i
ಹಬ್ಬಿದಾ ಮಲೆ ಮಧ್ಯದೊಳಗೆ ಅದೊಂದು ನೆನಪಿನ ಗಣಿ, ನಿಮ್ಮೊಳಗೊಬ್ಬ ಕುವೆಂಪು ಅಡಗಿರಬಹುದೆ?…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಬ್ಬಿದಾ ಮಲೆ ಮಧ್ಯದೊಳಗೆ ಮುನ್ನೂರ ನಲವತ್ತೊಂದು ಪುಟಗಳ ಕೃತಿ. ಇದು ಗ್ರಾಮ ಸಂಸ್ಕೃತಿ ಸಂಕಥನ. ಅಥವಾ ಗ್ರಾಮ ಚರಿತ್ರೆಯ ಸಂಪುಟವಾಗಿ ಕಂಡುಬರುತ್ತದೆ. ಈ ಸಂಕಥನ ಅಥವಾ ಚರಿತ್ರೆಯನ್ನು ನಿಖರವಾಗಿ ನಿರೂಪಿಸುವಾಗ ಯಾವುದೇ ಕಸರತ್ತು ನಡೆಸಿಲ್ಲ. ತುಂಬಾ ಲವಲವಿಕೆಯಿಂದ ಲೀಲಾಜಾಲವಾಗಿ ಮಸ್ತಕದಲ್ಲಿ ಇದ್ದುದನ್ನು ಪುಸ್ತಕಕ್ಕೆ ಇಳಿಸಿದ್ದೀರಿ.
ಎದೆಯ ಗೂಡಿನಲ್ಲಿ ಅವಿತಿದ್ದ ಅಲಿಖಿತ ಗೌನಹಳ್ಳಿಯ ಚರಿತ್ರೆ ಸಹಜ ಹೆರಿಗೆಯಂತೆ ಸಲೀಸಾಗಿ ಬರೆಯಲ್ಪಟ್ಟಿದೆ. ನಿಮ್ಮ ಸುದೀರ್ಘ ಬದುಕಿನಲ್ಲಿ ಕಂಡ ಕೇಳಿದ ಅನುಭವಿಸಿದ ಅನುಭಾವಿಸಿದ ಕಳೆದ ನೂರಿನ್ನೂರು ವರ್ಷಗಳ ಗೌನಹಳ್ಳಿಯ ಬದುಕನ್ನು ಸೊಗಸಾದ ಭಾಷೆಯಲ್ಲಿ ನಿರೂಪಣೆ ಮಾಡಿದ್ದೀರಿ. ನಿಮ್ಮ ನೆನಪಿನ ಶಕ್ತಿ ಅಪಾರ. ಅದೊಂದು ನೆನಪಿನ ಗಣಿ. ಹಾಗೆ ಕುಂಚಿಟಿಗ ಸಮಾಜದ ಸಂಕಥನವಾಗಿಯೂ ಕಂಡುಬರುತ್ತದೆ. ಮೂಲತಃ ಪಶುಪಾಲಕ ಗೋವಳಿ ಸಂಸ್ಕೃತಿಯ ಕೃಷಿಕರಾದ ಕುಂಚಿಟಿಗರು ಕುಂಚಿಟಿಗ ಲಿಂಗಾಯತರಾಗುವ ಸಾಮಾಜಿಕ ಪ್ರಕ್ರಿಯೆ ಮನಮಿಡಿಯುವಂತಿದೆ.
ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ರಾಮಾನುಜೀಯ ಮತ್ತು ಬಸವಾದಿ ಶರಣರ ಪ್ರಭಾವದ ಕಾರಣಕ್ಕೆ ಗೋವಳಿ ಸಂಸ್ಕೃತಿಯ ಕುಂಚಿಟಿಗರು ಕುಂಚಿಟಿಗ ವೈಷ್ಣವರ/ನಾಮಧಾರಿಗಳು ಮತ್ತು ಕುಂಚಿಟಿಗ ಲಿಂಗಾಯತರು ಆಗಿ ಮನೆಯೊಂದು ಮೂರು ಬಾಗಿಲು ಆದ ಕತೆ ನೋವಿಗೂ ಕಾರಣವಾಗಿದೆ. ಏನೇ ನೋವಾದರೂ ಕಾಲಕಾಲಕ್ಕೆ ಆಗುವ ಸಾಮಾಜಿಕ ಮತ್ತು ಧಾರ್ಮಿಕ ಪ್ರಕ್ರಿಯೆ, ಸ್ಥಿತ್ಯಂತರ, ಬದಲಾವಣೆಯನ್ನು ತಡೆಯಲಾಗದು. ಒಟ್ಟಾರೆ ನಿಮ್ಮ ಕೃತಿ ಮಲೆನಾಡಿನ ಕಾನೂರು ಹೆಗ್ಗಡತಿ ಕಾದಂಬರಿಯ ರೀತಿಯಲ್ಲಿ ಬಯಲುಸೀಮೆಯ ಕಾದಂಬರಿಯಂತೆ ಓದುಗರನ್ನು ಸೆಳೆದು ಅಪ್ಪಿಕೊಳ್ಳುತ್ತದೆ. ಅಸಾದ್ ಅವರ ರೇಖಾಚಿತ್ರಗಳು ಸಹ ಕೃತಿಗೆ ಪೂರಕವಾಗಿ ಮೂಡಿಬಂದಿವೆ. ನಿಮ್ಮೊಳಗೊಬ್ಬ ಬಯಲು ಸೀಮೆಯ ಕುವೆಂಪು ಅಡಗಿರಬಹುದೆ ? ಬರಹ, ಬರಹದ ಹೂರಣ, ಬರಹದ ತೋರಣ ಎಲ್ಲವೂ ವಿದ್ವತ್ತಿನಿಂದ ಕೂಡಿದೆ. ನಾನು ಕೃತಿಯನ್ನು ಹಿಡಿಯಾಗಿ ಓದಲು ಬಯಸುತ್ತೇನೆ.