ ಹುದ್ದೆ ಫೈಟ್ ತಾರ್ಕಿಕ ಅಂತ್ಯ ಕಾಣುತ್ತಿದ್ದಂತೆ ಡಿಕೆ ಶಿವಕುಮಾರ್ ಮೇ-18 ರಂದು ಸಂಜೆ 7 ಗಂಟೆಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು ಆ ಸಭೆಯಲ್ಲಿ ಸಿಎಂ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ.
ಕರ್ನಾಟಕದ ಜನರು ಕಾಂಗ್ರೆಸ್ಗೆ ಅತಿದೊಡ್ಡ ಸಂಖ್ಯೆ ನೀಡಿದ್ದಾರೆ. ಸಿಎಂ ಹುದ್ದೆಯ ಕಾದಾಟದಿಂದ ಪಕ್ಷಕ್ಕೆ ಡ್ಯಾಮೇಜ್ ಆಗುವುದು ಬೇಡ. ಪಕ್ಷಕ್ಕಾಗಿ ಮತ್ತೊಮ್ಮೆ ತ್ಯಾಗ ಮಾಡುವಂತೆ ಸೋನಿಯಾ ಗಾಂಧಿ ಅವರು ಡಿಕೆ ಶಿವಕುಮಾರ್ ಅವರಿಗೆ ಮನವೊಲಿಕೆ ಮಾಡಿದ್ದಾರೆ. ಸೋನಿಯಾ ಗಾಂಧಿ ನೀಡಿದ ಭರವಸೆ ಮೇಲೆ ಡಿಸಿಎಂ ಸ್ಥಾನಕ್ಕೆ ಡಿಕೆಶಿ ತೃಪ್ತರಾಗಿದ್ದಾರೆ ಎನ್ನಲಾಗಿದೆ.
ಮೇ-20 ರಂದು ಪ್ರಮಾಣ ವಚನ- ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಮೇ-20 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇತರೆ ಸಚಿವರುಗಳು ಮುಂದಿನ ಒಂದೆರಡು ದಿನಗಳ ನಂತರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.